ಕುಂದಾಪುರ: ಯುವಕನೊಬ್ಬ ಕುಂದಾಪುರದ ಲಾಡ್ಜೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಮಧ್ಯಾಹ್ನ ನಡೆದಿದ್ದು ಸಂಜೆ ವೇಳೆ ಬೆಳಕಿಗೆ ಬಂದಿದೆ. ಇಲ್ಲಿನ ಗೋಪಾಡಿಯ ಹೆಬ್ರಿಮನೆ ನರಸಿಂಹ ಪೂಜಾರಿ ಎಂಬುವರ ಪುತ್ರ ರಾಘವೇಂದ್ರ ಪೂಜಾರಿ ಎಂಬಾತನೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಾತನಾಗಿದ್ದು ಈತ ಬೆಂಗಳೂರಿನಲ್ಲಿ ಬೇಕರಿ ಉದ್ಯಮ ನಡೆಸುತ್ತಿದ್ದ.
ಘಟನೆ ವಿವರ: ರಾಘವೇಂದ್ರ ಪೂಜಾರಿ ಸುಮಾರು ೧೫ ವರ್ಷಗಳಿಂದ ಬೆಂಗಳೂರಿನಲ್ಲಿ ಹೋಟೆಲ್ ಕೆಲಸ ಮಾಡುತ್ತಿದ್ದು ಕಳೆದ ೨ ವರ್ಷಗಳ ಹಿಂದೆ ಬೆಂಗಳೂರು ರಾಜಾಜಿನಗರದಲ್ಲಿ ತನ್ನದೇ ಆದ ಬೇಕರಿ ಆರಂಭಿಸಿದ್ದರು. ಅಲ್ಲದೇ ಇವರಿಗೆ ವಿವಾಹ ನಿಶ್ಚಿತಾರ್ಥವಾಗಿತ್ತು ಎನ್ನಲಾಗಿದೆ ಗುರುವಾರ ಬೆಳಿಗ್ಗೆ ೧೦.೪೫ರ ಸುಮಾರಿಗೆ ಕುಂದಾಪುರದ ಡಿಪ್ಲೋಮ್ಯಾಟ್ ಲಾಡ್ಜ್ನಲ್ಲಿ ಡಬ್ಬಲ್ ರೂಂ ಬುಕ್ ಮಾಡಿದ್ದಾನೆ. ಮಧ್ಯಾಹ್ನದ ಸುಮಾರಿಗೆ ಬಾರಿನಿಂದ ಬಿಯರ್ ತರಿಸಿಕೊಂಡು ಕುಡಿದಿದ್ದ ರಾಘವೇಂದ್ರ ಪೂಜಾರಿ ಒಳಗಿನಿಂದ ಚಿಲಕ ಹಾಕಿಕೊಂಡಿದ್ದು, ಸಂಜೆ ಸಂಜೆಯಾದರೂ ಹೊರಬಂದಿರಲಿಲ್ಲ.
ರೂಂ ಬಾಯ್ ಬರುವ ಸಂದರ್ಭ ರೂಮ್ ಕೀ ಬಾಗಿಲ ಹೊರಭಾಗದ ಲಾಕ್ನಲ್ಲಿ ನೇತಾಡುತ್ತಿದ್ದುದನ್ನು ಗಮನಿಸಿ ಬಾಗಿಲು ತಟ್ಟಿದ್ದಾನೆ, ಬಾಗಿಲು ತೆರೆಯದೇ ಇದ್ದಾಗ ಅನುಮಾನದಿಂದ ಬಾಗಿಲನ್ನು ನೂಕಿದ್ದಾನೆ. ಈ ಸಂದರ್ಭ ಬಾಗಿಲ ಸಂದಿಯಲ್ಲಿ ಒಳಗಿನ ಕನ್ನಡಿಯಲ್ಲಿ ಯುವಕನ ಶವ ನೇತಾಡುತ್ತಿದ್ದುದನ್ನು ಗಮನಿಸಿ ಆತ್ಮಹತ್ಯೆ ಮಾಡಿಕೊಂಡಿರುವುದು ಖಚಿತವಾಗಿದೆ. ನಂತರ ರಾತ್ರಿ ಮನೆಯವರು ಹಾಗೂ ಪೊಲೀಸರು ಆಗಮಿಸಿ ಸ್ಥಳೀಯರ ಸಹಕಾರದಿಂದ ಬಾಗಿಲು ಒಡೆದು ಒಳಪ್ರವೇಶಿಸಿದ್ದಾರೆ. ರಾಘವೇಂದ್ರ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದಲೇ ರೂಂಗೆ ಬರುವ ಸಮಯದಲ್ಲಿಯೇ ಹೊಸ ಬ್ಯಾಗ್ ಖರೀದಿಸಿ ಅದರಲ್ಲಿ ನೈಲಾನ್ ಹಗ್ಗ ತಂದಿದ್ದ ಎನ್ನಲಾಗಿದೆ.
ಅನಾರೋಗ್ಯ ಶಂಕೆ: ಕಳೆದ ಒಂದು ತಿಂಗಳಿನಿಂದ ರಾಘವೇಂದ್ರನಿಗೆ ಕೊಂಚ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಹಾಗಾಗಿ ಈತ ಊರಿಗೆ ಬಂದಿದ್ದು, ಇಲ್ಲಿಯೇ ಚಿಕಿತ್ಸೆ ಮಾಡಿಸಿಕೊಳ್ಳುತ್ತಿದ್ದ. ಉರಿ ಮೂತ್ರ ಸಮಸ್ಯೆ ಇದೆಯೆಂದು ಸ್ನೇಹಿತರ ಬಳಿ ಹೇಳಿಕೊಳ್ಳುತದತಿದ್ದ ಈತನಿಗೆ ಸ್ನೇಹಿತರು ಇದೆಲ್ಲವೂ ಮಾಮೂಲಿ ದೃತಿಗೆಡಬೇಡ ಎಂದು ಹಲವು ಬಾರೀ ಬುದ್ದಿಮಾತು ಹೇಳಿದ್ದಾರೆ. ಆದರೂ ಕೂಡ ಈತ ಇದರಿಂದ ತುಂಬಾ ಜಿಗುಪ್ಸೆಗೊಳಗಾಗಿದ್ದ ಎಂದು ಆತನ ಸಂಬಂಧಿಕರು ಹೇಳುತ್ತಾರೆ.
ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.