ಕೊಪ್ಪಳ: ಪ್ರೀತಿಸಿ ಕೈ ಕೊಟ್ಟ ಯುವತಿಯ ಮನೆ ಎದುರಲ್ಲೇ ಪ್ರಿಯರಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಜಿಲ್ಲೆಯ ಕಲ್ಗುಡಿಯ ನಿವಾಸಿ ಕಿರಣ್ಕುಮಾರ್ ಆತ್ಮಹತ್ಯೆಗೆ ಶರಣಾದ ಯುವಕ. ಕಿರಣ್ ಹಾಗೂ ಈತನ ಸಂಬಂಧಿ ಶ್ರಾವ್ಯಾ ಕಳೆದ 3 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ರು. ಹುಬ್ಬಳಿಯಲ್ಲಿ ಆ್ಯನಿಮೆಷನ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದ ಕಿರಣ್ ಹಾಗೂ ಬಿಇ ಓದುತ್ತಿದ್ದ ಶ್ರಾವ್ಯಾ ಲಿವಿಂಗ್ ಟುಗೆದರ್ ಸಂಬಂಧದಲ್ಲಿದ್ರು. ಈ ವಿಷಯ ಶ್ರಾವ್ಯ ಮನೆಯವ್ರಿಗೆ ಗೊತ್ತಾಗಿ ಆಕೆಗೆ ಬೇರೆ ಮದುವೆ ಮಾಡೋಕೆ ಸಿದ್ಧತೆ ಮಾಡ್ತಿದ್ರು. ಇದನ್ನ ತಿಳಿದ ಕಿರಣ್ಕುಮಾರ್ ಶ್ರಾವ್ಯಾಳ ಮನೆಗೆ ಹೋಗಿ ಗಲಾಟೆ ಮಾಡಿದಾಗ ನಾನು ನಿನ್ನನ್ನ ಮದುವೆಯಾಗೋದಿಲ್ಲ ಅಂತಾ ಶ್ರಾವ್ಯಾ ಹೇಳಿದ್ದಾಳೆ.
ಇದರಿಂದ ನೊಂದ ಕಿರಣ್, ಮೊಬೈಲ್ನಲ್ಲಿ ಸೆಲ್ಫಿ ವೀಡಿಯೋ ಮಾಡಿ ಅದನ್ನ ತನ್ನ ಅಕ್ಕನಿಗೆ ಕಳಿಸಿ ಶ್ರಾವ್ಯಾ ಮನೆ ಎದುರಲ್ಲೇ ವಿಷ ಸೇವಿಸಿದ್ದಾನೆ. ಇಷ್ಟಾದರೂ ಶ್ರಾವ್ಯಾ ಮನೆಯವರು ಇದಕ್ಕೆ ಕೇರ್ ಮಾಡ್ಲಿಲ್ಲ. ಬಳಿಕ ಪೋಷಕರು ಬಂದು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಕಿರಣ್ ಸಾವನ್ನಪ್ಪಿದ್ದಾನೆ.
ವಿಡಿಯೋದಲ್ಲಿ ಕಿರಣ್ ಹೇಳಿದ್ದೇನು?: ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಇದಕ್ಕೆ ಕಾರಣ ನನ್ನ ಪ್ರೀತಿ. ನಾನು ಮತ್ತು ಶ್ರಾವ್ಯಾ ಮೂರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದೇವೆ. ಕೇವಲ ಪ್ರೀತಿ ಮಾತ್ರವಲ್ಲ, ನಮ್ಮ ನಡುವೆ ಲಿವಿಂಗ್ ಟುಗೆದರ್ ಸಂಬಂಧ ಇದೆ. ಹೀಗಾಗಿ ನಿನ್ನನ್ನೇ ಮದುವೆಯಾಗೋದಾಗಿ ತನ್ನ ಮನೆಯವರನ್ನು ಒಪ್ಪಿಸೋದಾಗಿ ಶ್ರಾವ್ಯಾ ಹೇಳಿದ್ದಳು. ಆದರೆ ಈಗ ಬೇರೆಯವನ ಜೊತೆ ಮದುವೆಯಾಗಲು ಮುಂದಾಗಿದ್ದಾಳೆ. ಆಕೆಯನ್ನ ನಾನು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸಿದ್ದೇನೆ. ಆಕೆ ಸಿಗದಿದ್ರೆ ನನಗೆ ಈ ಜೀವನ ಬೇಡ. ಅಮ್ಮಾ ನನ್ನನ್ನು ಕ್ಷಮಿಸು. ಶ್ರಾವ್ಯಾಳನ್ನು ಮರೆತು ಬದುಕಲು ನನಗೆ ಸಾಧ್ಯವಿಲ್ಲ. ದಯಮಾಡಿ ನನ್ನನ್ನು ಕ್ಷಮಿಸಿ. ಅಮ್ಮಾ ಮುಂದಿನ ಜನ್ಮ ಇದ್ರೆ ನನಗೆ ನೀನೆ ಅಮ್ಮನಾಗಿರಬೇಕು. ಅಕ್ಕ ಅಮ್ಮನನ್ನು ನೀನೇ ನೋಡಿಕೊಳ್ಳಬೇಕು ಅಂತ ಕಿರಣ್ ವಿಡಿಯೋದಲ್ಲಿ ಹೇಳಿದ್ದಾನೆ. ಈ ಸಂಬಂಧ ಮುನಿರಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.