International

‘ರೂಂ ಖಾಲಿ ಮಾಡಿ’ ಎಂದಿದ್ದಕ್ಕೆ ಅಮೇರಿಕಾದಲ್ಲಿ ಗ್ರಾಹಕನಿಂದ ಉಡುಪಿಯ ಯುವಕನಿಗೆ ಗುಂಡೇಟು

Pinterest LinkedIn Tumblr

ವಾಷಿಂಗ್ಟನ್/ಉಡುಪಿ: ಅಮೆರಿಕಾದಲ್ಲಿ ಅಪರಿಚಿತ ಗುಂಡಿನ ದಾಳಿಗೆ ಉಡುಪಿಯ ಕಾಪುವಿನ ಶಿರ್ವ ಮೂಲದ ಯುವಕನೋರ್ವ ಮೃತಪಟ್ಟಿದ್ದಾರೆ.

ಮೃತ ಯುವಕನನ್ನು ಸಾಹಿತಿ ಕೆ.ಶಿವರಾಮ ಐತಾಳ್ ಅವರ ಮೊಮ್ಮಗ ಹಾಗೂ ಪ್ರಸ್ತುತ ಮೈಸೂರಿನ ಕುವೆಂಪುನಗರದ ನಿವಾಸಿ ಸುದೇಶ್ ಚಂದ್ ಅವರ ಮಗ ಅಭಿಷೇಕ್ ಸುದೇಶ್ ಭಟ್ (25) ಎಂದು ಗುರುತಿಸಲಾಗಿದೆ. ಅಮೆರಿಕದ ಸ್ಯಾನ್‍ಬರ್ನಾಡಿಯೊ ಎಂಬ ಪ್ರದೇಶದಲ್ಲಿ ಅಪರಿಚಿತ ಗುಂಡಿನ ದಾಳಿಯಿಂದ ಮೃತಪಟ್ಟಿದ್ದಾರೆ.

ಇಂಜಿನಿಯರಿಂಗ್​ ಪದವಿ ಬಳಿಕ ಸ್ನಾತಕೋತ್ತರ ಅಧ್ಯಯನಕ್ಕೆ 2018ರಲ್ಲಿ ಅಮೆರಿಕಕ್ಕೆ ತೆರಳಿದ್ದರು. ಅಲ್ಲಿ ಎಂ.ಎಸ್ ಓದುತ್ತಿದ್ದ ಅಭಿಷೇಕ್ ಕಳೆದ ಒಂದೂವರೆ ವರ್ಷದಿಂದ ಅಮೆರಿಕದಲ್ಲಿ ವಾಸವಿದ್ದರು. ವಿದ್ಯಾಭ್ಯಾಸ ಜೊತೆಗೆ ಹೋಟೆಲ್‍ವೊಂದರಲ್ಲಿ ರಿಸಪ್ಷನಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಹೊಟೆಲ್​ನಲ್ಲಿ ಲಾಡ್ಜಿಂಗ್​ ವ್ಯವಸ್ಥೆ ಇತ್ತು. ಅಲ್ಲಿಗೆ ಆಗಮಿಸಿದ್ದ ಗ್ರಾಹಕರೋರ್ವರು ಸಮಯ ಮುಗಿದರೂ ಉಳಿದುಕೊಂಡಿದ್ದರು. ಅವರ ಬಳಿ ಹೋಗಿ ರೂಂ ಖಾಲಿ ಮಾಡಿ ಎಂದು ಅಭಿಷೇಕ್​ ಹೇಳಿದ್ದು ಅಭಿಷೇಕ್​ ಮತ್ತು ಗ್ರಾಹಕನ ನಡುವೆ ಮಾತಿನ ಚಕಮಕಿ ನಡೆದಿತ್ತು. ಇದೇ ವೇಳೆ ಸಿಟ್ಟಿಗೆದ್ದ ಆ ಗ್ರಾಹಕ ಅಭಿಷೇಕ್​ ಹಣೆಗೆ ಗುಂಡು ಹೊಡೆದಿದ್ದಾನೆ. ಈ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದೆ.

ಅಭಿಷೇಕ್ ತಂದೆ ಸುದೇಶ್ ಅವರು ಮೈಸೂರಿನಲ್ಲಿ ಯೋಗ ಶಾಲೆ ನಡೆಸುತ್ತಿದ್ದು ಎರಡು ದಿನಗಳ ಹಿಂದೆ ಅವರ ತಂದೆಯ ಜೊತೆ ಫೋನಿನಲ್ಲಿ ಮಾತನಾಡಿದ್ದು, ನಂತರ ಘಟನೆ ನಡೆಯುವ 15 ನಿಮಿಷಕ್ಕೂ ಮುಂಚೆ ಮನೆಗೆ ಸಂದೇಶ ಕೂಡ ಕಳುಹಿಸಿದ್ದಾರೆ ಎನ್ನಲಾಗಿದೆ.

Comments are closed.