ಕರಾವಳಿ

ಮದುವೆಯಾಗುವುದಾಗಿ ನಂಬಿಸಿ ದ್ರೋಹ!; ದಲಿತ ಯುವತಿಯಿಂದ ಗಂಗೊಳ್ಳಿ ಠಾಣೆಗೆ ದೂರು

Pinterest LinkedIn Tumblr

ಕುಂದಾಪುರ: ಫೋನ್ ಮೂಲಕ ಪರಿಚಯವಾದ ಯುವಕ ಕೆಲವೇ ದಿನಗಳಲ್ಲಿ ಸ್ನೇಹಿತನಾಗುತ್ತಾನೆ. ಅದಾಗ್ಯೇ ಪ್ರೇಮಿಯಾದ ಆತ ಅದೇ ಸಲುಗೆಯಲ್ಲಿ ಆಕೆಯೊಂದಿಗೆ ಮಾಮೂಲಿ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾನೆ. ಮದುವೆಯಾಗುವುದಾಗಿಯೂ ನಂಬಿಸುತ್ತಾನೆ. ಆ ಬಳಿಕ ಅದೇ ಫೋಟೋ ಹಿಡಿದುಕೊಂಡು ಆಕೆಗೆ ಬ್ಲ್ಯಾಕ್ ಮೇಲ್ ಮಾಡುವ ಆತ ಅವಳನ್ನು ಅತ್ಯಾಚಾರ ಮಾಡುತ್ತಾನೆ. ಇದಷ್ಟು ನೊಂದ ದಲಿತ ಯುವತಿಯೋರ್ವಳು ಪೊಲೀಸ್ ಠಾಣೆಗೆ ನೀಡಿದ ದೂರಿನ ಸಾರಾಂಶ.

ಸದ್ಯ ಈ ಪ್ರಕರಣದ ಆರೋಪಿ ಸುಮಾರು 26 ವರ್ಷ ಪ್ರಾಯದ ಕೊಲ್ಲೂರು ಮೂಲದ ಸುರೇಂದ್ರ ಶೆಟ್ಟಿ ಎಂಬಾತ.

ಗಂಗೊಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಗುಜ್ಜಾಡಿ ಗ್ರಾಮದ 23 ವರ್ಷ ಪ್ರಾಯದ ನೊಂದ ಯುವತಿ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ತನಗಾದ ಅನ್ಯಾಯದ ಬಗ್ಗೆ ದೂರನ್ನಿತ್ತಿದ್ದಾಳೆ. ಆಕೆ ಹೇಳುವ ಪ್ರಕಾರ ಮೊಬೈಲಿನಲ್ಲಿ ಪರಿಚಯವಾದ ಆರೋಪಿ ಸುರೇಂದ್ರ ಆಕೆಗೆ ಒಂದಷ್ಟು ಆತ್ಮೀಯನಾಗಿ ಕೆಲವೇ ದಿನದಲ್ಲಿ ಪ್ರೇಮಿಯಾಗುತ್ತಾನೆ. ಆಕೆಯನ್ನು ಸಮುದ್ರ ತೀರಕ್ಕೆ ಕರೆದೊಯ್ದ ಆತ ಆಕೆಯೊಂದಿಗೆ ಸಾಮಾನ್ಯವಗಿ ಫೋಟೋ ತೆಗೆದಿರಿಸಿಕೊಳ್ಳುತ್ತಾನೆ. ಆದರೇ ಆತನ ಕೆಟ್ಟ ಬುದ್ದಿ ತಿಳಿಯುವುದೇ ಆ ನಂತರ. ಅಕ್ಟೋಬರ್ ತಿಂಗಳಿನಲ್ಲಿ ಯುವತಿಯನ್ನು ಅದೇ ಫೋಟೋ ವಿಚಾರದಲ್ಲಿ ಬೆದರಿಸಿ ಆಕೆ ಮೇಲೆ ಅತ್ಯಾಚಾರ ಮಾಡುತ್ತಾನೆ. ಬಳಿಕ ವಿಚಾರವನ್ನು ಬಹಿರಂಗಪಡಿಸಿದರೇ ಕೊಲ್ಲುವುದಾಗಿಯೂ ಬೆದರಿಸುತ್ತಾನೆ.

ಆತನ ಬೆದರಿಕೆಯಿಂದ ನೊಂದಿದ್ದು ಮಾತ್ರವಲ್ಲದೇ ಹೆದರಿದ ಯುವತಿ ಸುಮ್ಮನಾಗುತ್ತಾಳೆ. ಯುವಕನ ಬಳಿ ಮದುವೆ ಪ್ರಸ್ತಾಪ ಮಾಡಿದಾಗಲೂ ಆತನಿಂದ ಸಿಕ್ಕಿದ್ದು ಜೀವಬೆದರಿಕೆ ಹಾಗೂ ಜಾತಿ ನಿಂಧನೆಯ ಮಾತುಗಳು. ಇದೆಲ್ಲದ ಬಳಿಕ ಸಂತ್ರಸ್ತ ಯುವತಿ ಗಂಗೊಳ್ಳಿ ಠಾಣೆಗೆ ದೂರು ನೀಡಿ ನ್ಯಾಯ ದೊರಕಿಸಿಕೊಡಿವಂತೆ ಮನವಿಯಿತ್ತಿದ್ದಾಳೆ.

ಸದ್ಯ ನೊಂದ ಯುವತಿ ನೀಡಿದ ದೂರಿನಂತೆ ದಲಿತ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣವು ಆರೋಪಿ ವಿರುದ್ಧ ಗಂಗೊಳ್ಳಿ ಠಾಣೆಯಲ್ಲಿ ದಾಖಲಾಗಿದೆ. ಮೂಲಗಳ ಪ್ರಕಾರ ಆರೋಪಿ ಎಸ್ಕೇಪ್ ಆಗಿದ್ದಾನೆ.

Comments are closed.