ಹಳ್ಳಿಗಾಡುಗಳಲ್ಲಿ ಹುಡುಕುತ್ತಾ ಹೋದರೆ ದೇಶದ ಹಲಸು ಬೆಳೆಯುವ ಪ್ರದೇಶಗಳಲ್ಲಿ ಗಣನೀಯ ಮಟ್ಟಿಗೆ ಅಕಾಲ ಹಲಸು ಲಭ್ಯವಿದೆ. ಆದರೆ ಇದನ್ನು ಗುರುತಿಸಿ ಆರ್ಥಿಕ ಮತ್ತು ಸಾಮಾಜಿಕ ಪ್ರಯೋಜನ ತೆಗೆದುಕೊಳ್ಳುವ ಯತ್ನ ಆಗಿಯೇ ಇಲ್ಲ.ಹಲಸಿನ ಬೆಳೆ ಸೀಸನಲ್ ಅಲ್ಲ.
1.ರೋಗನಿರೋದಕ ಶಕ್ತಿ ಹೆಚ್ಚು ಮಾಡುತ್ತದೆ:
ಹಲಸಿನ ಹಣ್ಣು ತಿಂದರೆ ಕಾಯಿಲೆ ಬರುತ್ತದೆ ಎಂದು ತಿನ್ನಲು ಭಯಪಡುವಾಗ ಇದನ್ನು ತಿಂದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಅಂದರೆ ಆಶ್ಚರ್ಯವಾಗುವುದು ಸಹಜ. ಹಲಸಿನ ಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ಉತ್ತಮ ಪೋಷಕಾಂಶಗಳಿದ್ದು ಶೀತ, ಸೋಂಕು ಇವುಗಳನ್ನು ತಪ್ಪಿಸಲು ಸಹಕಾರಿಯಾಗಿದೆ. ಇದರಲ್ಲಿ antioxidant ಪ್ರಮಾಣ ಅಧಿಕವಾಗಿದೆ.
2. ದೇಹದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಿಸುತ್ತದೆ:
ದೇಹದಲ್ಲಿ ಖನಿಜಾಂಶಗಳ ಕೊರತೆ ಉಂಟಾದರೆ ದೇಹದಲ್ಲಿ ಸಕ್ಕರೆ ಪ್ರಮಾಣ ಅಧಿಕವಾಗುತ್ತದೆ. ಹಲಸಿನ ಹಣ್ಣಿನಲ್ಲಿ ಖನಿಜಾಂಶಗಳು ಅಧಿಕವಾಗಿ ಇರುವುದರಿಂದ ದೇಹದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ.
3. ಮೂಳೆ ಸವೆತವನ್ನು ತಡೆಗಟ್ಟುತ್ತದೆ:
ಈ ಹಣ್ಣಿನಲ್ಲಿ ಅಧಿಕ ಮ್ಯಾಗ್ನಿಷಿಯಂ ಮತ್ತು ಕ್ಯಾಲ್ಸಿಯಂ ಅಂಶವಿರುವುದರಿಂದ ಮೂಳೆಗಳನ್ನು ಬಲಪಡಿಸಲು ಸಹಕಾರಿಯಾಗಿದೆ. ಮ್ಯಾಗ್ನಿಷಿಯಂ, ಕ್ಯಾಲ್ಸಿಯಂ, ಪೊಟಾಷ್ಯಿಯಂ ಅಧಿಕವಿರುವ ಆಹಾರ ತಿಂದರೆ ಮೂಳೆಗಳು ಗಟ್ಟಿಯಾಗುವುದು.
4. ಥೈರಾಯ್ಡ್ ಗ್ರಂಥಿಯನ್ನು ಆರೋಗ್ಯಕರವಾಗಿ ಇಡುತ್ತದೆ:
ಹಲಸಿನ ಹಣ್ಣಿನಲ್ಲಿರುವ ಖನಿಜಂಶಗಳು (micromineral) ಥೈರಾಯ್ಡ್ ಗ್ರಂಥಿಯ ಆರೋಗ್ಯವನ್ನು ಕಾಪಾಡುತ್ತದೆ. ದೇಹದಲ್ಲಿ ಹಾರ್ಮೋನ್ ಗಳ ಉತ್ಪತ್ತಿಯನ್ನು ಸರಿ ಪ್ರಮಾಣದಲ್ಲಿ ಇಡಲು ಥೈರಾಯ್ಡ್ ಗ್ರಂಥಿ ಮುಖ್ಯ ಪಾತ್ರವಹಿಸುತ್ತದೆ.
5. ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ:
ಒಂದು ಹಲಸಿನ ಹಣ್ಣಿನಲ್ಲಿ ಬಾಳೆಹಣ್ಣಿನಲ್ಲಿರುವಷ್ಟು ಪೊಟಾಷ್ಯಿಯಂ ಅಂಶವಿರುತ್ತದೆ. ಪೊಟಾಷ್ಯಿಯಂ ದೇಹದಲ್ಲಿ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುವಲ್ಲಿ ಸಹಕಾರಿಯಾಗಿದೆ.
6. ಜೀರ್ಣಶಕ್ತಿ:
ಇದರಲ್ಲಿ ನಾರಿನಂಶವಿರುವುದರಿಂದ ಮಲಬದ್ಧತೆ ಸಮಸ್ಯೆ ಇರುವವರು ಇದನ್ನು ತಿನ್ನುವುದು ಒಳ್ಳೆಯದು.
7. ಇರುಳು ಕುರುಡುತನ ನಿವಾರಣೆಗೆ ಸಹಕಾರಿಯಾಗಿದೆ:
ಇದರಲ್ಲಿ ಕ್ಯಾರೆಟ್ ನಲ್ಲಿರುವ ಕಾಲು ಭಾಗದಷ್ಟು ವಿಟಮಿನ್ ಎ ಅಂಶವಿರುವುದರಿಂದ ಹಣ್ಣಿನ ದೃಷ್ಟಿ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ವಿಟಮಿನ್ ಎ ಕೊರತೆ ಉಂಟಾದರೆ ಇರುಳು ಕುರುಡುತನ ಉಂಟಾಗುವುದು.
8.ಹೃದಯದ ಸ್ವಾಸ್ಥ್ಯ ಹೆಚ್ಚಿಸುತ್ತದೆ:
ಇದರಲ್ಲಿ ವಿಟಮಿನ್ ಬಿ6 ಅಂಶವಿರುವುದರಿಂದ ರಕ್ತದಲ್ಲಿರುವ homocystein ಪ್ರಮಾಣ ಕಡಿಮೆ ಮಾಡಿ ಹೃದಯದ ಸ್ವಾಸ್ಥ್ಯ ಹೆಚ್ಚಿಸಲು ಸಹಕಾರಿಯಾಗಿದೆ.
9. ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ:
ಇದರಲ್ಲಿರುವ ವಿಟಮಿನ್ ಮತ್ತು ಖನಿಜಾಂಶಗಳು ದೇಹದಲ್ಲಿ ರಕ್ತ ಸರಾಗವಾಗಿ ಹರಿಯಲು ಸಹಕಾರಿಯಾಗಿದೆ. ಮೂಳೆಗಳನ್ನು ಬಲಪಡಿಸಿ ಶರೀರದಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆಯನ್ನು ತಡೆಗಟ್ಟುತ್ತದೆ.
10. ರಕ್ತ ಹೀನತೆಯನ್ನು ತಡೆಗಟ್ಟುತ್ತದೆ:
ಇದರಲ್ಲಿ ಕಬ್ಬಿಣದಂಶ ಕೂಡ ಇರುವುದರಿಂದ ರಕ್ತ ಹೀನತೆ ಸಮಸ್ಯೆ ನಿವಾರಣೆಗೆ ಇದನ್ನು ತಿನ್ನುವುದು ಒಳ್ಳೆಯದು.
ಎಲ್ಲಾ ಕಾಲದಲ್ಲೂ ಸಿಗುವ ಹಲಸು
ಕೇರಳದ ಕಣ್ಣೂರಿನ ಬಳಿಯ ತಳಿಪರಂಬದಲ್ಲಿ ಇರುವ ‘ಆರ್ಟೋಕಾರ್ಪಸ್ ಫುಡ್ಸ್ ಪ್ರೈವೇಟ್ ಲಿಮಿಟೆಡ್’, ದೇಶದ ಪ್ರಪ್ರಥಮ ಸುಸಜ್ಜಿತ ಹಲಸು ಉದ್ದಿಮೆ. ಇದರ ಮುಖ್ಯಸ್ಥ ಸುಭಾಶ್ ಕೊರೋತ್ರ ಅವರು ಕಳೆದ ಸಾಲಿನಲ್ಲಿ ವರ್ಷಪೂರ್ತಿ ಎಡೆಬಿಡದೆ ಉತ್ಪಾದನೆ ನಡೆಸಿದ್ದಾರೆ. ತಿರುವನಂತಪುರದ ಬಲರಾಮಪುರದಲ್ಲಿ ‘ದಿವಾ ಫುಡ್ಸ್’ನಲ್ಲಿ ವರ್ಷದ ಹತ್ತು ತಿಂಗಳೂ ಹಲಸಿನಕಾಯಿಯ ಚಿಪ್ಸ್ ಮಾಡುತ್ತಾರೆ.
ಹೈದರಾಬಾದಿನಲ್ಲಿ ಕಾಯಿ ಹಲಸನ್ನು ಕೊಚ್ಚಿ ಚಿಕ್ಕ ತುಂಡುಗಳಾಗಿಸಿ – ‘ಪನಸ ಪೊಟ್ಟು’ ಹೆಸರಿನಲ್ಲಿ ಒದಗಿಸುವ ಒಂದು ಉದ್ದಿಮೆ ಇದೆ. ಹದಿನಾಲ್ಕು ವರ್ಷದಿಂದ ಇದು ವರ್ಷದ ಹತ್ತು ತಿಂಗಳೂ ಎಡೆಬಿಡದೆ ಉತ್ಪಾದನೆ ಮಾಡುತ್ತಿದೆ. ಹಲಸಿನ ಮೌಲ್ಯವರ್ಧನೆಯೇ ನಡೆಯದ ಒಡಿಶಾದಲ್ಲಿ ಕಳೆದ ವರ್ಷ ಗುಜ್ಜೆಯ (ಎಳೆ ಹಲಸು) ‘ರೆಡಿ ಟು ಕುಕ್’ – ಅಡುಗೆಗೆ ಸಿದ್ಧ’ ಉತ್ಪನ್ನ ತಯಾರಿಸಿ ಮಾರುವ ಪ್ರಯೋಗ ಶುರುವಾಗಿದೆ. ಹೊಸ ಉತ್ಸಾಹದಿಂದ ಅರಸಿದಾಗ ಅಕಾಲದಲ್ಲಿ, ಸಾಮಾನ್ಯ ಋತುವಿಗಿಂತ ಮೊದಲೇ ಬೆಳೆ ಕೊಡುವ ಮರಗಳು ಇವರಿಗೆ ಕಾಣಸಿಕ್ಕಿವೆ. ಹಾಗಾಗಿ ಉತ್ಪನ್ನ ತಯಾರಿ ಈಗ ಡಿಸೆಂಬರ್ನಲ್ಲೇ ಚಿಕ್ಕ ಪ್ರಮಾಣದಲ್ಲಿ ಶುರುವಾಗಿದೆ.
ಕರಾವಳಿಗೆ ಬನ್ನಿ. ಅತ್ರಾಡಿಯ ಕಸಿ ತಜ್ಞ ಗುರುರಾಜ ಬಾಳ್ತಿಲ್ಲಾಯರಿಗೆ ನವೆಂಬರ್ನಲ್ಲಿ ಕಾಟುಕುಕ್ಕೆಯಿಂದ ಹಲಸಿನ ಹಣ್ಣು ಸಿಕ್ಕಿದೆ. ಮಡಂತ್ಯಾರು ಬಳಿಯ ಅಮ್ಡಾಲು ಚಂದ್ರಶೇಖರ ಭಟ್ಟರ ಹಿತ್ತಿಲಲ್ಲಿ ಡಿಸೆಂಬರ್ನಲ್ಲಿ ಕ್ರಿಸ್ಮಸ್ಗೂ ಪೂರ್ವದಲ್ಲಿ ಋತುವಿನ ಮೊದಲ ಹಣ್ಣು ಸಿಗುತ್ತಿದೆ. ತುಮಕೂರು ಜಿಲ್ಲೆಯಲ್ಲಿ ಅಕಾಲ ಹಲಸಿನ ಸಮೀಕ್ಷೆ ನಡೆಸಿರುವ ಪತ್ರಕರ್ತ ಹೆಚ್.ಜೆ. ಪದ್ಮರಾಜು ಅವರ ಪ್ರಕಾರ, ಅಕಾಲದಲ್ಲಿ ಕೃಷಿಕರು ಚಿಲ್ಲರೆ ಹಣಕ್ಕೆ ಎಳೆ ಹಲಸು ಮಾರುವುದನ್ನು ನಿಲ್ಲಿಸಿದರೆ ನಮ್ಮೂರಲ್ಲಿ ಹನ್ನೆರಡು ತಿಂಗಳೂ ಉತ್ತಮ ಗುಣಮಟ್ಟದ ಹಲಸಿನಹಣ್ಣು ಲಭ್ಯವಾಗಬಹುದು. ಸಖರಾಯಪಟ್ಟಣ ಕತೆ ಗೊತ್ತೇ? ಅಲ್ಲಿನ ಎಳನೀರು ಮಹದೇವಣ್ಣನ ಅಂಗಡಿಯಲ್ಲಿ ಹಲಸು ಇಲ್ಲದಿರುವುದು ಅಪರೂಪ. ಬೇರೆಲ್ಲೂ ಇಲ್ಲದಿದ್ದಾಗಲೂ ಆಸುಪಾಸಿನ ಅಡಿಕೆ ತೋಟದ ಅಂಚಿನ ಮರಗಳಿಂದ ಇವರಿಗೆ ಹಣ್ಣು ಸಿಗುತ್ತದೆ.
ಹೆಚ್ಚಿದ ಆಸಕ್ತಿ, ಮರೆಯ ತಳಿ ಬೆಳಕಿಗೆ
ಕೇರಳದಲ್ಲಿ ಹಲಸಿನ ಉತ್ಸವಗಳು, ಹಲಸಿನ ಬಗ್ಗೆ ಆಂದೋಲನಗಳೇ ನಡೆಯುತ್ತಿವೆ. ನಾಲ್ಕು ವರ್ಷಗಳ ಹಿಂದೆ ಕೊಲ್ಲಮ್ ನಗರದಲ್ಲಿ ನಡೆದ ಉತ್ಸವವೇ ಅತಿ ಮೊದಲ ಋತುಪೂರ್ವ ಉತ್ಸವವಾಗಿತ್ತು. ಈ ವರ್ಷ ನೋಡಿ. ಪಾಲಕ್ಕಾಡ್ ಜಿಲ್ಲೆಯಲ್ಲಿ ಪಾಲಕ್ಕಾಡ್ ಸೋಶಿಯಲ್ ಸರ್ವೀಸ್ ಸೊಸೈಟಿ ಡಿಸೆಂಬರ್ನಲ್ಲಿ ಐದು ದಿನ ಹಲಸಿನ ಉತ್ಸವ ನಡೆದಿದೆ. ಸಾಮಾನ್ಯವಾಗಿ ದೇಶದುದ್ದಗಲದಲ್ಲೂ ಮಾರ್ಚ್ ತಿಂಗಳಿಂದ ಜೂನ್ – ಜುಲೈವರೆಗೆ ಹಲಸಿನ ಋತು. ಆದರೆ ಆಸಕ್ತರ ಕಾಳಜಿಯಿಂದಾಗಿ ಋತುಪೂರ್ವ (ಅರ್ಲಿ ಸೀಸನ್), ಋತುನಂತರ (ಲೇಟ್ ಸೀಸನ್), ಎರಡು ಬಾರಿ ಬೆಳೆಕೊಡುವ (ಟ್ವೈಸ್ ಬೇರಿಂಗ್) ಮತ್ತು ಸರ್ವಕಾಲ (ಆಲ್ ಸೀಸನ್) – ಮೊದಲಾದ ಅಕಾಲದ ಹಲಸಿನ ಮರಗಳು ಸುದ್ದಿಯಾಗುತ್ತಿವೆ.
ಏರುಬೆಲೆ – ಉತ್ತಮ ಬೇಡಿಕೆ: ಅಕಾಲದ ಹಲಸಿಗೆ ಏರುಬೆಲೆ ಸಹಜ. ಕೆಲವೊಮ್ಮೆ ಅಕಾಲದಲ್ಲಿ ಸಂಶೋಧನೆ, ಪ್ರಾಯೋಗಿಕ ಉತ್ಪನ್ನ ತಯಾರಿಸಲು ಹಲಸಿನಕಾಯಿ, ಎಳೆ ಹಲಸು, ಹಣ್ಣುಗಳಿಗಾಗಿ ತೀವ್ರ ಯತ್ನ ಮಾಡುವವರಿರುತ್ತಾರೆ. ಎರಡು ವರ್ಷಗಳ ಹಿಂದೆ ಪುಣೆಯ ಒಬ್ಬ ಉದ್ದಿಮೆ ಆಕಾಂಕ್ಷಿ ಅಕ್ಟೋಬರ್ ತಿಂಗಳಲ್ಲಿ ತುಮಕೂರಿಗೆ ಕಾರಿನಲ್ಲೇ ಹಣ್ಣು ಒಯ್ದಿದ್ದರು. ಹದಿನೆಂಟು ಹಲಸಿಗಾಗಿ ಆದ ವೆಚ್ಚ ₹ 18 ಸಾವಿರ! ‘ಹಲಸಿನ ಸ್ವರ್ಗ’ ತಮಿಳುನಾಡಿನ ಪನ್ರುತ್ತಿಯಲ್ಲಿ ಹನ್ನೆರಡು ತಿಂಗಳು ಹಲಸಿನ ಹಣ್ಣು ರಸ್ತೆ ಬದಿಯಲ್ಲಿ ಖರೀದಿ ಮಾಡಲು ಸಿಗುತ್ತದೆ. ಹುಡುಕುತ್ತಾ ಹೋದರೆ ದೇಶದ ಹಲಸು ಬೆಳೆಯುವ ಪ್ರದೇಶಗಳಲ್ಲಿ ಗಣನೀಯ ಮಟ್ಟಿಗೆ ಅಕಾಲ ಹಲಸು ಲಭ್ಯವಿದೆ. ಆದರೆ ಇದನ್ನು ಗುರುತಿಸಿ ಆರ್ಥಿಕ ಮತ್ತು ಸಾಮಾಜಿಕ ಪ್ರಯೋಜನ ತೆಗೆದುಕೊಳ್ಳುವ ಯತ್ನ ಆಗಿಯೇ ಇಲ್ಲ.
ದೋಫಲ ಹಲಸು: ಪಶ್ಚಿಮ ಬಂಗಾಳದಲ್ಲಿ ಹಲಸಿಗೆ ಎರಡು ಋತುಗಳಿವೆ. ಒಂದು, ಫೆಬ್ರುವರಿ–ಆಗಸ್ಟ್ ಹಾಗೂ ಸೆಪ್ಟೆಂಬರ್–ಜನವರಿ. ಮೊದಲನೇ ಋತುವಿನಲ್ಲಿ ಹಲಸಿಗೆ ಹೇಳಿಕೊಳ್ಳುವಷ್ಟು ಒಳ್ಳೆ ಬೆಲೆ ಇಲ್ಲ. ಎರಡನೇ ಋತುವಿನ ಮಾತೇ ಬೇರೆ. ಎರಡನೇ ಸೀಸನ್ನಲ್ಲಿ ಆವಕ ಅನುಸರಿಸಿ ತರಕಾರಿ ಹಲಸಿಗೆ ಕಿಲೋಗೆ ನೂರು ರೂಪಾಯಿ ದಾಟುವುದು ಇಲ್ಲಿ ಸಾಮಾನ್ಯ. ಕಳೆದ ಸೆಪ್ಟೆಂಬರ್ – ಅಕ್ಟೋಬರ್ನಲ್ಲಿ ಕಿಲೋಗೆ ₹ 130 ಆಗಿತ್ತು ಎನ್ನುತ್ತಾರೆ ಕೋಲ್ಕತ್ತಾದ ಕೊಲ್ಯಾಣಿಯ ಬಿಧಾನ್ ಚಂದ್ರ ಕೃಷಿ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕಿ ಡಾ. ಫಾತಿಕ್ ಕುಮಾರ್.
ಈ ವಿಶ್ವವಿದ್ಯಾಲಯದಲ್ಲಿ ಹಲಸಿನ ತಳಿ ಸಂಗ್ರಹ ಮಾಡಿದ್ದಾರೆ. ಒಟ್ಟು 34 ರಲ್ಲಿ 16 ತಳಿ ತರಕಾರಿಗಾಗಿಯೇ ಇರುವಂಥವು. 11 ಹಣ್ಣು, ತರಕಾರಿ- ಎರಡಕ್ಕೂ ಸಲ್ಲುತ್ತವೆ. ಉಳಿದ ಏಳು ತಳಿ ದೋಫಲ. ಅಂದರೆ, ವರ್ಷಕ್ಕೆರಡು ಬಾರಿ ಫಸಲು ಕೊಡುವಂಥವು. ಫಾತಿಕ್ ಅವರ ಪ್ರಕಾರ ವರ್ಷದಲ್ಲಿ ಎರಡು ಬಾರಿ ಬೆಳೆ ಕೊಡುವುದು ಈ ತಳಿಗಳ ವಂಶವಾಹಿ ಗುಣ. ಹಾಗಾಗಿ ಬೇರೆ ಕಡೆಯೂ ಈ ಜಾತಿ ಮರಗಳ ಕಸಿಗಿಡಗಳು ಇದೇ ಗುಣ ತೋರಿಸಬಹುದು.
‘ಈ ದೋಫಲ ಜಾತಿಯವು ಬಹುತೇಕ ಬಾರಾಮಾಸಿ ಗುಣದವು. ಏಕೆಂದರೆ ಯಾವ ತಿಂಗಳು ನೋಡಿದರೂ ಬೆಳವಣಿಗೆಯ ಯಾವುದಾದರೂ ಘಟ್ಟದ ಹಲಸು ಇಲ್ಲದಿರುವುದು ಇಲ್ಲ. ಮಾರುಕಟ್ಟೆಯಲ್ಲೂ ಅಷ್ಟೆ, ವರ್ಷದ ಯಾವುದೇ ಸಮಯದಲ್ಲಾದರೂ, ಹುಡುಕುತ್ತಾ ಹೋದರೆ ಒಂದಲ್ಲ ಒಂದೆಡೆ ಹಲಸು ಸಿಕ್ಕೇಸಿಗುತ್ತದೆ’ ಎನ್ನುತ್ತಾರೆ ಫಾತಿಕ್. ಅಕಾಲ ಹಲಸಿನ ಲಾಭ ತೆಗೆದುಕೊಳ್ಳಲು ಮೊತ್ತಮೊದಲು ಆಗಬೇಕಾಗಿರುವುದು ಪ್ರಾದೇಶಿಕ ಸಮೀಕ್ಷೆ. ಬೇರೆಬೇರೆ ತಿಂಗಳುಗಳಲ್ಲಿ ಬೆಳೆ ಕೊಡುವ ಹಲಸಿನ ತಳಿ, ಅದರ ಹಲಸಿನ ಗುಣಾವಗುಣಗಳ ವ್ಯಾಪಕ ಸಮೀಕ್ಷೆಯನ್ನು ಕನಿಷ್ಠ ಜಿಲ್ಲಾ ಮಟ್ಟದಲ್ಲಾದರೂ ನಡೆಸಬೇಕು.
ಕೃಷಿ ವಿಶ್ವವಿದ್ಯಾಲಯಗಳ ಜೊತೆ ಹಲಸುಪ್ರೇಮಿಗಳು, ಅಭಿವೃದ್ಧಿ ಕಾರ್ಯಕರ್ತರು ವಿಜ್ಞಾನಿಗಳ ಸಹಾಯ ತೆಗೆದುಕೊಂಡು ಸಮೀಕ್ಷೆ ಮಾಡಬೇಕು. ಆಯಾ ಜಿಲ್ಲೆಯ ತಿಂಗಳುವಾರು ಬೆಳೆಯ ಕ್ಯಾಲೆಂಡರ್ ರಚನೆ ಮುಂದಿನ ಹೆಜ್ಜೆ. ಶ್ರೀಲಂಕಾದ ಕ್ಯಾಲೆಂಡರಿನ ಒಂದು ಮಾದರಿ ಗಮನಿಸಿ. ಅಕಾಲದಲ್ಲೂ ಹಲಸು ಅಲ್ಪ ಪ್ರಮಾಣದಲ್ಲಾದರೂ ಸಿಗುತ್ತದೆ ಎಂಬ ಅರಿವು ಹಬ್ಬಿಸಲು ‘ಅಕಾಲ ಹಲಸು ಹಬ್ಬ’ ಸಹಕಾರಿ. ಕನ್ಯಾಕುಮಾರಿಯಲ್ಲಿ ‘ಅಕಾಲ ಮಾವು ಬೆಳೆಗಾರರ ಸಂಘ’ವಿದೆ. ಈ ವಾಟ್ಸಪ್ ಯುಗದಲ್ಲಿ ದೂರದ ಗಿರಾಕಿಯೊಡನೆ ವ್ಯವಹಾರ ಕುದುರಿಸುವುದು, ಬೆಳೆಯ ಇರುವು ತಿಳಿಸುವುದು ಕಷ್ಟವಲ್ಲ.
ಸದಾ ಹಲಸಿನ ಪನ್ರುತ್ತಿ
ಒಂದು ಉದಾಹರಣೆ ಗಮನಿಸಿ. ಪನ್ರುತ್ತಿಗೆ ಭೇಟಿ ಕೊಟ್ಟು ಬೆಳೆಗಾರರೊಡನೆ ಮಾತಾಡಿ ಸರಬರಾಜು ಸರಪಣಿ ರೂಪಿಸಿದರೆ ಬೆಂಗಳೂರು, ತಿರುವನಂತಪುರದಂಥ ನಗರಗಳಲ್ಲಿ ವರ್ಷದ ಎಲ್ಲಾ ದಿನವೂ ಪ್ರೀಪ್ಯಾಕ್ಡ್ ಹಲಸಿನಹಣ್ಣಿನ ತೊಳೆ ಸಿಗುವಂತೆ ಮಾಡಬಹುದು. ಪನ್ರುತ್ತಿಯಿಂದ ಈ ನಗರಗಳಿಗೆ ಪ್ರತಿನಿತ್ಯ ರಾತ್ರಿ ಬಸ್ಸುಗಳಿವೆ. ಪನ್ರುತ್ತಿ ಅಕಾಲ ತಳಿ ಆಯ್ಕೆಗೆ ಮಹತ್ವದ ಕೇಂದ್ರ. ಅಲ್ಲಿನ ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಹಲಸಿನ ತೋಟದಲ್ಲಿ ಅಂದಾಜು ಎರಡರಿಂದ ಮೂರು ಶೇಕಡಾ ದ್ವಿಫಸಲಿನವು. ಜುಲೈಯಲ್ಲಿ ಹಣ್ಣು ಕೊಡುವುದನ್ನು ನಿಲ್ಲಿಸಿದರೆ ಇವಕ್ಕೆ ಎರಡೇ ತಿಂಗಳು ಹೆರಿಗೆ ರಜೆ. ಸೆಪ್ಟೆಂಬರ್- ಅಕ್ಟೋಬರ್ ಹೊತ್ತಿಗೆ ಮತ್ತೆ ಹೀಚು ಮೂಡುತ್ತದೆ. ಎರಡನೇ ಬೆಳೆಯ ಫಲ ಕಮ್ಮಿ.
ಅಕಾಲದ ಒಟ್ಟು ಬೆಳೆಯ ಪ್ರಮಾಣ ಏರುಋತುವಿಗೆ ಹೋಲಿಸಿದರೆ ಅತ್ಯಲ್ಪ. ಆದರೆ ನಮ್ಮ ಉದ್ದಿಮೆಗಳು ದಿನವಹಿ ಬಳಸಬಹುದಾದ ಹಲಸಿನ ಒಟ್ಟು ಸಂಖ್ಯೆಯೂ ಕಮ್ಮಿ ತಾನೇ. ಹೆಚ್ಚು ಬೇಕಾದಾಗ ಸ್ಥಳೀಯವಾಗಿಯೇ ಅಕಾಲದ ಉತ್ಪಾದನೆಯ ಯೋಜನೆ ಮಾಡಬೇಕು. ಹಾಸನದ ಬಳಿಯ ಅರಕಲಗೂಡಿನ ಚನ್ನೇಗೌಡರು ಯಾವ ವಿಜ್ಞಾನಿಯೂ ಕನಸು ಕಾಣದ ಅದ್ಭುತ ಪ್ರಯೋಗ ಆರಂಭಿಸಿದ್ದಾರೆ. ಸಾವಿರಾರು ಕಿಲೋ ಮೀಟರ್ ಓಡಾಡಿ, ಬೇರೆಬೇರೆ ತಿಂಗಳುಗಳಲ್ಲಿ ಹಣ್ಣು ಕೊಡುವ ತಳಿ ಆಯ್ದು ನೆಟ್ಟಿದ್ದಾರೆ. ಸುಮಾರು ಮೂವತ್ತು ಎಕರೆ. ನಾಲ್ಕೈದು ವರ್ಷಾನಂತರ ಯಾರು ಯಾವುದೇ ಅಕಾಲದಲ್ಲಿ ಫೋನಿಸಿದರೂ ತಮಗೆ ಹಣ್ಣು ಪೂರೈಸಲು ಸಾಧ್ಯವಾಗಬಹುದು ಎನ್ನುವುದು ಅವರ ವಿಶ್ವಾಸ.
ಮಾಹಿತಿ : ಸಂಗ್ರಹ