ಅನಿವಾಸಿ ಭಾರತೀಯರು

ಕೊರೋನಾ ಲಾಕ್‌ಡೌನ್: ಹುಟ್ಟೂರಿಗೆ ದಿನಸಿ ಕಿಟ್ ನೀಡಿದ ಉದ್ಯಮಿ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ

Pinterest LinkedIn Tumblr

ಕುಂದಾಪುರ: ಫಾರ್ಚೂನ್ ಗ್ರೂಫ್ ಆಫ್ ಹೋಟೆಲ್ಸ್ ಸಂಸ್ಥೆ ಆಡಳಿತ ನಿರ್ದೇಶಕ, ವಕ್ವಾಡಿ ಮೂಲದ ದುಬೈ ಉದ್ಯಮಿ ವಕ್ವಾಡಿ‌ ಪ್ರವೀಣ್ ಕುಮಾರ್ ಶೆಟ್ಟಿ ಕೊರೋನಾ ಸಂಕಷ್ಟದ ಸಮಯದಲ್ಲಿ ಆರ್ಥಿಕವಾಗಿ ಹಿಂದುಳಿದ ಜನರಿಗೆ ಕಿಟ್ ವಿತರಿಸುವ ಮೂಲಕ‌ ಮಾದರಿ ಕೆಲಸ ಮಾಡಿದ್ದಾರೆ.

(ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ)

ಕೊರೋನಾ ಲಾಕ್‌ಡೌನ್ ಹಿನ್ನೆಲೆ ಉದ್ಯಮಗಳು ಸ್ಥಗಿತವಾಗಿದೆ. ವರ್ಷದಿಂದಲೂ ಕೆಲವು ವ್ಯವಹಾರಗಳು ಇಲ್ಲದಾಗಿದೆ. ಎರಡನೇ ಅಲೆಯ ಕೊರೋನಾ ಲಾಕ್ಡೌನ್ ಉದ್ಯಮಿಗಳು ಸೇರಿದಂತೆ ಅವರನ್ನು ಅವಲಂಭಿಸಿದ ಅದೆಷ್ಟೋ ಮಂದಿಗೆ ಮತ್ತೊಂದಷ್ಟು ಹೊಡೆತ ನೀಡಿದೆ. ಇನ್ನು ಗ್ರಾಮೀಣ ಭಾಗದಲ್ಲಿ ಬಹಳಷ್ಟು ಮಂದಿ ಕೆಲಸ ಕಾರ್ಯವಿಲ್ಲದೆ ಸಂಕಷ್ಟಕ್ಕೀಡಾಗಿದ್ದಾರೆ. ಅಂತವರಿಗೆ ಸಹಕಾರಿಯಾಗಲು ಪ್ರವೀಣ್ ಕುಮಾರ್ ಶೆಟ್ಟಿ ಮುಂದೆ ಬಂದಿದ್ದು ಲಕ್ಷಾಂತರ ಮೌಲ್ಯದ 150ಕ್ಕೂ ಅಧಿಕ ನಿತ್ಯ ಬಳಕೆಯ ಆಹಾರ ಸಾಮಾಗ್ರಿ ಕಿಟ್ ನೀಡಿದ್ದಾರೆ.

ವಕ್ವಾಡಿ ಪ್ರೆಂಡ್ಸ್ (ರಿ) ವಕ್ವಾಡಿ, ಆಸರೆ ವಕ್ವಾಡಿ ಸದಸ್ಯರಿಂದ ವಿತರಣೆ…
ಪ್ರವೀಣ್ ಶೆಟ್ಟಿಯವರು ನೀಡಿದ ಕಿಟ್ ಅನ್ನು ವಕ್ವಾಡಿ ಫ್ರೆಂಡ್ಸ್, ಆಸರೆ ಸಂಸ್ಥೆ ಸದಸ್ಯರು ಮನೆಮನೆಗೆ ತೆರಳಿ ವಿತರಿಸಿದ್ದಾರೆ. ಮಾತ್ರವಲ್ಲ ಎರಡೂ ಸಂಸ್ಥೆಯಿಂದಲೂ ಪ್ರತ್ಯೇಕ 100 ದಿನಸಿ ಕಿಟ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ವಕ್ವಾಡಿಯ ರಘುರಾಮ್ ಶೆಟ್ಟಿ, ಪ್ರವೀಣ್ ಶೆಟ್ಟಿ ಸಣ್ಣಗಲ್ ಮನೆ, ಸತೀಶ್ ಪೂಜಾರಿ, ಆನಂದ್ ಆಚಾರ್, ಕೀರ್ತಿ ಶೆಟ್ಟಿ, ಅಂಕಿತ್ ಶೆಟ್ಟಿ, ಪವನ್ ಶೆಟ್ಟಿ, ಹರೀಶ್, ಕಿರಣ್ ಶೆಟ್ಟಿ ಉಪಸ್ಥಿತರಿದ್ದರು.

ಕಳೆದ ಬಾರಿಯೂ ಮಾನವೀಯತೆ ತೋರಿದ್ದ ಪ್ರವೀಣ್ ಶೆಟ್ಟಿ..
ಮೊದಲನೇ ಅಲೆಯಲ್ಲಿ ಕೊರೊನಾ ಸೋಂಕು ತಡೆಯುವ ಉದ್ದೇಶದಿಂದ ದುಬೈನಲ್ಲಿ ಹೋಟೆಲ್ ಉದ್ಯಮ ಮುಚ್ಚಿದ್ದರಿಂದ ಅಲ್ಲಿ ಕೆಲಸ ಮಾಡುತ್ತಿದ್ದ ಕನ್ನಡಿಗರಿಗೆ ಪ್ರವೀಣ್ ಶೆಟ್ಟಿ ಅವರು ಸ್ವಂತ ಖರ್ಚಿನಲ್ಲಿ ಚಾರ್ಟರ್ಡ್ ವಿಮಾನದ ಮೂಲಕ ತಾಯ್ನಾಡಿಗೆ ತಲುಪಿಸುವ ವ್ಯವಸ್ಥೆ ಮಾಡಿದ್ದರು. ಮಾತ್ರವಲ್ಲ ತನ್ನ ಹೋಟೆಲ್ ಮುಚ್ಚಿದ್ದರೂ ಕೂಡ ಎಲ್ಲಾ ಸಿಬ್ಬಂದಿಗಳಿಗೆ ರಜೆ ಸಹಿತ ವೇತನ ನೀಡಿ ಪ್ರವೀಣ್ ಶೆಟ್ಟಿ ಮಾನವೀಯತೆ ಮೆರೆದಿದ್ದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.