ಕರ್ನಾಟಕ

ಶಿರಸಿಯಲ್ಲಿ ಹಿಂಸಾಚಾರ: ಕಲ್ಲು ತೂರಾಟ, ಗಾಳಿಯಲ್ಲಿ ಗುಂಡು; ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಬಂಧನ

Pinterest LinkedIn Tumblr

ಶಿರಸಿ: ಜಿಲ್ಲೆಯಾದ್ಯಂತ ಮೆರವಣಿಗೆಗೆ ನಿಷೇಧವಿದ್ದರೂ ಹಿಂದೂ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆಗೆ ಮುಂದಾದರು. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ವಿಶ್ವ ಹಿಂದೂ ಪರಿಷತ್‌, ಭಜರಂಗ ದಳ ಸೇರಿ ಇತರೆ ಹಿಂದೂ ಸಂಘನೆಗಳ ಪ್ರಮುಖರನ್ನು ಬಂಧಿಸುತ್ತಿದ್ದಂತೆ ಪ್ರತಿಭಟನೆ ಹಿಂಸಾ ಸ್ವರೂಪ ಪಡೆದುಕೊಂಡಿತು.

ಹೊನ್ನಾವರದ ಪರೇಶ ಮೇಸ್ತಾ ಸಾವಿನ‌ ಪ್ರಕರಣದ ಹಿನ್ನಲೆಯಲ್ಲಿ ನಗರದಲ್ಲಿ ಬಂದ್‌ಗೆ ಕರೆ ನೀಡಲಾಗಿತ್ತು. ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಡಿ.14ರವರೆಗೆ ಸಭೆ, ಸಮಾರಂಭ, ಮೆರವಣಿಗೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಸೋಮವಾರ ಆದೇಶಿಸಿದ್ದರು. ಆದರೆ, ವಿಕಾಸಾಶ್ರಮ ಮೈದಾನದಲ್ಲಿ ಸಹಸ್ರಾರು ಜನರು ಹಿಂದೂ ಪರ ಘೋಷಣೆ ಕೂಗುತ್ತ ಪ್ರತಿಭಟನೆಗೆ ಅವಕಾಶ ನೀಡುವಂತೆ ಒತ್ತಾಯಿಸಿದರು.

ಪ್ರತಿಭಟನಾ ಮೆರವಣಿಗೆ ನಡೆಸುವುದಾಗಿ ಹಿಂದೂ ಕಾರ್ಯಕರ್ತರು ಪಟ್ಟು ಹಿಡಿದರೆ, ಯಾವುದೇ ಮೆರವಣಿಗೆಗೆ ಅವಕಾಶ ನೀಡುವುದಿಲ್ಲ ಎಂದು ಪೊಲೀಸರು ಪಟ್ಟು ಬಿಗಿಗೊಳಿಸಿದ್ದರು.

ಭಗವಾಧ್ವಜ ಹಿಡಿದು ಕಾಂಗ್ರೆಸ್ ಸರ್ಕಾರದ ವಿರುದ್ಧ ಹಿಂದೂ ಕಾರ್ಯಕರ್ತರು ಘೋಷಣೆ ಕೂಗುತ್ತಿದ್ದರು. ಮೆರವಣಿಗೆಗೆ ಅವಕಾಶ ನೀಡದಿದ್ದರೆ ಜಾಗ ಬಿಟ್ಟು ಕದಲುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.

ಕಂಡಕಂಡ ಕಡೆ ಉದ್ರಿಕ್ತ ಗುಂಪು ಕಲ್ಲು ತೂರಿದೆ. ಹೀಗಾಗಿ ಕೆಲ ಮಾಧ್ಯಮದವರನ್ನೂ ಒಳಗೊಂಡು ಪೊಲೀಸರಿಗೂ ಕಲ್ಲುಗಳು ತಾಗಿ ಗಾಯವಾಗಿದೆ. ಶಿರಸಿಯ ವಿವಿಧ ಭಾಗಗಳಲ್ಲಿ ಉದ್ರಿಕ್ತರ ಗುಂಪು ಟೈರ್‌ಗಳಿಗೆ ಬೆಂಕಿ ಹಚ್ಚಿದೆ. ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಅಶ್ರವಾಯು, ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.

ಅಲ್ಲದೇ ಲಾಠಿ ಬೀಸಿ ಗುಂಪು ಚದುರಿಸುವ ಕಾರ್ಯ ಮಾಡುತ್ತಿದ್ದಾರೆ. ಶಿರಸಿಯ ವಿವಿಧ ಕಡೆ ಇನ್ನೂ ಕಲ್ಲು ತೂರಾಟ ಮುಂದುವರೆದಿದೆ.

ಗದಗ ಎಸ್ಪಿ ಸಂತೋಷಬಾಬು, ಚಿತ್ರದುರ್ಗ ಎಡಿಷನಲ್ ಎಸ್ಪಿ ರಾಮಸಿದ್ದಿ, ಐಜಿಪಿ ಹೇಮಂತ ನಿಂಬಾಳಕರ್ ನೇತೃತ್ವದಲ್ಲಿ ಪೊಲೀಸರು ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ. ಪ್ರತಿಭಟನೆ ನಡೆಸಿದ ಸ್ಥಳವಾದ ವಿಕಾಸಾಶ್ರಮ ಮೈದಾನದ ಸುತ್ತ ಇರುವ ಎಲ್ಲ ಬೈಕ್ ಗಳನ್ನು ಗಾಡಿಗೆ ತುಂಬುತ್ತಿದ್ದಾರೆ.

ಈ ಸ್ಥಳದಿಂದ ಚದುರಿರುವ ಪ್ರತಿಭಟನಾಕಾರರು ಐದು ರಸ್ತೆ ವೃತ್ತದಲ್ಲಿ ಸೇರಿ ಮತ್ತೆ ಪ್ರತಿಭಟನೆ ಆರಂಭಿಸಿದ್ದಾರೆ. ಜಿಲ್ಲಾಧಿಕಾರಿ ಎಸ್. ಎಸ್. ನಕುಲ್, ಎಸ್ಪಿ ವಿನಾಯಕ‌ ಪಾಟೀಲ ಸ್ಥಳದಲ್ಲಿದ್ದಾರೆ.

ಇದೇ ಸಂದರ್ಭದಲ್ಲಿ ನಗರದಲ್ಲಿರುವ ಮುಸ್ಲಿಮರ ಅಂಗಡಿಗಳ ಮೇಲೆ ಕಲ್ಲು ತೂರಾಟ ನಡೆದಿದ್ದು, 15ಕ್ಕೂ ಹೆಚ್ಚು ಅಂಗಡಿಗಳಿಗೆ ಹಾನಿಯಾಗಿದೆ. ಪ್ರಸಿಡೆಂಟ್ ಹೊಟೇಲ್ ಗಾಜು ಒಡೆದಿದೆ. ವರದಿನಿರತರಾಗಿದ್ದ ಇಬ್ಬರು ಪತ್ರಕರ್ತರು ಗಾಯಗೊಂಡಿದ್ದಾರೆ. ಘಟನೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸುತ್ತಿದ್ದ ಅನೇಕರ ಮೊಬೈಲ್ ಕಸಿದ ಉದ್ರಿಕ್ತರು ಒಡೆದು ಹಾಕಿದ್ದಾರೆ.

Comments are closed.