ಕರ್ನಾಟಕ

ಶಿಕ್ಷಣ ವಂಚಿತ, ನಿರುದ್ಯೋಗಿ ಯುವ ಸಮುದಾಯದ ಮೇಲೆ ನಕ್ಸಲರು ಕಾಯುತ್ತಿದ್ದಾರೆ ಎಚ್ಚರ: ತರೂರ್‌

Pinterest LinkedIn Tumblr

taroor

ಬೆಂಗಳೂರು: ‘ದೇಶದ ಬಹುಸಂಖ್ಯಾತ ಶಿಕ್ಷಣ ವಂಚಿತ, ನಿರುದ್ಯೋಗಿ ಯುವ ಸಮುದಾಯದ ಮೇಲೆ ನಕ್ಸಲರು ಕಾತುರದ ಕಣ್ಣಿಟ್ಟಿದ್ದು ಅವರ ಕೈಗಳಿಗೆ ಬಂದೂಕು ನೀಡಲು ತವಕಿಸುತ್ತಿದ್ದಾರೆ. ಆದ್ದರಿಂದ ಉತ್ತಮ ಶಾಲೆಗಳಲ್ಲಿ ಶಿಕ್ಷಣ ಪಡೆದ ಪ್ರತಿಷ್ಠಿತ ಸಮುದಾಯವು ಇಂತಹ ಅವಕಾಶಗಳಿಗೆ ಎಡೆ­ಮಾಡಿ­ಕೊಡದಂತೆ ದೇಶದ ಭವಿಷ್ಯಕ್ಕೆ ಉತ್ತಮ ಭಾಷ್ಯ ಬರೆಯುವ ಜವಾಬ್ದಾರಿ ಹೊಂದಿದೆ’ ಎಂದು ತಿರುವನಂತಪುರಂ ಕ್ಷೇತ್ರದ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಅಭಿಪ್ರಾಯಪಟ್ಟರು.

ಬಿಷಪ್‌ ಕಾಟನ್ ಬಾಲಕರ ಶಾಲೆಯ ನಿರ್ಗಮಿಸುತ್ತಿರುವ ಹನ್ನೆರ­ಡನೇ ತರಗತಿ ವಿದ್ಯಾರ್ಥಿಗಳಿಗೆ ಭಾನು­ವಾರ ಏರ್ಪಡಿಸಿದ್ದ ‘ಗ್ರ್ಯಾಜುಯೇಷನ್‌’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಕೇವಲ 1 ಸಾವಿರಕ್ಕೆ ಅಥವಾ ಒಂದು ಹೊತ್ತಿನ ಊಟಕ್ಕೆ ಬಂದೂಕು ಎತ್ತಿಕೊಂಡು ಜನ­ರನ್ನು ಸಾಯಿಸುವ ಹತಾಶ ಮನಸ್ಸು­ಗಳು ಕಂಡು ಬರು­ತ್ತಿವೆ. ಇದು ಜನಸಂಖ್ಯೆ ವೈರುಧ್ಯದ ಪರಿ­ಣಾ­ಮವೂ ಹೌದು’ ಎಂದ ತರೂರ್‌, ‘ಉತ್ತಮ ಶಾಲೆಗಳಲ್ಲಿ ಶಿಕ್ಷಣ ಪಡೆದ­ವರು ದೇಶದ ಆರ್ಥಿಕತೆಗೆ, ಶಿಕ್ಷಣ ವಂಚಿ­ತರ ಸಬಲೀಕರಣಕ್ಕೆ ನೆರವಾಗುವ ಬಹು­ದೊಡ್ಡ ಜವಾಬ್ದಾರಿ ಹೊಂದಿದ್ದಾರೆ’ ಎಂದು ಎಚ್ಚರಿಸಿದರು.

ಅಗ್ನಿ ಪರೀಕ್ಷೆ: ‘ಶಾಲೆಯಲ್ಲಿ ಕಲಿತ ಪಠ್ಯ­ಕ್ಕಿಂತಲೂ ಹೆಚ್ಚಾಗಿ ನಾವು ನಿಜ ಜೀವನ­ದಲ್ಲಿ ಎದುರಿಸಬೇಕಾದ ಅಗ್ನಿ ಪರೀಕ್ಷೆ­ಗಳು ದೊಡ್ಡವು. ಹೀಗಾಗಿ ಶಿಕ್ಷಕರು ಮಕ್ಕ­ಳನ್ನು ಕೇವಲ ಪರೀಕ್ಷೆಗೆ ಮಾತ್ರವೇ ಸಿದ್ಧಪಡಿಸುವ ಮಾನಸಿಕ ಸ್ಥಿತಿಯಿಂದ ಹೊರಬರಬೇಕು’ ಎಂದು ತರೂರ್‌ ಪ್ರತಿಪಾದಿಸಿದರು.

‘ಮಾನವೀಯ ಮೌಲ್ಯಗಳು ಮತ್ತು ಗಣಿತ ಪ್ರಪಂಚಕ್ಕೆ ಭಾರತೀಯರು ನೀಡಿ­ರುವ ಕೊಡುಗೆ ಸಣ್ಣದೇನಲ್ಲ. ಆದರೆ ಇಂದು ನಮ್ಮಲ್ಲಿ ಒಂದು ಒಳ್ಳೆ ಮನೆ ಕಟ್ಟುವಂತಹ ಕೌಶಲ್ಯವೂ ಉಳಿದಿಲ್ಲ. ಪ್ರಾಚೀನ ಬೌದ್ಧಿಕ ಪಾರುಪತ್ಯದ ಉತ್ತಮ ಅಂಶಗಳು ಕ್ಷೀಣಿಸಿವೆ. ಶುಚಿತ್ವವೇ ಇಲ್ಲದ ಗಲೀಜು ಭಾರತ ನಮ್ಮನ್ನು ಅಣಕಿಸುತ್ತಿದೆ’ ಎಂದು ಅವರು ವಿಷಾದಿಸಿದರು.

‘ಮೊಬೈಲ್‌ನಂತಹ ಪುಟ್ಟ ಸಾಧನ ಇಂದು ಬಹಳಷ್ಟು ಕ್ರಾಂತಿ ಮಾಡಿದೆ. ಇಂತಹ ಸನ್ನಿವೇಶದಲ್ಲಿ ಕಲಿತವರು ತಮ್ಮ ಪ್ರತಿಭೆಗಳನ್ನು ಒರೆಗೆ ಹಚ್ಚುವ ಮೂಲಕ ಜನಸಮುದಾಯದ ಕಲ್ಯಾ­ಣಕ್ಕೆ ದುಡಿಯುವ ಸಂಕಲ್ಪ ಮಾಡ­ಬೇಕು’ ಎಂದು ಅವರು ಹೇಳಿದರು.

ದಕ್ಷಿಣ ಭಾರತದ ಚರ್ಚ್‌ಗಳ ಅಧ್ಯಕ್ಷ ಡಾ.ಜಿ.ದೈವಾಶೀರ್ವಾದಂ, ಪ್ರಾಂಶು­ಪಾಲರಾದ ಜಾನ್‌ ಝಕಾರಿಯಾ, ಹೈಕೋರ್ಟ್‌ನ ಹಿರಿಯ ವಕೀಲ ಆದಿತ್ಯ ಸೋಂಧಿ ಇತರ ಗಣ್ಯರು ಹಾಜರಿದ್ದರು.

Write A Comment