ಕರಾವಳಿ

ಕಾರ್ಕಳ ದಂಪತಿಗೆ ಥಳಿಸಿ ಚಿನ್ನ ಹಾಗೂ ಹಣ ದರೋಡೆ ಪ್ರಕರಣ: ಆರೋಪಿಗಳು ಅರೆಸ್ಟ್

Pinterest LinkedIn Tumblr

ಉಡುಪಿ: ಮನೆಗೆ ನುಗ್ಗಿದ ದುಷ್ಕರ್ಮಿಗಳು ದಂಪತಿಗೆ ಥಳಿಸಿ 21 ಪವನ್‌ ಚಿನ್ನಾಭರಣ ಹಾಗೂ ಒಂದು ಲಕ್ಷ ಹಣವನ್ನು ಲಪಟಾಯಿಸಿ ಪರಾರಿಯಾದ ಘಟನೆ ಕಾರ್ಕಳದ ಬಂಗ್ಲೆಗುಡ್ಡೆ ಎಂಬಲ್ಲಿ ಫೆ.4 ರಂದು ನಡೆದಿತ್ತು. ಮುಂಜಾನೆ 01.00 ಗಂಟೆಯ ಸಮಯದಲ್ಲಿ 3 ಜನ ದುಷ್ಕರ್ಮಿಗಳು ಯಶೋಧ ಆರ್.ಭಟ್(58) ಅವರ ಮನೆಯ ಹಿಂಬದಿಯ ಬಾಗಿಲನ್ನು ಒಡೆದು ಒಳಪ್ರವೇಶಿಸಿ ಕೊಠಡಿಯ ಒಳಗೆ ಮಲಗಿದ್ದ ಯಶೋಧ ಹಾಗೂ ಪತಿ ಸಂಜೀವ ನಾಯಕ್ ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಿ ಕೊಠಡಿಯ ಒಳಗಿದ್ದ ನಗ ನಗದು ದೋಚಿದ್ದ ಬಗ್ಗೆ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದ ಪತ್ತೆ ಬಗ್ಗೆ ಉಡುಪಿ ಜಿಲ್ಲಾ ಎಸ್ಪಿ ಲಕ್ಷ್ಮಣ ಬ. ನಿಂಬರಗಿ ನಿರ್ದೇಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ ಚಂದ್ರ ಹಾಗೂ ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಋಷಿಕೇಶ್ ಸೋನವಾಣೆ ಮಾರ್ಗದರ್ಶನದಲ್ಲಿ ತನಿಖೆ ಪ್ರಾರಂಭಿಸಿ ಪ್ರಕರಣದ ತನಿಖಾಧಿಕಾರಿ ಕಾರ್ಕಳ ವೃತ್ತ ನಿರೀಕ್ಷಕ ಜಾಯ್ ಅಂತೋನಿ ನೇತೃತ್ವದಲ್ಲಿ, ಕಾರ್ಕಳ ನಗರ ಠಾಣಾ ಪಿ.ಎಸ್.ಐ ನಂಜಾನಾಯ್ಕ್‌, ಕಾರ್ಕಳ ವೃತ್ತ ಪೊಲೀಸ್ ಸಿಬ್ಬಂದಿಗಳು ಖಚಿತ ಮಾಹಿತಿ ಮೇರೆಗೆ ಪ್ರಕರಣದ ಆರೋಪಿಗಳಲ್ಲಿ ಇಬ್ಬರಾದ ಉಡುಪಿ ಬೆಳಪು ನಿವಾಸಿ ಸಾಜಿದ್‌ ರೆಹಮಾನ್‌ (19) ಮತ್ತು ಕಾರ್ಕಳ ಬಂಗ್ಲೆಗುಡ್ಡೆ ನಿವಾಸಿ ಅಮಿರುದ್ದೀನ್‌ ಯಾನೆ ಸದ್ದಾಂ (27) ಬಂಧಿಸಿ ಇವರಿಂದ ಕಳ್ಳತನ ಮಾಡಿಕೊಂಡು ಹೋಗಿರುವ ಹಣದಲ್ಲಿ ತಲಾ 3,500 ಮತ್ತು 3000 ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಆರೋಪಿಗಳ ವಿಚಾರಣೆಯಿಂದ ಈ ಪ್ರಕರಣದಲ್ಲಿ ಕೃತ್ಯಕ್ಕೆ ಚವರಲೇಟ್ ಕಂಪನಿಯ ಕಾರು ಉಪಯೋಗಿಸಿರುವ ಬಗ್ಗೆ ಹಾಗೂ ಈ ಪ್ರಕರಣದಲ್ಲಿ ಇನ್ನೂ 4 ಆರೋಪಿಗಳು ಭಾಗಿಯಾಗಿರುವ ಬಗ್ಗೆ ಮಾಹಿತಿ ತಿಳಿದು ಈ ಪ್ರಕರಣದಲ್ಲಿ ಉಳಿದ ಆರೋಪಿಗಳ ಪತ್ತೆ ಕಾರ್ಯವನ್ನು ಮುಂದುವರಿಸಿದ್ದು, ದಿನಾಂಕ 15-02-2018 ಸಂಜೆ ಈ ಡಕಾಯಿತಿ ಪ್ರಕರಣದ ಉಳಿದ ಆರೋಪಿಗಳು ಮೂಡುಬಿದ್ರೆ ಕಡೆಗೆ ಕಾರ್ಕಳ ಮಾರ್ಗವಾಗಿ ಹೋಗುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಸಾಣೂರು ಮುರತಂಗಡಿ ಪೊಲೀಸ್ ಚೆಕ್ ಪೋಸ್ಟ್ ಬಳಿ ಕಾರನ್ನು ಪೊಲೀಸರ ಸಹಾಯದಿಂದ ತಡೆದು ನಿಲ್ಲಿಸಿದ್ದು, ಆರೋಪಿಗಳಾದ ಭಟ್ಕಳ ಮೂಲದ ಮಾರೂಫ(21), ಹಾಗೂ ನಟರಾಜ(24) ಇವರುಗಳನ್ನು ವಶಕ್ಕೆ ಪಡೆದಿದ್ದು,ಉಳಿದ 3 ಜನ ಆರೋಪಿಗಳು ಇಳಿದು ಮುರತಂಗಡಿ ಕಾಡಿನ ಕಡೆಗೆ ಓಡಿ ಪರಾರಿಯಾಗಿದ್ದಾರೆ. ಓಡಿ ಹೋದ ಆರೋಪಿಗಳು ಕೇಳಲಾಗಿ ಕಾಪು ಅಜರುದ್ದೀನ್, ಶರೀಫ್ ಶಿವಮೊಗ್ಗ ಹಾಗೂ ರಶೀದ್ ಕಾಸರಗೋಡು ಎನ್ನಲಾಗಿದೆ.

ಈ ಆರೋಪಿಗಳಿಂದ ಕಾಪು, ಪಡುಬಿದ್ರಿ ಮತ್ತು ಕಾರ್ಕಳದಲ್ಲಿ 2017 ಹಾಗೂ 2018 ನೇ ಸಾಲಿನಲ್ಲಿ ಮಹಿಳೆಯರ ಕುತ್ತಿಗೆಯಿಂದ ಅಪಹರಣ ಮಾಡಿರುವ 3 ಚಿನ್ನದ ಸರಗಳು, ಕಾರ್ಕಳ ದರೋಡೆ ಪ್ರಕರಣದ ಓಂದು ಚಿನ್ನದ ಸರ ಮತ್ತು ಒಂದು ಬಳೆ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಚವರಲೇಟ್ ಕಂಪನಿಯ ಎಂಜಾಯ್ ಮಾದರಿಯ ಬೂದು ಬಣ್ಣದ ಕಾರು, ಒಂದು ಲಾಂಗು, ಒಂದು ಕತ್ತಿ, ಒಂದು ಕಬ್ಬಿಣದ ರಾಡು ಹಾಗೂ ನಗದು 6,500/- ನಗದು ವಶಕ್ಕೆ ಪಡೆಯಲಾಗಿದೆ. ಒಟ್ಟು ಸ್ವತ್ತು ಮೌಲ್ಯ 8 ಲಕ್ಷ 80 ಸಾವಿರ ಆಗಿರುತ್ತದೆ.

ನಟೋರಿಯಸ್ ಆರೋಪಿಗಳು…
ಮೇಲ್ಕಂಡ ಅಪರಾಧಗಳನ್ನು ಹೊರತು ಪಡಿಸಿ ಡಕಾಯಿತಿ ಪ್ರಕರಣದ 6 ಜನ ಆರೋಪಿಗಳಲ್ಲಿ ಕಾಪು ಅಜರುದ್ದೀನ್, ಮಾರೂಫ್ ಮತ್ತು ನಟರಾಜ ಇವರುಗಳು ಇತರ ಸಹಚರರೊಂದಿಗೆ ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಇನ್ನೂ 15 ಕಳ್ಳತನ ಪ್ರಕರಣಗಳಲ್ಲಿ ಭಾಗವಹಿಸಿರುವುದು ತನಿಖೆಯಿಂದ ತಿಳಿದುಬಂದಿರುತ್ತದೆ. ಆರೋಪಿಗಳನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.

ಕಾರ್ಯಾಚರಣೆ ತಂಡ….
ಈ ಪ್ರಕರಣದಲ್ಲಿ ಆರೋಪಿ ಹಾಗೂ ಸ್ವತ್ತು ಪತ್ತೆ ಬಗ್ಗೆ ಕಾರ್ಕಳ ವೃತ್ತ ನಿರೀಕ್ಷಕ ಜಾಯ್ ಅಂತೋನಿ, ಕಾರ್ಕಳ ನಗರ ಠಾಣೆ ಪಿಎಸ್ಐ ನಂಜಾ ನಾಯ್ಕ ಹಾಗೂ ಅಪರಾಧ ಪತ್ತೆ ದಳದ ಸಿಬ್ಬಂದಿಗಳಾದ ರಾಜೇಶ್ ಕುಂಪಲ, ಪ್ರಶಾಂತ್ ಮಣಿಯಾಣಿ, ಮೂರ್ತಿ.ಕೆ, ಗಿರೀಶ್‌ ಉಳಿಯ, ರಾಘವೇಂದ್ರ, ಘನ ಶ್ಯಾಮ, ಭೀಮಪ್ಪ, ಚಾಲಕರುಗಳಾದ ಜಗದೀಶ, ಸತೀಶ ಮತ್ತು ಕಾಪು ವೃತ್ತ ನಿರೀಕ್ಷಕ ಹಾಲಮೂರ್ತಿ ರಾವ್ ಹಾಗೂ ಅವರ ಸಿಬ್ಬಂದಿಗಳಾದ ಪ್ರವೀಣ್ ಮತ್ತು ರಾಜೇಶ್ ಹೆರ್ಗ ಮತ್ತು ಉಡುಪಿ ಜಿಲ್ಲಾ ಪೊಲೀಸ್ ಸಿ.ಡಿ.ಆರ್ ಘಟಕದ ಸಿಬ್ಬಂದಿಗಳಾದ ದಿನೇಶ್ ಮತ್ತು ಶಿವಾನಂದ ಇವರುಗಳು ಸಹಕರಿಸಿರುತ್ತಾರೆ.

Comments are closed.