ಆರೋಗ್ಯ

ಲಾರಿಯಲ್ಲಿ ಕೂಲಿಕಾರ್ಮಿಕರ ಸಾಗಾಟ- ಬೈಂದೂರು ಠಾಣೆಯಲ್ಲಿ ಮಾಲಕ, ಇಬ್ಬರು ಕ್ಲೀನರ್‌ಗಳ ಮೇಲೆ ಕೇಸು: ಲಾರಿ ವಶಕ್ಕೆ

Pinterest LinkedIn Tumblr

ಕುಂದಾಪುರ: ಕೋವಿಡ್-19 ಕೊರೋನಾ ವೈರಸ್ ಹಿನ್ನಲೆ ಲಾಕ್ ಡೌನ್ ಜಾರಿಯಲ್ಲಿದೆ. ಅಲ್ಲದೇ ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಯಾರೂ ಸಂಚರಿಸಿದಂತೆ ಕಠಿಣ ಆದೇಶವಿದ್ದರೂ ಕೂಡ ಲಾರಿಯಲ್ಲಿ ಜನರನ್ನು ಸಾಗಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಶಿರೂರು ಟೋಲ್ ಗೇಟ್ ಚೆಕ್ ಪೋಸ್ಟ್‌ನಲ್ಲಿ ಪೊಲೀಸರು ಲಾರಿ ಚಾಲಕ, ಕ್ಲೀನರ್ ಸಹಿತ ಮೂವರನ್ನು ಬಂಧಿಸಿ ಲಾರಿ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ಲಾರಿ ಮಾಲಕ‌ ಮತ್ತು ಚಾಲಕನಾಗಿರುವ ರಾಯಚೂರು ಲಿಂಗನೂರು ಮೂಲದ ಮೈಬುಬ್ ನದಾಪ್ (24), ಕ್ಲೀನರ್ ಗಳಾದ ಬಾಗಲಕೋಟೆ ಮೂಲದ ದಾವುದ್ ಸಾಬ್ (24), ರಾಯಚೂರು ಮೂಲದ ಉಮೇಶ್ ನಾಯಕ್ (18) ಬಂಧಿತರು.

ನಡೆದಿದ್ದೇನು?
ಗಂಗೊಳ್ಳಿ ಪೊಲೀಸ್ ಠಾಣಾ ಪಿಎಸ್ಐ ಭೀಮಾಶಂಕರ್ ಸಿನ್ನೂರ ಸಂಗಣ್ಣ ಹಾಗೂ ಸಿಬ್ಬಂದಿಗಳು ಬೈಂದೂರು ಸಮೀಪದ ಶಿರೂರು ಟೋಲ್ ಗೇಟ್ ಬಳಿಯ ಚೆಕ್ ಪೋಸ್ಟ್‌ನಲ್ಲಿ ಕರ್ತವ್ಯದಲ್ಲಿರುವಾಗ ಶನಿವಾರ ತಡರಾತ್ರಿ ಬೈಂದೂರು ಕಡೆಯಿಂದ ಕೆಎ 36 ಬಿ 7691ನೇ ಲಾರಿಯೊಂದು ಬಂದಿದ್ದು ಆ ಲಾರಿಯನ್ನು ತಡೆದು ನಿಲ್ಲಿಸಿ ಪರಿಶೀಲಿಸುವಾಗ ಲಾರಿಯಲ್ಲಿ ಚಾಲಕ ಮತ್ತು ಇಬ್ಬರು ಕ್ಲೀನರ್ ಇದ್ದು, ಅಲ್ಲದೇ ಲಾರಿಯ ಹಿಂಬದಿಯಲ್ಲಿ ಸುಮಾರು 11 ಜನ ಪ್ರಯಾಣಿಕರು ಇದ್ದರು. ಪ್ರಯಾಣಿಸುತ್ತಿದ್ದ ಎಲ್ಲಾ ಜನರು ಕೂಲಿ ಕೆಲಸದ ಬಗ್ಗೆ ಉಡುಪಿ ಜಿಲ್ಲೆಗೆ ಬಂದಿದ್ದು ಮಂದರ್ತಿ ಪರಿಸರದಲ್ಲಿ ಕೆಲಸ ಮಾಡಿಕೊಂಡಿದ್ದು ಲಾಕ್ ಡೌನ್ ಆದ ನಂತರ ಊರಿಗೆ ಹೋಗಲಾಗಿರಲಿಲ್ಲ. ಈ ಲಾರಿ ಕಾರ್ಮಿಕರ ಊರಿನ ಕಡೆಗೆ ಹೋಗುವ ಬಗ್ಗೆ ಮಾಹಿತಿ ತಿಳಿದು ಬ್ರಹ್ಮಾವರದಿಂದ ಲಾರಿಯಲ್ಲಿ ತಮ್ಮ ಊರಿನ ಕಡೆಗೆ ಪ್ರಯಾಣಿಸುತ್ತಿದ್ದ ಬಗ್ಗೆ ವಿಚಾರಣೆ ವೇಳೆ ತಿಳಿದುಬಂದಿದೆ.

(ಭೀಮಾಶಂಕರ್- ಗಂಗೊಳ್ಳಿ ಪಿಎಸ್ಐ)

ಲಾರಿಯ ಚಾಲಕನು ಲಾರಿಯ ಪರವಾನಿಗೆ ಆದೇಶ ಉಲ್ಲಂಘಿಸಿ ಗೂಡ್ಸ್ ವಾಹನದಲ್ಲಿ ಪ್ರಯಾಣಿಕರನ್ನು ಸಾಗಿಸಿದ್ದಲ್ಲದೇ ಗುಂಪುಗೂಡಿ ಸಂಚರಿಸುವುದರಿಂದ ಸಾಂಕ್ರಾಮಿಕ ರೋಗ ಹರಡುವ ಸಾದ್ಯತೆ ಇದೆಯೆಂಬ ವಿಷಯ ತಿಳಿದೂ ಸಹ ಲಾರಿಯ ಚಾಲಕ ಹಾಗೂ ಕ್ಲೀನರ್‌ರವರು ಗೂಡ್ಸ್ ಲಾರಿಯಲ್ಲಿ ಪ್ರಯಾಣಿಕರನ್ನು ಒಟ್ಟು ಸೇರಿ ಸಾಗಿಸಿದ್ದಾರೆ. ಇದೇ ರೀತಿ ಸಂಚರಿಸಿದಲ್ಲಿ ಸಾರ್ವಜನಿಕರ ಪ್ರಾಣಕ್ಕೆ ಅಪಾಯಕಾರಿಯಾದ ಕೋವಿಡ್-19 (ಕರೋನಾ ವೈರಸ್) ವ್ಯಾಪಕವಾಗಿ ರೋಗದ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ಲಾರಿಯ ಚಾಲಕ ಹಾಗೂ ಇಬ್ಬರು ಕ್ಲೀನರ್‌ ಹಾಗೂ ಲಾರಿಯನ್ನು ವಶಕ್ಕೆ ಪಡೆದುಕೊಂಡು ಬೈಂದೂರು ಠಾಣೆಗೆ ತಂದು ಹಾಜರುಪಡಿಸಲಾಗಿದೆ.

ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಐಪಿಸಿ ಸೆಕ್ಷನ್ 269 ಜೊತೆಗೆ 34 ಮತ್ತು ಮೋಟಾರ್ ವಾಹನ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ‌.

(ವರದಿ- ಯೋಗೀಶ್ ಕುಂಭಾಸಿ)

Comments are closed.