ಮಂಗಳೂರು / ಪಡುಬಿದ್ರೆ, ಆಗಸ್ಟ್.16: ಮಂಗಳೂರು – ಉಡುಪಿ ರಾಷ್ಟ್ರೀಯ ಹೆದ್ದಾರಿ 66ರ ಹೆಜಮಾಡಿಯಲ್ಲಿರುವ ಟೋಲ್ ಬೂತ್ನಲ್ಲಿ ಸ್ಥಳೀಯ ವಾಹನ ಸವಾರರಿಂದ ಹಠಾತ್ತಾಗಿ ಟೋಲ್ ಸಂಗ್ರಹಕ್ಕೆ ಮುಂದಾಗಿರುವ ಕ್ರಮವನ್ನು ಖಂಡಿಸಿ ಹೆಜಮಾಡಿ ಟೋಲ್ ಬೂತ್ ವಿರುದ್ಧ ಸ್ಥಳೀಯರು ಗುರುವಾರ ಬೆಳಗ್ಗೆಯಿಂದ ಪ್ರತಿಭಟನೆ ಆರಂಭಿಸಿದ್ದಾರೆ.
ದ.ಕ.ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯ ಟೋಲ್ ಬೂತ್ ಗಳಲ್ಲಿ ಸ್ಥಳೀಯ ವಾಹನ ಸವಾರರಿಂದ ಟೋಲ್ ಸಂಗ್ರಹಕ್ಕೆ ವಿನಾಯಿತಿ ನೀಡಲಾಗಿತ್ತು. ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಪೂರ್ಣಗೊಳ್ಳುವವರೆಗೆ ಸ್ಥಳೀಯ ವಾಹನ ಸವಾರರಿಂದ ಟೋಲ್ ಸಂಗ್ರಹ ಮಾಡದಂತೆ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು.
ಆದರೆ ಮಂಗಳೂರು – ಉಡುಪಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹಲವು ಕಡೆಗಳಲ್ಲಿ ಇನ್ನೂ ಕೂಡ ಹೆದ್ದಾರಿಯ ಕಾಮಗಾರಿ ಅಪೂರ್ಣವಾಗಿದ್ದು, ಇದೀಗ ಕಳೆದ ಒಂದು ವರ್ಷದಿಂದ ಜಾರಿಯಲ್ಲಿರುವ ಈ ವಿನಾಯಿತಿಯನ್ನು ರದ್ದುಗೊಳಿಸಿ ಇಂದು ಬೆಳಗ್ಗೆಯಿಂದ ಹಠಾತ್ತಾಗಿ ಸ್ಥಳೀಯರಿಂದಲೂ ಟೋಲ್ ಸಂಗ್ರಹಕ್ಕೆ ಮುಂದಾಗಿರುವುದರಿಂದ ಇದನ್ನು ವಿರೋಧಿಸಿ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಸ್ಥಳೀಯರು ಬೆಳಗ್ಗೆಯಿಂದ ಟೋಲ್ ಬೂತ್ ಎದುರು ಜಮಾಯಿಸಿ ಪ್ರತಿಭಟನೆ ನಡೆಸಿದರು.
ಹೆಜಮಾಡಿ ಟೋಲ್ ಬೂತ್ ನಲ್ಲಿ ಆಸುಪಾಸಿನ ಸ್ಥಳೀಯ ವಾಹನ ಸವಾರರಿಂದ ಟೋಲ್ ಸಂಗ್ರಹಕ್ಕೆ ವಿನಾಯಿತಿ ನೀಡ ಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದ್ದಾರೆ. ಹೆದ್ದಾರಿ ಟೋಲ್ ವಿರೋಧಿ ಸಮಿತಿ, ದಲಿತ ಸಂಘರ್ಷ ಸಮಿತಿ, ಕರ್ನಾಟಕ ರಕ್ಷಣಾ ವೇದಿಕೆ, ಜೈ ಕರ್ನಾಟಕ, ಉಡುಪಿ ಜಿಲ್ಲಾ ಕಾರು ಮಾಲಕ-ಚಾಲಕರ ಸಂಘ ಸಹಿತ ಹಲವು ಸಂಘಟನೆಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದೆ.
ಪ್ರತಿಭಟನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿರುವುದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಘಟನ ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಕ್ರಮ ಕೈಗೊಂಡಿದ್ದಾರೆ.
Comments are closed.