ಆರೋಗ್ಯ

ಕೊರೋನಾ ಜಾಗೃತಿ ಹೇಳಿದ್ದಕ್ಕೆ ಪೊಲೀಸರಿಗೆ ಹಲ್ಲೆ ಯತ್ನ- ಉಪ್ಪಿನಕುದ್ರು ಯುವಕನ ಬಂಧನ

Pinterest LinkedIn Tumblr

ಕುಂದಾಪುರ: ಕೊರೋನಾ ಬಗ್ಗೆ ಜಾಗೃತಿ ವಹಿಸು….ಮುಖಕ್ಕೆ ಮಾಸ್ಕ್ ಹಾಕು ಎಂದು ಹೇಳಿದ ಪೊಲೀಸ್ ಅಧಿಕಾರಿಗೆ ಉಡಾಫೆಯಾಗಿ ಮಾತನಾಡಿ ಪೊಲೀಸ್ ಕಾನ್ಸ್‌ಟೇಬಲ್ ಮೇಲೆ ಹಲ್ಲೆಗೆ ಮುಂದಾದ ಯುವಕನನ್ನು ಬಂಧಿಸಿ ಪೊಲೀಸರು ಜೈಲಿಗೆ ಕಳಿಸಿದ್ದಾರೆ.

ಕುಂದಾಪುರ ತಾಲೂಕು ಉಪ್ಪಿನಕುದ್ರು ನಿವಾಸಿ ವಿಶ್ವನಾಥ ಶೇರುಗಾರ (23) ಬಂಧಿತ ಯುವಕ. ಈತ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದು ರಜೆಯ ಹಿನ್ನೆಲೆ ಊರಿಗೆ ಬಂದಿದ್ದ. ಕೊರೋನಾ ಮಹಾಮಾರಿ ನಿಯಂತ್ರಕ್ಕಾಗಿ ವಿಧಿಸಿರುವ ಕರ್ಫ್ಯೂ ಮೂರನೇ ದಿನಕ್ಕೆ ಕಾಲಿಟ್ಟ ಬೆನ್ನಲ್ಲೆ ಪೊಲೀಸರ ಮಾತಿಗೆ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಕುಂದಾಪುರದ ಯುವಕನ ಮೇಲೆ ಕುಂದಾಪುರ ಠಾಣೆಯಲ್ಲಿ ಕೇಸು ದಾಖಲಾಗಿದೆ.

ಇದು ಕುಂದಾಪುರದಲ್ಲಿ ಕರ್ಫ್ಯೂ ನಿಯಮ ಉಲ್ಲಂಘಿಸಿದ ಪ್ರಥಮ ಪ್ರಕರಣವಾಗಿ ದಾಖಲಾಗಿದೆ. ಗುರುವಾರ ಬೆಳಿಗ್ಗೆ ಎಸಿ ಸಮ್ಮುಖದಲ್ಲೇ ಕುಂದಾಪುರ ಶಾಸ್ತ್ರೀವೃತ್ತದ ಚೆಕ್‌ಪೋಸ್ಟ್‌ನಲ್ಲಿ ವಾಃನ ತಪಾಸಣೆ ನಡೆಸುತ್ತಿರುವ ವೇಳೆಯಲ್ಲಿ ಬೈಕ್‌ನಲ್ಲಿ ಬಂದ ಯುವಕ ವಿಶ್ವನಾಥ್ ಪೊಲೀಸರ ಮಾತಿಗೆ ವಾಗ್ವಾದಕ್ಕಿಳಿದಿದ್ದಾನೆ.

ಕೂಡಲೇ ಡಿಸಿಗೆ ಕರೆ ಮಾಡುತ್ತೇನೆಂದು ಫೋನ್ ತೆಗೆದು ಪೊಲೀಸರೊಂದಿಗೆ ತಗಾದೆ ಎತ್ತಿದ ವಿಶ್ವನಾಥ್ ನಡೆ ಪಿ‌ಎಸ್‌ಐ ಹರೀಶ್ ಆರ್ ನಾಯ್ಕ್ ಅವರ ಆಕ್ರೋಶಕ್ಕೆ ಕಾರಣವಾಯಿತು. ನಾವಿಲ್ಲಿ ಕತ್ತೆ ಕಾಯಲಿಕ್ಕೆ ನಿಂತಿದ್ದೇವಾ? ಹಗಲು ರಾತ್ರಿ ನಿಮ್ಮ ಆರೋಗ್ಯಕ್ಕಾಗಿ ನಿದ್ದೆ ಬಿಟ್ಟು ಕರ್ತವ್ಯ ಮಾಡುತ್ತಿದ್ದೇವೆ ಎಂದು ಲಾಠಿ ಮೂಲಕ ಹೊಡೆಯಲು ಮುಂದಾದರು. ಮಾಸ್ಕ್ ಧರಿಸದೆ ಸಾರ್ವಜನಿಕ ಸ್ಥಳದಲ್ಲಿ ಓಡಾಡೋದು ಎಷ್ಟರಮಟ್ಟಿಗೆ ಸರಿ? ಮಾಸ್ಕ್ ಇಲ್ಲದಿದ್ದರೆ ಕರ್ಚೀಫ್ ಇಲ್ಲವಾ ಎಂದಾಗ ಕರ್ಚೀಫ್ ಇಲ್ಲ. ಕರ್ಚೀಫ್ ತೆದೆಕೊಳ್ಳಲು ಹಣವಿಲ್ಲ ಎಂದು ಉಡಾಫೆ ಮಾತನಾಡಿದ ಯುವಕ ಮಾತು ಪೊಲೀಸರನ್ನು ಸಿಟ್ಟಿಗೊಳಿಸಿತ್ತು. ಪೊಲೀಸರು ಲಾಟ್ಘಿ ಎತ್ತಲು ಮುಂದಾದಾಗ ಪೊಲೀಸ್ ಸಿಬ್ಬಂದಿಯೊಬ್ಬರನ್ನು ತಳ್ಳಿ ಕರ್ತವ್ಯಕ್ಕೂ ಈ ಯುವಕ ಅಡ್ಡಿ ಪಡಿಸಿದ್ದಾನೆ. ಈ ವೇಳೆ ಅಲ್ಲೇ ಸ್ಥಳದಲ್ಲಿದ್ದ ಕುಂದಾಪುರ ಎಸಿ ರಾಜು ಕೆ ಆತನ ಮೇಲೆ ಕೇಸು ಜಡಿದು ಒದ್ದು ಒಳಗೆ ಹಾಕಿ ಅನ್ನುತ್ತಿಂದ್ದಂತೆಯೇ ಯುವಕನನ್ನು ಪೊಲೀಸರು ಜೀಪಿನಲ್ಲಿ ಕೂರಿಸಿ ಠಾಣೆಗೆ ಕರೆದುಕೊಂಡು ಹೋಗಿದ್ದು ಪ್ರಕರಣ ದಾಖಲಿಸಿದ್ದಾರೆ.

ಇದೀಗ ಕುಂದಾಪುರ ಠಾಣೆಯಲ್ಲಿ ಕರ್ಫ್ಯೂ ಆದೇಶ ಉಲ್ಲಂಘನೆ ಆರೋಪದಡಿಯಲ್ಲಿ ಯುವಕನ ಮೇಲೆ ಕೇಸು ದಾಖಲಾಗಿರುವ ಮೊದಲ ಪ್ರಕರಣವಾಗಿದೆ. ಸರ್ಕಾರೀ ಕರ್ತವ್ಯಕ್ಕೆ ಅಡ್ಡಿ (ಐಪಿಸಿ ಸೆಕ್ಷನ್ 353) ಹಾಗೂ ಸಾಂಕ್ರಮಿಕ ರೋಗಹರಡುವಿಕೆ ಪರಿಸ್ಥಿತಿಯಲ್ಲಿ ನಿರ್ಲಕ್ಷ್ಯ ತೋರಿದ ಕಾರಣಕ್ಕೆ ಸೆಕ್ಷನ್ 269ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.