ನವದೆಹಲಿ, ನ. 25: ನಕ್ಸಲೀಯರ ದಾಳಿಯಿಂದ ನಲುಗಿರುವ ಜಾರ್ಖಂಡ್ ಹಾಗೂ ಭಯೋತ್ಪಾದಕರ ಕೆಂಗಣ್ಣಿಗೆ ಗುರಿಯಾಗಿರುವ ಕಾಶ್ಮೀರದಲ್ಲಿ ವಿಧಾನಸಭೆಗೆ ಮಂಗಳವಾರ ನಡೆದ ಪ್ರಥಮ ಹಂತದ ಚುನಾವಣೆಯಲ್ಲಿ ಶೇಕಡಾವಾರು ಮತದಾನ ಅತ್ಯುತ್ತಮವಾಗಿದೆ. ಜಮ್ಮು ಕಾಶ್ಮೀರ: ಜಮ್ಮು ಕಾಶ್ಮೀರದ 15 ಕ್ಷೇತ್ರಗಳಲ್ಲಿ ಶೇ. 72.3ರಷ್ಟು ಮತದಾನವಾಗಿದೆ. ಪ್ರತ್ಯೇಕವಾದಿಗಳು ಚುನಾವಣೆ ಬಹಿಷ್ಕರಿಸಿದ್ದರೂ ಇದು ಹಿಂದಿನ ಚುನಾವಣೆಗಿಂತ ಶೇ. 9ರಷ್ಟು ಹೆಚ್ಚು ಎಂಬುದು ಗಮನಾರ್ಹ. ಇಲ್ಲಿ 7 ಸಚಿವರು ಸೇರಿದಂತೆ 12 ಹಾಲಿ ಶಾಸಕರ ಸಹಿತ 123 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಮತದಾನ: ಕಾಶ್ಮೀರ – ಶೇ. 72.3, ಜಾರ್ಖಂಡ್ – ಶೇ. 61.92 ಸಂಜೆ 4 ಗಂಟೆಗೇ ಚುನಾವಣೆ ಮುಕ್ತಾಯಗೊಳ್ಳಬೇಕೆಂದು ಸೂಚಿಸಿದ್ದರೂ ಕೆಲವೆಡೆ ಮುಂದುವರಿಯುತ್ತಿದ್ದುದು ಕಂಡುಬಂತು. ಈ ಹಿನ್ನೆಲೆಯಲ್ಲಿ ಶೇಕಡಾವಾರು ಮತದಾನ ಇನ್ನೂ 2-3ರಷ್ಟು ಹೆಚ್ಚುವ ನಿರೀಕ್ಷೆ ಇದೆ ಎಂದು ಚುನಾವಣೆ ಆಯೋಗದ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಉಪ ಚುನಾವಣಾ ಆಯುಕ್ತ ವಿನೋದ ಜುಟ್ಶಿ ನವದೆಹಲಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. “ಚುನಾವಣೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಮೊದಲ ಹಂತವು ಶಾಂತಿಯುತವಾಗಿ ಮುಗಿದಿದೆ. ಇದು ಶೇ. 100ರಷ್ಟು ದೋಷರಹಿತ ಚುನಾವಣೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರತ್ಯೇಕತಾವಾದಿಗಳಾದ ಹುರಿಯತ್ ಕಾನ್ಫರೆನ್ಸ್ ಹಾಗೂ ಜೆಕೆಎಲ್ಎಫ್ ಸಂಘಟನೆಗಳು ಚುನಾವಣೆ ಬಹಿಷ್ಕರಿಸುವಂತೆ ಕರೆ ನೀಡಿದ್ದವು. ಆದರೂ ಮತದಾನದ ಪ್ರಮಾಣದಲ್ಲಿ ಗಣನೀಯ ಹೆಚ್ಚಳ ಕಂಡುಬಂದಿರುವುದರಿಂದ ಪ್ರತ್ಯೇಕತಾವಾದಿಗಳಿಗೆ ಮುಖಭಂಗವಾದಂತಾಗಿದೆ. ಜಾರ್ಖಂಡ್: ಈ ರಾಜ್ಯದ 13 ಕ್ಷೇತ್ರಗಳಲ್ಲಿ ಮಂಗಳವಾರ ನಡೆದ ಚುನಾವಣೆಯಲ್ಲಿ ಶೇ. 61.92 ರಷ್ಟು ಮತದಾನವಾಗಿದೆ. ಕೆಲವೆಡೆ ಮತಯಂತ್ರ ಹಾನಿ ಸಂಭವಿಸಿದ್ದು ಬಿಟ್ಟರೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಮತದಾನದ ಪ್ರಮಾಣ ಇನ್ನೂ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಚುನಾವಣೆ ಆಯೋಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮತದಾನ: ಕಾಶ್ಮೀರ – ಶೇ. 72.3, ಜಾರ್ಖಂಡ್ – ಶೇ. 61.92 ಚುನಾವಣೆ ನಡೆದ ಹೆಚ್ಚಿನವು ದಲಿತ ಮೀಸಲು ಕ್ಷೇತ್ರಗಳಾಗಿದ್ದವು. 191 ಹಾಗೂ 192ನೇ ಸಂಖ್ಯೆಯ ಚುನಾವಣೆ ಬೂತ್ನಲ್ಲಿ ಮತಯಂತ್ರ ಹಾನಿಗೊಳಗಾಗಿದ್ದವು. ಈ ಹಿನ್ನೆಲೆಯಲ್ಲಿ ಇಲ್ಲಿ ಚುನಾವಣೆಯನ್ನು ರದ್ದುಪಡಿಸಲಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.