ಕುಂದಾಪುರ: ಮೀನುಗಾರಿಕೆ ಮತ್ತು ಬಂದರು ಇಲಾಖೆ ಉಡುಪಿಯ ಸಹಾಯಕ ಕಾರ್ಯನಿರ್ವಹಣಾ ಇಂಜಿನೀಯರ್ ಅವರ ಬೀಜಾಡಿಯ ಕಿನಾರ ರಸ್ತೆಯ ಚೀಪಾನ್ಬೆಟ್ಟು ಎಂಬಲ್ಲಿರುವ ಮನೆ ಮೇಲೆ ಶುಕ್ರವಾರ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಉಡುಪಿ ಬಂದರು ಮತ್ತು ಮೀನುಗಾರಿಕಾ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್ ನಾರಾಯಣ ಎಂ. ಖಾರ್ವಿ (ಎನ್.ಎಂ. ಖಾರ್ವಿ) ಅವರ ನಿವಾಸದ ಮೇಲೆ ದಾಳಿ ನಡೆಸಿದ ಲೋಕಾ ಅಧಿಕಾರಿಗಳು ಮನೆಯಲ್ಲಿದ್ದ ನಗ- ನಗದು ಹಾಗೂ ಮಹತ್ವದ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.
ಅಕ್ರಮ ಆಸ್ತಿ ಸಂಪತ್ತು ಗಳಿಕೆಯ ಆರೋಪದ ಮೇಲೆ ತಿಂಗಳುಗಳ ಹಿಂದಿನಿಂದಲೇ ಇವರ ಚಲನ-ವಲನಗಳು ಹಾಗೂ ಆಸ್ತಿಯ ಬಗ್ಗೆ ಹದ್ದಿನಕಣ್ಣು ಇಟ್ಟಿದ್ದ ಅಧಿಕಾರಿಗಳು ಶುಕ್ರವಾರ ಬೆಳಿಗ್ಗೆ ದಿಡೀರ್ ದಾಳಿ ನಡೆಸಿದ್ದಾರೆ.
ಎನ್.ಎಂ. ಖಾರ್ವಿ ಕಳೆದ ಮೂವತ್ತು ವರ್ಷಗಳಿಂದಲೂ ಸೇವೆಯಲ್ಲಿದ್ದು ಅಪಾರ ಆಸ್ತಿ ಗಳಿಸಿರುವ ಬಗ್ಗೆ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಲಾಗಿತ್ತು.. ಅದರಂತೆಯೇ ಅಧಿಕಾರಿಗಳು ಖಾರ್ವಿಯವರ ಆಸ್ತಿ ವಿವರದ ಬಗ್ಗೆ ಮಾಹಿತಿ ಕಲೆಹಾಕಿದಾಗ ಕೋಟೇಶ್ವರ ಬೀಜಾಡಿಯಲ್ಲಿ ಐಶಾರಾಮಿ ಮನೆ, ವಿವಿಧ ಭಾಗಗಳಲ್ಲಿ ನಿವೇಶನ, ವಿವಿಧ ಬ್ಯಾಂಕುಗಳಲ್ಲಿ ಖಾತೆ ಹೊಂದಿ ಹಣ ಹೂಡಿದ್ದು, 2 ಬೋಟುಗಳು, 2 ಬೋಟಿನ ಪಾಲುಗಾರಿಕೆ ಹೊಂದಿದ್ದರು ಎನ್ನಲಾಗಿದೆ.
ಬೆಳಗ್ಗೆ 6 ಗಂಟೆ ಸುಮಾರಿಗೆ ಈ ದಾಳಿ ನಡೆದಿದ್ದು ಪ್ರಭಾರ ಎಸ್.ಪಿ. ವೇದಮೂರ್ತಿ, ಡಿ.ವೈ.ಎಸ್.ಪಿ. ಉಮೇಶ ಶೇಟ್, ಇನ್ಸ್ಪೆಕ್ಟರ್ ಮೋಹನ ಕೊಟ್ಟಾರಿ, ದಿಲೀಪ್ ಕುಮಾರ್ ಸೇರಿದಂತೆ ಮಂಗಳೂರು ಉಡುಪಿ ಸಿಬ್ಬಂದಿಗಳನ್ನೊಳಗೊಂಡ 18 ಜನರ ತಂಡ ಮನೆಯಲ್ಲಿ ಪರಿಶೀಲನೆ ನಡೆಸುತ್ತಿದ್ದು ತನಿಖೆ ಪ್ರಗತಿಯಲ್ಲಿದೆ.
ಮೂಲವೊಂದರ ಪ್ರಕಾರ ಇವರೆಗೂ ನಡೆಸಲಾದ ಕಾರ್ಯಾಚರಣೆಯ ವೇಳೆ ಮನೆಯಲ್ಲಿದ್ದ 1.79 ಲಕ್ಷ ನಗದು, ಬಂಗಾರ ಹಾಗೂ ಬೆಳ್ಳಿ ಆಭರಣಗಳು, ಮಹತ್ವದ ದಾಖಲೆ ಪತ್ರಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ಲಭ್ಯವಾಗಬೇಕಾಗಿದೆ.