ಜಕಾರ್ತ/ಕ್ಯಾನ್ಬೆರಾ: ಕಣ್ಮರೆಯಾಗಿದ್ದ ಮಲೇಷ್ಯಾ ಮೂಲದ ಏರ್ಏಷ್ಯಾ ವಿಮಾನ ಸೋಮವಾರವೂ ಪತ್ತೆಯಾಗಿಲ್ಲ. ವಿಮಾನದಲ್ಲಿದ್ದ ಪೈಲಟ್, ಸಹ ಪೈಲಟ್, ಐವರು ಸಿಬ್ಬಂದಿ, 16 ಮಕ್ಕಳು ಮತ್ತು ಒಂದು ಹಸುಳೆ ಸೇರಿ 155 ಪ್ರಯಾಣಿಕರ ಪರಿಸ್ಥಿತಿ ಏನಾಗಿದೆ ಎಂಬುದು ಇನ್ನೂ ತಿಳಿದು ಬಂದಿಲ್ಲ.
ಇಂಡೋನೇಷ್ಯಾದ ಸುರಬಯದಿಂದ ಸಿಂಗಾಪುರಕ್ಕೆ ಹೊರಟಿದ್ದ ವಿಮಾನ ಮಾರ್ಗಮಧ್ಯೆ ಭಾನುವಾರ ಬೆಳಗ್ಗೆ ಕಣ್ಮರೆಯಾಗಿತ್ತು. ವಿಮಾನದಲ್ಲಿದ್ದ 155 ಪ್ರಯಾಣಿಕರ ಪೈಕಿ ಬಹುತೇಕರು ಇಂಡೋನೇಷ್ಯಾಗೆ ಸೇರಿದವರು. ಇವರೆಲ್ಲ ಸಿಂಗಾಪುರದಲ್ಲಿ ಹೊಸ ವರ್ಷ ಆಚರಿಸಲು ತೆರಳುತ್ತಿದ್ದರು. ವಿಮಾನ ಶೋಧಕ್ಕಾಗಿ ಬೃಹತ್ ಕಾರ್ಯಾಚರಣೆ ಮುಂದುವರಿದಿದೆ, ಈ ಮಧ್ಯೆ, ಆಸ್ಟ್ರೇಲಿಯಾ ಕಣ್ಗಾವಲು ವಿಮಾನ ಪತ್ತೆ ಮಾಡಿದ್ದ ಅವಶೇಷವು ಕಣ್ಮರೆಯಾಗಿರುವ ವಿಮಾನಕ್ಕೆ ಸಂಬಂಧಿಸಿದ್ದಲ್ಲ ಎಂದು ಇಂಡೋನೇಷ್ಯಾ ಹೇಳಿದೆ.
”ವಿಮಾನದ ತುರ್ತು ಪತ್ತೆ ಟ್ರಾನ್ಸ್ಮಿಟರ್ನಿಂದ ಯಾವುದೇ ಸಂದೇಶ ಬರುತ್ತಿಲ್ಲ. ಹೀಗಾಗಿ ವಿಮಾನ ಸಮುದ್ರದ ಆಳದಲ್ಲಿ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ನಮಗೆ ದೊರೆತ ಮಾಹಿತಿ ಪ್ರಕಾರ, ಸಮುದ್ರದಲ್ಲಿ ವಿಮಾನ ಪತನಗೊಂಡು ಕಡಲಿನ ತಳ ಸೇರಿರಬಹುದು,” ಎಂದು ಇಂಡೋನೇಷ್ಯಾದ ರಾಷ್ಟ್ರೀಯ ಶೋಧ ಮತ್ತು ರಕ್ಷಣಾ ಸಂಸ್ಥೆ ಮುಖ್ಯಸ್ಥ ಬಂಬಾಂಗ್ ಸೊಯೆಲಿಸ್ಟ್ಯೊ ಹೇಳಿದ್ದಾರೆ.
ಇಂಡೋನೇಷ್ಯಾದ ಬಂಕಾ ದ್ವೀಪದ ಸುತ್ತಲಿನ 270 ನಾಟಿಕಲ್ ಮೈಲು ವ್ಯಾಪ್ತಿಯಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಇಂಡೋನೇಷ್ಯಾ, ಮಲೇಷ್ಯಾ, ಸಿಂಗಾಪುರ ಮತ್ತು ಆಸ್ಟ್ರೇಲಿಯಾದ ಸಿಬ್ಬಂದಿಗಳು ಶೋಧ ಕಾರ್ಯದಲ್ಲಿ ನಿರತರಾಗಿದ್ದಾರೆ. 15 ಹಡಗುಗಳು ಮತ್ತು 30 ವಿಮಾನಗಳು ನಿಯೋಜಿತವಾಗಿವೆ.
”ಸಮುದ್ರದಲ್ಲಿ ಶೋಧ ನಡೆಸುವುದು ಅಷ್ಟು ಸುಲಭವಲ್ಲ. ಅದರಲ್ಲೂ ಗುಡುಗು, ಸಿಡಿಲು, ಬಿರುಗಾಳಿ, ಮಳೆ ಇರುವ ಇಂಥ ವೈಪರೀತ್ಯ ವಾತಾವರಣದಲ್ಲಿ ಕಾರ್ಯಾಚರಣೆ ಅಪಾಯವೂ ಹೌದು,” ಎಂದು ಕಲ್ಲಾ ಅಲವತ್ತುಕೊಂಡಿದ್ದಾರೆ. ಕಾರ್ಯಾಚರಣೆ ಸ್ಥಳದಲ್ಲಿ ಭಾರಿ ಮಳೆ ಸುರಿಯುತ್ತಿದೆ. ಭಾನುವಾರ 44 ಸಾವಿರ ಅಡಿ ಎತ್ತರದವರೆಗೂ ದಟ್ಟವಾದ ಮಾರುತ ಮೋಡಗಳಿದ್ದವು ಎಂದು ಇಂಡೋನೇಷ್ಯಾದ ಹವಾಮಾನ ಸಂಸ್ಥೆ ತಿಳಿಸಿದೆ.
*ತೈಲ ತೇಲುತ್ತಿದೆ: ಈ ಮಧ್ಯೆ, ಇಂಡೋನೇಷ್ಯಾದ ಎರಡು ವಿಮಾನಗಳು ಜಾವಾ ಸಮುದ್ರದ ಪೂರ್ವಕ್ಕಿರುವ ಬೆಲಿಟುಂಗ್ ದ್ವೀಪದಲ್ಲಿ ಎರಡು ಕಡೆ ತೈಲ ತೇಲುತ್ತಿರುವುದನ್ನು ಪತ್ತೆ ಮಾಡಿವೆ. ಆದರೂ ಇದು ಏರ್ಏಷ್ಯಾ ವಿಮಾನದ್ದು ಇರಲಿಕ್ಕಿಲ್ಲ ಎಂದು ಅನುಮಾನಿಸಲಾಗಿದೆ. ಏಕೆಂದರೆ ಈ ತೈಲ ತೇಲುತ್ತಿರುವ ಸ್ಥಳ ತೈಲ ಹೊತ್ತು ಹಡಗುಗಳ ಸಾಗುವ ಮಾರ್ಗವಾಗಿದೆ.
ತಡವಾಗಿ ಬಂದು ಜೀವ ಉಳಿಸಿಕೊಂಡರು ಇಂಡೋನೇಷ್ಯಾದ 10 ಸದಸ್ಯರ ಕುಟುಂಬವೊಂದು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದೆ. ಕಣ್ಮರೆಯಾಗಿರುವ ಏರ್ಏಷ್ಯಾ ವಿಮಾನದಲ್ಲಿ ಈ ಕುಟುಂಬ ಸುರಬಯದಿಂದ ಸಿಂಗಾಪುರಕ್ಕೆ ಹಾರಬೇಕಿತ್ತು. ಆದರೆ, ಕುಟುಂಬ ಕೊಂಚ ತಡವಾಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರಿಂದ ಈ ನತದೃಷ್ಟ ವಿಮಾನ ಪ್ರಯಾಣವನ್ನು ತಪ್ಪಿಸಿಕೊಂಡಿತ್ತು.
ಕ್ರಿಸ್ತಿನಾವತಿ (36), ಈಕೆಯ ಪತಿ, ಇಬ್ಬರು ಮಕ್ಕಳು, ಈಕೆಯ ತಾಯಿ, ಕಿರಿಯ ಸೋದರನ ಕುಟುಂಬ ಸೇರಿ ಒಟ್ಟು 10 ಮಂದಿ ಭಾನುವಾರ ಮುಂಜಾನೆ 7.30ಕ್ಕೆ ಸುರಬಯ ವಿಮಾನ ನಿಲ್ದಾಣದಿಂದ ಸಿಂಗಾಪುರಕ್ಕೆ ಹೊರಟಿದ್ದ ವಿಮಾನದ ಟಿಕೆಟ್ ಬುಕ್ ಮಾಡಿಸಿದ್ದರು. ಆದರೆ ಈ ವಿಮಾನ, 7.30ರ ಬದಲಾಗಿ 5.30ಕ್ಕೇ ಸಿಂಗಾಪುರಕ್ಕೆ ಹೊರಟಿತ್ತು. 7 ಗಂಟೆಯ ಸುಮಾರಿಗೆ ನಿಲ್ದಾಣಕ್ಕೆ ಬಂದ ಕುಟುಂಬ, ಸಿಬ್ಬಂದಿ ಜತೆ ಗಲಾಟೆ ಮಾಡಿದ್ದಾರೆ. ಆದರೆ ಸಿಬ್ಬಂದಿ, ವಿಮಾನ 2 ಗಂಟೆ ಮುಂಚಿತವಾಗಿ ಹೊರಡುತ್ತಿದ್ದ ವಿಷಯ ತಿಳಿಸಲು ಡಿ.15 ಮತ್ತು 16ರಂದು ಅನೇಕ ಬಾರಿ ಕರೆ ಮಾಡಿದ್ದರು. ಕ್ರಿಸ್ತಿನಾವತಿ ಕುಟುಂಬ ಕರೆಗೆ ಲಭ್ಯವಾಗಿರಲಿಲ್ಲ. ಇ-ಮೇಲ್ಗಳನ್ನೂ ನೋಡಿರಲಿಲ್ಲ. ಕೊನೆಗೂ ಕುಟುಂಬದ ಮನವೊಲಿಸಿದ ಸಿಬ್ಬಂದಿ, ಆ ದಿನ ಸಂಜೆ 5.30ಕ್ಕೆ ಸಿಂಗಾಪುರಕ್ಕೆ ಹೊರಡಲಿದ್ದ ವಿಮಾನಕ್ಕೆ ಟಿಕೆಟ್ ಕೊಟ್ಟಿದ್ದರು. ”ವಿಮಾನ ಕಣ್ಮರೆಯ ವಿಷಯ ಕೇಳಿ ನನಗೆ ಒಮ್ಮೆಲೆ ಆಘಾತವಾಯಿತು. ದೇವರೇ ನನ್ನ ಕುಟುಂಬವನ್ನು ಉಳಿಸಿದ್ದಾನೆಂದು ಅಳು ಬಂದು ಬಿಟ್ಟಿತು. ಆಗುವುದೆಲ್ಲ ಒಳ್ಳೆಯದಕ್ಕೆ ಎಂದು ಇದಕ್ಕೇ ಹೇಳುತ್ತಾರೇನೋ. ಆದರೂ, ಆ ವಿಮಾನದಲ್ಲಿದ್ದ ಎಲ್ಲರೂ ಸುರಕ್ಷಿತವಾಗಿ ಮರಳಲೆಂದು ನಾನು ಪ್ರಾರ್ಥಿಸುತ್ತಿದ್ದೇನೆ,” ಎಂದು ಕ್ರಿಸ್ತಿನಾವತಿ ಜೀವ ಉಳಿದ ಸಂತಸದಲ್ಲೂ ಕಣ್ಣೀರುಗರೆಯುತ್ತಿದ್ದಾರೆ.
ಪಪ್ಪಾ, ಬೇಗ ಮನೆಗೆ ಬಾ ”ಪಪ್ಪಾ, ಮನೆಗೆ ಬಾ, ನನಗೆ ನೀನು ಬೇಕು, ನಿನ್ನನ್ನು ತುಂಬ ತುಂಬ ಮಿಸ್ ಮಾಡುತ್ತಿದ್ದೀನಿ, ಆದಷ್ಟು ಬೇಗ ಮರಳಿ ಬಾ. ನನ್ನ ಅಪ್ಪನನ್ನು ಯಾರಾದರೂ ಮನೆಗೆ ಕರೆತನ್ನಿ…”-ಕಣ್ಮರೆಯಾದ ವಿಮಾನದ ಕ್ಯಾಪ್ಟನ್ ಇರ್ಯಾಂಟೊಸ್ ಅವರ 22 ವರ್ಷದ ಮಗಳು ಆ್ಯಂಜೆಲಾ ಆ್ಯಂಗಿ ರನಸ್ಟಿಯಾನಿಸ್ ಹೀಗೆ ಸಾಮಾಜಿಕ ಜಾಲತಾಣದಲ್ಲಿ ಮನವಿ ಹಾಕಿದ್ದಾಳೆ. ಇರ್ಯಾಂಟೋಸ್ ಅವರ ಮನೆ ಪೂರ್ವ ಜಾವಾ ನಗರದ ಸಿಡೊರ್ಜೊನಲ್ಲಿದ್ದು, ಕುಟುಂಬಿಕರಿಗೆ ಒತ್ತಾಸೆಯಾಗಿ ನಿಲ್ಲಲು ಸಂಬಂಧಿಕರು, ಹಿತೈಷಿಗಳು ಹಾಗೂ ಅಕ್ಕಪಕ್ಕದ ನಿವಾಸಿಗಳ ದಂಡೇ ಅಲ್ಲಿ ನೆರೆದಿದೆ. ಎಲ್ಲರೂ ಕುರಾನ್ ಸಾಲುಗಳನ್ನು ಪಠಿಸುತ್ತ, ಇರ್ಯಾಂಟೋಸ್ ಸೇರಿ ವಿಮಾನದಲ್ಲಿದ್ದ ಎಲ್ಲರೂ ಸುರಕ್ಷಿತವಾಗಿ ಮನೆಗೆ ಮರಳಲಿ ಎಂದು ಅಲ್ಲಾಹುವಿನಲ್ಲಿ ಬೇಡುತ್ತಿದ್ದಾರೆ. ”ಇರ್ಯಾಂಟೋಸ್ ತುಂಬ ಒಳ್ಳೆಯ ವ್ಯಕ್ತಿ. ಆತ ನಮ್ಮ ನೆರೆ ಮನೆಯಲ್ಲಿದ್ದರು ಎಂಬುದೇ ನಮಗೊಂದು ಖುಷಿ. ಸಾವಿರಾರು ಗಂಟೆಗಳ ಹಾರಾಟ ಅನುಭವ ಅವರದಾಗಿತ್ತು. ಆದರೂ ಇದೇಕೆ ಹೀಗಾಯಿತೋ ಗೊತ್ತಾಗುತ್ತಿಲ್ಲ,” ಎಂದು ಕಣ್ಣೀರು ಹಾಕುತ್ತಲೇ ನೆನೆದವರು ಇರ್ಯಾಂಟೋಸ್ ನೆನೆದವರು ನೆರೆಮನೆಯ ಬಜಿಯಾಂಟೊ ಜೊಯೊನೆಗೊರೊ.