ಬೆಂಗಳೂರು, ಅ.೧೬- ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಎರ್ಎಸ್ಎಸ್) ಏರ್ಪಡಿಸಿದ್ದ ಪಥ ಸಂಚಲನದಲ್ಲಿ ಭಾಗವಹಿಸಿ ಮನೆಗೆ ಬೈಕ್ನಲ್ಲಿ ವಾಪಸಾಗುತ್ತಿದ್ದ ಸಂಘದ ಕಾರ್ಯಕರ್ತ ರುದ್ರೇಶ್ ಎಂಬವರನ್ನು ದುಷ್ಕರ್ಮಿಗಳು ಮಚ್ಚು, ಲಾಂಗು, ಚಾಕು ಚೂರಿಯಿಂದ ಹೊಡೆದು ಕೊಲೆಗೈದಿರುವ ದುರ್ಘಟನೆ ಕಾಮರಾಜ ರಸ್ತೆಯಲ್ಲಿ ಇಂದು ಮಧ್ಯಾಹ್ನ ನಡೆದಿದೆ.
ಶಿವಾಜಿನಗರದ ಮಿಲ್ಕ್ಮನ್ ಬೀದಿಯ ನಿವಾಸಿ ರುದ್ರೇಶ್ (೩೫) ಕೊಲೆಗೀಡಾದವರು. ಅವರು ಇಂದು ಬೆಳಗ್ಗೆ ಆರ್ಬಿಎಎನ್ಎಂ ಶಾಲಾ ಮೈದಾನದಲ್ಲಿ ನಡೆದ ಆರೆಸ್ಸೆಸ್ ಪಥ ಸಂಚಲನದಲ್ಲಿ ಪಾಲ್ಗೊಂಡು ಮಧ್ಯಾಹ್ನ ಒಂದು ಗಂಟೆಯ ವೇಳೆಗೆ ಬೈಕ್ನಲ್ಲಿ ಮನೆಗೆ ವಾಪಾಸಾಗುತ್ತಿದ್ದರು.
ಮಾರ್ಗ ಮಧ್ಯೆ ಕಾಮರಾಜ್ ರಸ್ತೆಯಲ್ಲಿ ಬೈಕ್ನಲ್ಲಿ ಬಂದ ನಾಲ್ಕೈದು ಮಂದಿ ದುಷ್ಕರ್ಮಿಗಳ ಗ್ಯಾಂಗ್ ಏಕಾಏಕಿ ಬೈಕ್ಅಡ್ಡ ಗಟ್ಟಿದ್ದಾರೆ. ಬೈಕ್ನಿಲ್ಲಿಸಿದ ರುದ್ರೇಶ್ ಮೇಲೆ ಎರಗಿದ ದುಷ್ಕರ್ಮಿಗಳ ತಂಡ ಮಚ್ಚು, ಲಾಂಗುಗಳಿಂದ ಹೊಡೆದು ಕೊಲೆಗೈದು ಪರಾರಿಯಾಗಿದೆ.
ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದು, ದುಷ್ಕರ್ಮಿಗಳ ಪತ್ತೆಗೆ ಕಮರ್ಷಿಯಲ್ಸ್ಟ್ರೀಟ್ ಪೊಲೀಸರು ಶೋಧ ನಡೆಸಿದ್ದಾರೆ. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ.
ರುದ್ರೇಶ್ ಕೊಲೆಗೂ ಆರೆಸ್ಸೆಸ್ ಸಂಘಟನೆಗೂ ಯಾವುದೇ ಸಂಬಂಧವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ರುದ್ರೇಶ್ ರಿಯಲ್ ಎಸ್ಟೇಟ್ ಏಜೆಂಟ್ ಆಗಿದ್ದರು ಮಾತ್ರವಲ್ಲ ಸಣ್ಣ ಪುಟ್ಟ ಬಡ್ಡಿ ವ್ಯವಹಾರ ನಡೆಸುತ್ತಿದ್ದರು.
Comments are closed.