
ಭೋಪಾಲ್: ಹಾವು ಕಚ್ಚಿ ಸಾವನ್ನಪ್ಪಿದ್ದಾನೆ ಎಂದುಕೊಂಡಿದ್ದ ಯುವಕನೊಬ್ಬ ಅಂತ್ಯಕ್ರಿಯೆ ವೇಳೆ ಎಚ್ಚರವಾದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಮತ್ತೆ ಆತ ಸಾವನ್ನಪ್ಪಿದ್ದಾನೆ.
ಮಧ್ಯಪ್ರದೇಶದ ರೈಸೆನ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, 23 ವರ್ಷದ ಯುವಕ ಸಂದೀಪ್ ಸಾವನ್ನಪ್ಪಿದ್ದಾರೆ. ತಮ್ಮ ಗ್ರಾಮದ ಪಕ್ಕದಲ್ಲೇ ಇರುವ ಕಾಡಿಗೆ ಕಟ್ಟಿಗೆ ತರಲು ಹೋಗಿದ್ದಾಗ ಹಾವು ಕಚ್ಚಿತ್ತು. ಈ ವೇಳೆ ಪ್ರಜ್ಞಾಹೀನನಾಗಿದ್ದ ಆತನಿಗೆ ಚಿಕಿತ್ಸೆ ಕೊಡಿಸಲು ಮುಂದಾಗದೇ ಸಾವನ್ನಪ್ಪಿದ್ದಾನೆ ಎಂದುಕೊಂಡು ಗ್ರಾಮಸ್ಥರು ಹಾಗೂ ಕುಟುಂಬದವರು ಅಂತ್ಯಕ್ರಿಯೆಗೆ ಮುಂದಾಗಿದ್ದರು. ಇನ್ನೇನೂ ಅಗ್ನಿಸ್ಪರ್ಶ ಮಾಡುವ ವೇಳೆಗೆ ಸಂದೀಪ್ಗೆ ಎಚ್ಚರವಾಗಿದೆ.
ಸಂದೀಪ್ ಎಚ್ಚರವಾಗಿದ್ದನ್ನ ಕಂಡ ತಕ್ಷಣ ಅಲ್ಲಿದ್ದವರು ಆತನನ್ನು ಚಿಕಿತ್ಸೆಗೆ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದ್ರೆ ಹಾವಿನ ವಿಷ ದೇಹವನ್ನ ಸೇರಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಆತ ಕೆಲವೇ ಗಂಟೆಗಳಲ್ಲಿ ಮೃತಪಟ್ಟಿದ್ದಾನೆ. ನಂತರ ಆತನ ಅಂತ್ಯಕ್ರಿಯೆ ನೆರವೇರಿಸಲಾಗಿದೆ.
Comments are closed.