ಆರೋಗ್ಯ

ಹಲವು ರೀತಿಯ ಕಾಯಿಲೆಗೆ ಇಲ್ಲಿದೆ ಮನೆ ಮದ್ದಿನ ಸಂಪೂರ್ಣ ವಿವರ

Pinterest LinkedIn Tumblr

ayurveda_manemaddu

ಮಂಗಳೂರು:1 ಮೊಡವೆ :ಮೊಡವೆ ಆಗಿರುವ ಭಾಗವನ್ನು ಶುದ್ಧವಾದ ನೀರಿನಿಂದ ತೊಳೆಯಬೇಕು. ಬೇವಿನ ಎಲೆಗಳ ಜೊತೆಗೆ ಅರಿಶಿನದ ಪುಡಿಯನ್ನು ಸೇರಿಸಿ ನುಣ್ಣಗೆ ಅರಿಯಬೇಕು. ನುಣ್ಣಗೆ ಅರಿದ ಪೇಸ್ಟನ್ನು ರಾತ್ರಿ ಮಲಗುವ ಮುನ್ನ ಮೊಡವೆ ಇರುವ ಭಾಗಕ್ಕೆ ಹಚ್ಚಬೇಕು. ಮಾರನೆಯ ದಿನ ಉತ್ತಮ ಮೈ ಸೋಪನ್ನು ಉಪಯೋಗಿಸಿ ಬಿಸಿ ನೀರಿನಿಂದ ಮುಖವನ್ನು ತೊಳೆದುಕೊಂಡು ಶುಭ್ರವಾದ ಒಣಗಿದ ವಸ್ತ್ರದಿಂದ ಒರೆಸಿಕೊಳ್ಳಬೇಕು. ಮೊಡವೆಗಳಿಂದ ತೊಂದರೆ ಪಡುತ್ತಿರತಕ್ಕವರು ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಮತ್ತು ಸಿಹಿ ತಿಂಡಿಯನ್ನು ಅತಿಯಾಗಿ ತಿನ್ನಬಾರದು. ಪ್ರತಿದಿನದ ಊಟದಲ್ಲಿ ಯತೇಚ್ಛವಾಗಿ ಹಸಿರು ಸೊಪ್ಪು, ತರಕಾರಿಗಳು , ಹಣ್ಣು-ಹಂಪಲುಗಳನ್ನು ಸೇವಿಸಬೇಕು.ಅರಿಶಿಣವನ್ನು ನಿಂಬೇಹಣ್ಣಿನ ರಸದೊಂದಿಗೆ ಅರೆದು ಮುಖಕ್ಕೆ ಹಚ್ಚಿಕೊಳ್ಳುತ್ತಿದ್ದರೆ, ಮೊಡವೆಗಳು ಕಡಿಮೆಯಾಗಲು ಸಹಾಯಕವಾಗುತ್ತದೆ.

2. ಕುರು : ಸಣ್ಣಪುಟ್ಟ ಕುರುಗಳಲಿಗೆ-ಲವಂಗಗಳನ್ನು ನೀರಿನೊಂದಿಗೆ ಸೇರಿಸಿ ಅರೆದು, ಪೇಸ್ಟ್‌ ಮಾಡಿಕೊಂಡು ಹಚ್ಚಿದಲ್ಲಿ ಉಪಶಮನ ಉಂಟಾಗುತ್ತದೆ.
ಬೇವಿನ ಎಲೆಗಳನ್ನು ನೀರಿನಲ್ಲಿ ಕುದಿಸಿ ಅದನ್ನು ಸ್ನಾನದ ನೀರಿನೊಂದಿಗೆ ಮಿಶ್ರಮಾಡಿ ಸ್ನಾನವನ್ನು ಮಾಡುವುದರಿಂದ ಸಣ್ಣಪುಟ್ಟ ಕುರುಗಳು ಏಳುವುದಿಲ್ಲ.

3. ಬ್ರಾಂಕ್ಯೆಟಿಸ್‌ ಮತ್ತು ಬ್ರಾಂಕೈಲ್‌ ಆಸ್ತಮ: ಬಿಸಿ ಹಾಲಿಗೆ ಒಂದು ಟೀ ಚಮಚದಷ್ಟು ಒಳ್ಳೆಯ ಅರಿಶಿನದ ಪುಡಿಯನ್ನು ಮಿಶ್ರಣ ಮಾಡಿ ದಿನಕ್ಕೆರಡು ಬಾರಿ ಕುಡಿಯಬೇಕು.
4 . ನೆಗಡಿ : ಮೂಗು ಮುಚ್ಚಿಕೊಂಡ ಇದ್ದರೆ, ಕೆಂಡದ ಮೇಲೆ ಅರಿಶಿನದ ಪುಡಿಯನ್ನು ಉದುರಿಸಿ, ಮೂಗಿನಿಂದ ವಾಸನೆಯನ್ನು ತೆಗೆದುಕೊಳ್ಳಬೇಕು.

5. ಮಲಬದ್ಧತೆ : ಮಲಬದ್ಧತೆ ನಿವಾರಣೆಯಾಗಬೇಕಾದರೆ, ಪ್ರತಿ ದಿನ ನೀವು ಹೆಚ್ಚಾಗಿ ಶುದ್ಧವಾದ ನೀರನ್ನು ಕುಡಿಯಬೇಕು. ತಾಜಾ ಇರುವ ಹಸಿರು ತರಕಾರಿಗಳು, ಹಣ್ಣು-ಹಂಪಲುಗಳನ್ನು ನಾರು ಇರುವ ಆಹಾರ ಪದಾರ್ಥಗಳನ್ನು ಸೇವಿಸಬೇಕು. ಮಲಗುವ ಮುನ್ನ ಎರಡು ಅಥವಾ ನಾಲ್ಕು ಟೀ ಚಮಚ ಗುಲ್ಕನ್ನು ತಿಂದು, ದೊಡ್ಡ ಲೋಟದಲ್ಲಿ ಬಿಸಿ ಹಾಲನ್ನು ಕುಡಿಯಬೇಕು.

6. ಪಾದದ ಆಣಿ : ಶಸ್ತ್ರವೈದ್ಯರಿಂದ ಪಾದದ ಆಣಿ (ಕಾರ್ನ್ಸ್)ಗಳನ್ನು ತೆಗೆಸಿಬಿಡಬೇಕು. ಅನಂತರ, ರಾತ್ರಿ ಮಲಗುವಾಗ ನಿಂಬೆಹಣ್ಣಿನ ಶರಬತ್ತನ್ನು ಕುಡಿದು, ಅದರ ಸಿಪ್ಪೆಯನ್ನು ಆಣಿಯ ಭಾಗದಲ್ಲಿಟ್ಟು-ಬ್ಯಾಂಡೇಜನ್ನು ಕಟ್ಟಬೇಕು.

7. ಕೆಮ್ಮು; ತುಳಸಿ ಎಲೆಗಳನ್ನು ಶುದ್ಧವಾದ ನೀರಿನಿಂದ ತೊಳೆದು, ಅನಂತರ, ಆ ಎಲೆಗಳಿಂದ ರಸವನ್ನು ತೆಗೆದು ಅದಕ್ಕೆ ಒಂದೆರಡು ಚಮಚ ಜೇನುತುಪ್ಪವನ್ನು ಸೇರಿಸಿ, ಬೆಳಗ್ಗೆ-ಮಧ್ಯಾಹ್ನ ಮತ್ತು ರಾತ್ರಿ ಕ್ರಮವಾಗಿ ಐದು ದಿವಸಗಳ ಕಾಲ ಸೇವಿಸಿದರೆ, ಕೆಮ್ಮು ಉಪಶಮನವಾಗುತ್ತದೆ.

8. ಶರೀರ ಬಲಕ್ಕೆ ಬಾಳೇ ಹಣ್ಣು : ರಸಬಾಳೇ ಅಥವಾ ಪಚ್ಚಬಾಳೇ ಅಥವಾ ಯಾಲಕ್ಕಿ ಬಾಳೇ ಹಣ್ಣನ್ನು ಊಟವಾದ ನಂತರ ಪ್ರತಿ ದಿವಸವು ತಪ್ಪದೆ ೪೦ ದಿನಗಳ ಕಾಲ ಸೇವಿಸಿದರೆ ಶರೀರದಲ್ಲಿ ಒಳ್ಳೆಯ ಬಲ ಉಂಟಾಗುತ್ತದೆ.

9. ಬಾಯಿಯ ದುರ್ವಾಸನೆ:ಪ್ರತಿದಿನ ಭೋಜನವಾದ ನಂತರ ಲವಂಗವನ್ನು ಚಪ್ಪರಿಸುತ್ತಿದ್ದರೆ, ಬಾಯಿಯ ದುರ್ವಾಸನೆ ಕಡಿಮೆಯಾಗುತ್ತದೆ.
ಉಪ್ಪು ಮತ್ತು ಲವಂಗ ಎರಡನ್ನು ಸೇರಿಸಿ ಚಪ್ಪರಿಸುತ್ತಿದ್ದರೆ ಆಯಾಸ ನಿವಾರಣೆಯಾಗುವುದಲ್ಲದೆ, ಬಾಯಿಯ ದುರ್ವಾಸನೆಯು ನಿವಾರಣೆಯಾಗುತ್ತದೆ.

10. ಕೀಲುನೋವು:ಕೀಲುನೋವು ನಿವಾರಣೆಗೆ, ಕೊಬ್ಬರಿ ಎಣ್ಣೆಯಲ್ಲಿ ಹಿಂಗುವಿನ ಪುಡಿಯನ್ನು ಚೆನ್ನಾಗಿ ಕಲಸಿ, ಕೀಲುನೋವು ಇರುವ ಭಾಗದಲ್ಲಿ ಉಜ್ಜುವುದರಿಂದ ನೋವು ಕಡಿಮೆಯಾಗುತ್ತದೆ.

11. ಸಾಮಾನ್ಯವಾದ ಜಾಂಡೀಸ್‌ ಅಥವಾ ಅರಿಶಿನ ಕಾಮಾಲೆ: ಕಣ್ಣುಗಳು ಮತ್ತು ಶರೀರ ಹಳದಿ ಬಣ್ಣಕ್ಕೆ ತಿರುಗುತ್ತದೆ. ೨೦ ಗ್ರಾಮ್‌ ನಿಂಬೆಹಣ್ಣಿನ ರಸವನ್ನು ಶುದ್ಧವಾದ ನೀರಿನಲ್ಲಿ ಅಥವಾ ಬಿಸಿನೀರಿನಲ್ಲಿ ಕಲಿಸಿ, ಸ್ವಲ್ಪ ಸಕ್ಕರೆಯನ್ನು ಸೇರಿಸಿ ದಿನಕ್ಕೆ ಕನಿಷ್ಠ ಆರು ಬಾರಿಯಾದರೂ ಕುಡಿಯುತ್ತಿದ್ದರೆ, ಜಾಂಡೀಸ್‌ನ ತೊಡಕು ಕಮ್ಮಿಯಾಗುತ್ತದೆ.

12. ಗಂಟಲು ತೊಂದರೆ: ಜೇನುತುಪ್ಪ ಮತ್ತು ನಿಂಬೇಹಣ್ಣಿನ ರಸವನ್ನು ಸಮವಾಗಿ ಸೇರಿಸಿ ದಿನಕ್ಕೆ ಕನಿಷ್ಠ ಮೂರು ಬಾರಿಯಾದರೂ ಸೇವಿಸಿದರೆ, ಗಂಟಲಿನ ಕರ್ಕಶ ಧ್ವನಿ ಹೊರಟುಹೋಗುತ್ತದೆ.

13. ಪರಂಗಿ ಹಣ್ಣಿನ ರಸ : ಪರಂಗಿ ಹಣ್ಣಿನ ರಸ, ಕರುಳಿನಲ್ಲಿರುವ ಕ್ರಿಮಿಗಳನ್ನು ನಾಶಪಡಿಸುತ್ತದೆ, ಕಫವನ್ನು ಕರಗಿಸುತ್ತದೆ. ಶೀತ ಕಾಲದಲ್ಲಿ ಬಾದಾಮಿ ಹಾಲಿಗೆ ಏಲಕ್ಕಿ ಪುಡಿಯನ್ನು ಸೇರಿಸಿ ಕುಡಿಯುವುದರಿಂದ ಶರೀರ ಉತ್ತೇಜಕವಾಗಿರುತ್ತದೆ.

14 ಉಳುಕು ನಿವಾರಣೆ : ಉಳುಕಿನಿಂದಾಗಿ ತೀವ್ರವಾದ ನೋವು ಮತ್ತು ಉರಿಯೂತವಿರುತ್ತದೆ. ಮೊಟ್ಟ ಮೊದಲು, ತೊಂದರೆಗೆ ಒಳಗಾಗಿರುವ ಭಾಗವನ್ನು ಚಲಿಸಬಾರದು. ಅಡುಗೆ ಉಪ್ಪನ್ನು ಸೇರಿಸಿದ, ಬಿಸಿ ನೀರಿನಲ್ಲಿ ಉಳುಕಿರುವ ಭಾಗವನ್ನು ಸ್ವಲ್ಪ ಹೊತ್ತು ಇರಿಸಿಕೊಳ್ಳುವುದರಿಂದ ನೋವನ್ನು ಕಡಿಮೆ ಮಾಡುತ್ತದೆ. ಉಳುಕು ಇರುವ ಭಾಗಕ್ಕೆ ಆಗಿಂದಾಗ್ಯೆ ಬಿಸಿ ನೀರಿನ ಕಾಪುಟವನ್ನು ಕೊಡುವುದರಿಂದ ಉದಶಮನ ಉಂಟಾಗುತ್ತದೆ.

15 . ಜಾಂಡೀಸ್‌ (ಅರಿಶಿನ ಕಾಮಾಲೆ):ಲಿವರ್ ಮೇಲೆ ಹೆಚ್ಚು ಘನ ಆಹಾರದ ಒತ್ತಡವನ್ನು ಹೇರಬಾರದು. ಕೊಬ್ಬಿನ ಪದಾರ್ಥಗಳಿಂದ ಮುಕ್ತವಾದ ದ್ರವ ಪದಾರ್ಥಗಳನ್ನು ನೀಡಬೇಕು. ಶುದ್ಧವಾದ ಜಾಗದಲ್ಲಿ ಸ್ವಚ್ಛವಾಗಿ ತಯಾರಿಸಿದ ಕಬ್ಬಿನ ರಸವನ್ನು ಕುಡಿಯಲು ಕೊಡಬಹುದು. ಉತ್ತಮವಾದ ಮೊಸರಿಗೆ, ಸಕ್ಕರೆಯನ್ನು ಸೇರಿಸಿ, ಕೊಡುವುದರಿಂದ, ಲಿವರ್ ಗೆ ತಂಪು ಉಂಟಾಗುತ್ತದೆ.

16. ಮಲಬದ್ಧತೆ ನಿವಾರಣೆಗೆ ಜೇನುತುಪ್ಪ: “ಹನಿ ಈಜ್‌ ಎ ಫ್ರೆಂಡ್‌ ಆಫ್‌ ಸ್ಟಮಕ್‌” ಎಂದು ಇಂಗ್ಲಿಷಿನಲ್ಲಿ ಗಾದೆಯಿದೆ. ಜೇನು ಔಷಧಗಳ ಔಷಧವಾಗಿದೆ. ರೋಗಿಗಳಿಗೆ, ನಿಶ್ಚಕ್ತರಿಗೆ, ಆರೋಗ್ಯವಂತರಿಗೆಲ್ಲ ಪುಷ್ಟಿಕರವಾದ ಆಹಾರ ಜೇನುತುಪ್ಪ. ಜೇನುತುಪ್ಪಕ್ಕೆ ಸರಾಗವಾಗಿ, ಮಲ ವಿಸರ್ಜನೆಯನ್ನುಂಟು ಮಾಡುವ ಶಕ್ತಿಯಿದೆ. ಆದುದರಿಂದ, ಮಲಬದ್ಧತೆ ಇರತಕ್ಕವರು ಬೆಳಗಿನ ಹೊತ್ತು, ಖಾಲಿ ಹೊಟ್ಟೆಯಲ್ಲಿ ದೊಡ್ಡ ಲೋಟದ ಬಿಸಿನೀರಿಗೆ ಎರಡು ಅಥವಾ ಮೂರು ಟೀ ಚಮಚದಷ್ಟು ಜೇನುತುಪ್ಪವನ್ನು ಸೇರಿಸಿ ಕುಡಿಯುವುದು ಒಳ್ಳೆಯದು.

17. ಅಸ್ತಮ ತೊಂದರೆ: ಅಸ್ತಮ ತೊಂದರೆ ಇರತಕ್ಕವರಿಗೆ ಜೇನುತುಪ್ಪ ಅಮೃತ ಸಮಾನ. ಪ್ರತಿ ದಿನ ಎರಡು ಬಾರಿ ಬಿಸಿ ನೀರಿನಲ್ಲಿ ಜೇನುತುಪ್ಪವನ್ನು ಕಲಿಸಿ , ಕುಡಿಯುವುದರಿಂದ ಅಸ್ತಮಾ ತೊಂದರೆ ಉಪಶಮನಗೊಳ್ಳುತ್ತದೆ.

18. ಗ್ಯಾಸ್‌ಟ್ರಬಲ್‌ ; ಶುಂಠಿಯನ್ನು ಪ್ರತಿ ದಿನ ಆಹಾರದಲ್ಲಿ ಬಳಸುವುದರಿಂದ ಜೀರ್ಣಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ. ಅಲ್ಲದೆ, ಅಜೀರ್ಣ, ಗ್ಯಾಸ್‌ಟ್ರಬಲ್‌ನ್ನು ನಿವಾರಿಸುತ್ತದೆ.

19. ಹೊಟ್ಟೆ ನೋವು : ಶುಂಠಿ ರಸಕ್ಕೆ ಜೀರಿಗೆ ಪುಡಿಯನ್ನು ಸೇರಿಸಿ ಪ್ರತಿದಿನ ೨ ರಿಂದ ೩ ಬಾರಿ ಸೇವಿಸಿದರೆ ಹೊಟ್ಟೆ ನೋವು ಕಡಿಮೆಯಾಗುತ್ತದೆ.

20. ಕೆಮ್ಮು: ಶುಂಠಿ ರಸಕ್ಕೆ ಚಿಟಿಕೆಯಷ್ಟು ಅಡುಗೆ ಉಪ್ಪನ್ನು ಸೇರಿಸಿ, ದಿನ ೩ ಬಾರಿ, ನಾಲ್ಕೈದು ದಿನ ಸೇವಿಸಿದರೆ ಕೆಮ್ಮುಕಡಿಮೆಯಾಗುತ್ತದೆ.ಬಿಸಿನೀರಿಗೆ ಸ್ವಲ್ಪ ನಿಂಬೇಹಣ್ಣಿನ ರಸವನ್ನು ಹಿಂಡಿ ಎರಡು ಟೀ ಚಮಚ ದಷ್ಟು ಜೇನು ತುಪ್ಪವನ್ನು ಅದಕ್ಕೆ ಸೇರಿಸಿ ಪ್ರತಿದಿನ (ಒಂದು ವಾರದ ಕಾಲವಾದರೆ ಸೇವಿಸಬೇಕು ) ಎರಡು ಸಾರಿ ಕುಡಿಯುವುದರಿಂದ ಕೆಮ್ಮು ಕಡಿಮೆಯಾಗುತ್ತದೆ.

21. ದದ್ದು: ಶುಂಠಿರಸ, ತುಳಸಿರಸ ಮತ್ತು ಅರಿಶಿನಪುಡಿಯನ್ನು ಮಿಶ್ರಮಾಡಿ, ಮೈಗೆ ಹಚ್ಚಿ ಕೊಂಡರೆ ದದ್ದುಗಳು ಕಡಿಮೆಯಾಗುತ್ತವೆ.

22. ಕಣ್ಣುರಿ: ಪ್ರತಿದಿನ ಬೆಳಿಗ್ಗೆ ಉಪಾಹಾರಕ್ಕೆ ಮೊದಲು ಎಂಟು ಹತ್ತು ಬಿಳಿ ದಾಸವಾಳದ ಹೂವನ್ನು ಶುದ್ಧವಾದ ನೀರಿನಲ್ಲಿ ತೊಳೆದು ತಿಂದರೆ ಕಣ್ಣುರಿ ಬರುವುದಿಲ್ಲ.
23 . ಮುಟ್ಟಿನ ಹೊಟ್ಟೆ ನೋವು: ಮುಟ್ಟಾದಾಗ ಹೊಟ್ಟೆ ನೋವು ಬಂದರೆ ತಂಪಾದ ಪದಾರ್ಥಗಳಾದ ಮೊಸರನ್ನ ಅಥವಾ ಅವಲಕ್ಕಿ ಮೊಸರು ತಿಂದರೆ ಹೊಟ್ಟೆನೋವು ಕಮ್ಮಿಯಾಗುತ್ತದೆ.

24. ಉಷ್ಣದ ಕೆಮ್ಮು: ಉಷ್ಣದ ಕೆಮ್ಮು ಬಂದಾಗ ಹುಳಿ ಇಲ್ಲದ ಮಜ್ಜಿಗೆ ಅನ್ನದ ಜೊತೆಗೆ ಹಸಿ ಈರುಳ್ಳಿಯನ್ನು ತಿಂದರೆ ಕೆಮ್ಮು ಕಡಿಮೆಯಾಗುತ್ತದೆ.

25. ನೆಗಡಿ : ನೆಗಡಿ ಇದ್ದಾಗ ಹುರಿಗಡಲೆಯನ್ನು ತಿಂದು, ಬಿಸಿ ಕಾಫಿ ಕುಡಿದರೆ ನೆಗಡಿಯ ತೊಂದರೆ ಸ್ವಲ್ಪ ಉಪಶಮನ.

26. ತಲೆಕೂದಲಿನ ಆರೋಗ್ಯಕ್ಕೆ: ಕೊಬ್ಬರಿ ಎಣ್ಣೆಗೆ , ಮೆಂತ್ಯೆಯನ್ನು ಹಾಕಿಟ್ಟು ತಲೆಗೂದಲಿಗೆ ಹಚ್ಚುವುದರಿಂದ ಕೂದಲಿನ ಆರೋಗ್ಯ ಹೆಚ್ಚುತ್ತದೆ.

27. ಸಾಮಾನ್ಯ ನಿಶ್ಯಕ್ತಿ: ದಿನ ಬಿಟ್ಟುದಿನ, ಹಾಲಿನ ಜೊತೆಗೆ ಸ್ವಲ್ಪ ಕ್ಯಾರೆಟ್‌ ಜ್ಯೂಸನ್ನು ಸೇರಿಸಿ, ಸೇವಿಸುವುದರಿಂದ, ಶರೀರ, ಮಿದುಳು, ನರಗಳು ಮತ್ತು ಕಣ್ಣಿನ ದೃಷ್ಟಿಗೆ ಶಕ್ತಿ ಉಂಟಾಗುತ್ತದೆ.

28. ಸಂಧಿವಾತ (ರುಮಾಟಿಸಮ್‌): ಜೇನು ತುಪ್ಪದೊಡನೆ, ಬೆಳ್ಳುಳ್ಳಿ ರಸವನ್ನು ಸೇರಿಸಿ ಪ್ರತಿದಿನ ಸೇವಿಸುವುದರಿಮದ ಸಂಧಿವಾತ ಕಡಿಮೆಯಾಗಲು ಸಹಾಯಕವಾಗುತ್ತದೆ. ಬಿಸಿಮಾಡಿದ ಸ್ವಲ್ಪ ಕೊಬ್ಬರಿ ಎಣ್ಣೆಗೆ, ಬೆಳ್ಳುಳ್ಳಿ ರಸವನ್ನು ಸೇರಿಸಿ, ಸಂಧಿವಾತ ವಿರುವ ಜಾಗದಲ್ಲಿ ತಿಕ್ಕುವುದರಿಂದ ನೋವು ಕಡಿಮೆಯಾಗುತ್ತದೆ.

29. ಕುರು ಮತ್ತು ಮೊಡವೆ: ಕುರು ಮತ್ತು ಮೊಡವೆಗಳಿಗೆ ಕ್ರಮವಾಗಿ ಬೆಳ್ಳುಳ್ಳಿ ರಸವನ್ನು ಹಚ್ಚುವುದರಿಂದ ನಿವಾರಣೆಯಾಗಲು ನೆರವಾಗುತ್ತದೆ.

30. ಅರ್ಧ ತಲೆನೋವು: ಬೆಳ್ಳುಳ್ಳಿಯನ್ನು ಜಜ್ಜಿ ಅರ್ಧ ತಲೆನೋವು ಇರುವ ಜಾಗದಲ್ಲಿ ತಿಕ್ಕುವುದರಿಂದ ನೋವು ಕಡಿಮೆಯಾಗುತ್ತದೆ.
ವಿ.ಸೂ:- ತಲೆನೋವು ಪದೇ ಪದೇ ಬರುತ್ತಿದ್ದರೆ ವೈದ್ಯರಲ್ಲಿ ತೋರಿಸುವುದನ್ನು ಮರೆಯ ಬಾರದು.

31. ಜೀರ್ಣವಾಗಲು : ಸ್ವಲ್ಪಜೀರಿಗೆಯನ್ನು ಚೆನ್ನಾಗಿ ಪುಡಿಮಾಡಿ ಬೆಲ್ಲ ಕಲಸಿದ ನೀರಿಗೆ ಹಾಕಿ ಊಟವಾದ ನಂತರ ಕುಡಿದರೆ ಆಹಾರ ಜೀರ್ಣವಾಗುವುದಲ್ಲದೆ, ಊಸನ್ನು ಹೊರಹಾಕಿ, ಅರುಚಿಯನ್ನು ನಿವಾರಿಸುತ್ತದೆ.

32 ಎದೆ ಹಾಲು ಉತ್ಪತ್ತಿಗೆ: ತಾಯಂದಿರಲ್ಲಿ ಸಾಕಷ್ಟು ಎದೆಹಾಲು ಉತ್ಪತ್ತಿಯಾಗದಿದ್ದರೆ ಜೀರಿಗೆಯನ್ನು ಚೆನ್ನಾಗಿ ಪುಡಿಮಾಡಿ ಸಿಹಿಹಾಲಿಗೆ ಸೇರಿಸಿ ಪ್ರತಿದಿನ ಬೆ ಳಗ್ಗೆ ಮತ್ತು ರಾತ್ರಿ ಸೇವಿಸುತ್ತಿದ್ದರೆ ಹೆಚ್ಚಾಗಿ ಎದೆ ಹಾಲು ಉತ್ಪತ್ತಿಯಾಗಲು ಸಹಾಯ ಮಾಡುತ್ತದೆ.

33. ಹುಳಿ ತೇಗು ಕಡಿಮೆಯಾಗಲು: ಶುಂಠಿ, ಜೀರಿಗೆ ಮತ್ತು ಬೇವಿನಸೊಪ್ಪಿನ ರಸವನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಚೆನ್ನಾಗಿ ಅರಿದು, ಪ್ರಾತಃಕಾಲ ಸಿಹಿನೀರಿನ ಜೊತೆ ಸ್ವಲ್ಪ ದಿವಸ ಸೇವಿಸಿದರೆ, ಹುಳಿ ತೇಗು ಕಡಿಮೆಯಾಗುತ್ತದೆ.

35. ಮಲಬದ್ಧತೆ ನಿವಾರಣೆಗೆ: ಪ್ರತಿ ದಿನ ರಾತ್ರಿ ಊಟ ಮಾಡಿದನಂತರ ಜೇನುತುಪ್ಪ (೨ ರಿಂದ ೪ ಟೀ ಚಮಚೆಯಷ್ಟು ಮಾತ್ರ) ದೊಂದಿಗೆ ಕರಿಬೇವನ್ನು ಸೇವಿಸಿದರೆ, ಸಲೀಸಾಗಿ ಮಲವಿಸರ್ಜನೆಯಾಗುತ್ತದೆ.

36: ಕೀಲುನೋವು ನಿವಾರಣೆಗೆ : ಶರೀರದಲ್ಲಿ ಯೂರಿಕ್‌ ಆಮ್ಲ ಹೆಚ್ಚಾಗಿ ಉಂಟಾಗುವ ಕೀಲುನೋವಿಗೆ ಸೌತೆಕಾಯಿ ಹಾಗೂ ಕ್ಯಾರೆಟ್‌ ರಸ ಎರಡನ್ನು ಮಿಶ್ರ ಮಾಡಿ ಕೆಲವು ದಿನ ಸೇವಿಸಿದರೆ, ಕೀಲುನೋವು ಕಡಿಮೆಯಾಗುತ್ತದೆ.

37. ಕಂಠಸ್ವರ ಚೆನ್ನಾಗಿರಲು : ಆಗಿಂದಾಗ್ಗೆ ದಾಳಿಂಬೆ ರಸವನ್ನು ಸೇವಿಸುವುದರಿಂದ ಕಂಠಸ್ವರ ಚೆನ್ನಾಗಿರುತ್ತದೆ.

38 . ಮೂತ್ರ ಕೋಶದಲ್ಲಿನ ಕಲ್ಲು ಕರಗಲು: ಮೂಲಂಗಿ ರಸವನ್ನು ಊಟವಾದ ನಂತರ ಪ್ರತಿ ದಿನ ಸೇವಿಸುತ್ತಿದದರೆ, ಮೂತ್ರ ಕೋಶದಲ್ಲಿನ ಕಲ್ಲು ಕರಗಲು ಸಹಾಯ ಮಾಡುತ್ತದೆ.
39. ಚೆನ್ನಾಗಿ ನಿದ್ರೆ ಬರಲು : ಪ್ರತಿ ದಿನ ಬೆಳಿಗ್ಗೆ ಉಪಾಹಾರವನ್ನು ಸೇವಿಸಿದ ನಂತರ, ರಾತ್ರಿ ಊಟ ಮಾಡಿದ ನಂತರ ನಿಂಬೆಹಣ್ಣಿನ ಶರಬತ್ತನ್ನು ಸೇವಿಸುವುದರಿಂದ ರಾತ್ರಿ ಹೊತ್ತು ಚೆನ್ನಾಗಿ ನಿದ್ರೆ ಬರುತ್ತದೆ. ಅಥವಾ,ರಾತ್ರಿ ಊಟ ಮಾಡಿದನಂತರ ಗಸಗಸೆ ಪಾಯಸವನ್ನು ಕುಡಿಯುವುದರಿಂದ ನಿದ್ರೆ ಚೆನ್ನಾಗಿ ಬರುತ್ತದೆ. ಅಥವಾ,ಬಕೆಟ್‌ನಲ್ಲಿ ಬಿಸಿನೀರು ಹಾಕಿ ೧೫ ನಿಮಿಷಗಳ ಕಾಲ ಆ ನೀರಿನಲ್ಲಿ ಪಾದಗಳನ್ನು ಇಟ್ಟುಕೊಂಡು, ಅನಂತರ ಟವೆಲ್‌ನಲ್ಲಿ ಒರೆಸಿಕೊಂಡು, ವಿಶ್ರಾಂತಿ ಪಡೆದರೆ ಚೆನ್ನಾಗಿ ನಿದ್ರೆ ಬರುತ್ತದೆ.

40. ಮಕ್ಕಳಲ್ಲಿ ಅತಿಸಾರ ಭೇದಿಯನ್ನು ನಿಯಂತ್ರಿಸಲು: ಬೇಳೆಕಟ್ಟು, ಅನ್ನದ ಗಂಜಿ, ಸಿಹಿ ಗಂಜಿ, ಮಜ್ಜಿಗೆ, ಲಸ್ಸಿ (ಸಿಹಿ ಮಜ್ಜಿಗೆ) ಮೊದಲಾದ ಮನೆಯಲ್ಲೇ ದೊರೆಯಬಹುದಾದ ಪಾನೀಯಗಳಲ್ಲಿ ಯಾವುದಾದರು ಒಂದನ್ನು ಮಕ್ಕಳಲ್ಲಿ ಭೇದಿಯಾಗುತ್ತಿದ್ದರೆ, ಪ್ರತಿ ಅರ್ಧ ಗಂಟೆ ಗೊಮ್ಮೆ ಕೊಡುತ್ತಿದ್ದರೆ, ಮಕ್ಕಳಲ್ಲಿ ಸುಸ್ತು ಉಂಟಾಗುವುದಿಲ್ಲ, ನಿಶ್ಚಕ್ತಿ ಉಂಟಾಗುವುದಿಲ್ಲ. ಅಲ್ಲದೆ, ಭೇದಿಯು ನಿಯಂತ್ರಣಕ್ಕೆ ಬರುತ್ತದೆ.

41. ಸಾಧಾರಣವಾದ ಬಾಯಿಹುಣ್ಣು ನಿವಾರಣೆಗೆ: ಹುಳು ಮಜ್ಜಿಗೆಯನ್ನು ಪ್ರತಿದಿನ ನಾಲ್ಕೈದು ಬಾರಿ ಕನಿಷ್ಠ ೭ ದಿನಗಳ ಕಾಲ, ಬಾಯಿ ಮುಕ್ಕಳಿಸಿದರೆ, ಸಾಧಾರಣವಾದ ಬಾಯಿಹುಣ್ಣು ನಿವಾರಣೆಯಾಗುತ್ತದೆ.

42. ಮೂತ್ರ ಪಿಂಡದಲ್ಲಿ ಕಲ್ಲು: ವಿಟಮಿನ್‌ ಬಿ6ರ ಪಾತ್ರ: ಮೂತ್ರಪಿಂಡದಲ್ಲಿ ಕಲ್ಲು ರೂಪಗೊಳ್ಳುವುದನ್ನು ತಡೆಗಟ್ಟಲು, ಆಕ್ಸಲಿಕ್‌ ಆಸೀಡ್‌ ಪ್ರಮಾಣವನ್ನು ಕಡಿಮೆ ಮಾಡಬೇಕು. ಅಲ್ಲದೆ, ಆಕ್ಸಲಿಕ್‌ ಆಸಿಡ್‌ ಇರುವ ಟೀ, ಚಾಕೋಲೆಟ್‌, ಬೀಟ್‌ರೂಟ್‌, ಟೊಮ್ಯಾಟೊ ಮೊದಲಾದುವನ್ನು ಸೇವಿಸಬಾರದು. ವಿಟಮಿನ್‌ ಬಿ6 ಇರುವ ಆಹಾರ ಪದಾರ್ಥಗಳನ್ನು ಸೇವಿಸಬೇಕು. ವೈದ್ಯರ ಸಲಹೆಯ ಮೇರೆಗೆ ವಿಟಮಿನ್‌ ಬಿ6 ರ ಮಾತ್ರೆಗಳನ್ನು ಸೇವಿಸಬಹುದು.

43. ಚಟುವಟಿಕೆ ಮತ್ತು ಮೂತ್ರ ಪಿಂಡದಲ್ಲಿ ಕಲ್ಲು : ಚಟುವಟಿಕೆಯಿಂದ ಇರದ ವ್ಯಕ್ತಿಗಳಲ್ಲಿ ರಕ್ತದಲ್ಲಿ ಹೆಚ್ಚಾಗಿ ಕ್ಯಾಲ್ಸಿಯಂ ಸಂಗ್ರಹಕೊಳ್ಳುತ್ತದೆಂದು ಡಾ|| ನೀಬರ್ಗ್ ತಿಳಿಸಿರುತ್ತಾನೆ. ಚಟುವಟಿಕೆಯಿಂದಾಗಿ, ಕ್ಯಾಲ್ಸಿಯಂ (ಸುಣ್ಣದಂಶ) ಮೂಳೆಗಳಿಗೆ ಹಿಂತಿರುಗಲು ಸಹಾಯ ಮಾಡುತ್ತದೆ. ನಿಮ್ಮಲ್ಲಿ ಕ್ಯಾಲ್ಸಿಯಂ ಕಲ್ಲುಗಳು ರೂಪಗೊಂಡಿದ್ದರೆ, ಪ್ರತಿ ದಿನ ಕುಳಿತಲ್ಲೇ ಕೂಡದೆ ವಾಕ್‌ ಮಾಡಿ, ಸ್ವಲ್ಪ ಹೊತ್ತು ಲಘು ವ್ಯಾಯಾಮವನ್ನು ಮಾಡಿರಿ. ದ್ವಿಚಕ್ರ ವಾಹನದಲ್ಲಿ ಓಡಾಡಿರಿ. ಚಟುವಟಿಕೆ ಕೂಡ ಶರೀರಕ್ಕೆ ಸೂಕ್ತವಾದ ಚಿಕಿತ್ಸೆಯಾಗಿರುತ್ತದೆ.

44. ಸಾಧಾರಣವಾದ ಜ್ವರ ನಿವಾರಣೆಗೆ: ಸಾಧಾರಣವಾದ ಜ್ವರ ಕಡಿಮೆಯಾಗಲು, ನಿಂಬೇಹಣ್ಣಿನ ರಸವನ್ನು ಸಿಹಿ ನೀರಿನಲ್ಲಿ ಸಮಪ್ರಮಾಣದಲ್ಲಿ ಸೇರಿಸಿ, ಪ್ರತಿ ದಿನ ೩ ಬಾರಿ ನಾಲ್ಕೈದು ದಿನ ಸೇವಿಸಿದರೆ ಸಾಧಾರಣವಾದ ಜ್ವರ ನಿವಾರಣೆಯಾಗುತ್ತದೆ.

45. ಮೂತ್ರ ಪಿಂಡದಲ್ಲಿ ಕಲ್ಲು ಕರಗಲು: ಬಾಳೇದಿಂಡಿನ ರಸವನ್ನು ಪ್ರತಿ ದಿನ ಬೆಳಿಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಒಂದು ಲೋಟದಷ್ಟು ಒಂದು ತಿಂಗಳ ಕಾಲ ಸೇವಿಸಿರಿ. ಪ್ರತಿ ದಿನ 3 ರಿಂದ 4 ಲೀಟರ್ಗೂ ಹೆಚ್ಚಾಗಿ ಶುದ್ಧವಾದ ನೀರನ್ನು ಕುಡಿಯಿರಿ. ಬೇಸಿಗೆ ಕಾಲದಲ್ಲಿ ಯತೇಚ್ಛವಾಗಿ ನೀರನ್ನು ಕುಡಿಯಿರಿ.

46. ಮೂತ್ರಪಿಂಡದಲ್ಲಿ ಕಲ್ಲುಗಳು ರೂಪಗೊಳ್ಳುವುದನ್ನು ತಡೆಗಟ್ಟಲು: ನಿಮ್ಮಲ್ಲಿ ಯಾವ ವಿಧವಾದ ಕಲ್ಲುರೂಪಗೊಂಡಿದ್ದರೂ, ವಿಟಮಿನ್‌ ‘ಎ’ ಸೇವನೆ ಅಗತ್ಯ. ಏಕೆಂದರೆ, ಇದರಿಂದ ಮೂತ್ರದ್ವಾರದ ಆಕಾರ ಚೆನ್ನಾಗಿರಲು ಸಹಾಯಕವಾಗುತ್ತದೆ. ಅಲ್ಲದೆ, ವಿಟಮಿನ್‌ ‘ಎ’ ಯಿಂದ ಭವಿಷ್ಯತ್ತಿನಲ್ಲಿ ಕಲ್ಲುಗಳು ರೂಪಗೊಳ್ಳುವುದು ತಡೆಗಟ್ಟಲ್ಪಡುತ್ತದೆ. ಆದುದರಿಂದ, ವಿಟಮಿನ್‌ ‘ಎ’ ಹೆಚ್ಚಾಗಿರುವ ಪರಂಗಿ ಹಣ್ಣು, ಮಾವಿನ ಹಣ್ಣು, ಕ್ಯಾರೆಟ್ಟನ್ನು ಸೇವಿಸುತ್ತಿರಬೇಕು. ಆದರೆ, ವಿಟಮಿನ್‌ ಎ ಮಾತ್ರೆಗಳನ್ನು ವೈದ್ಯರ ಸಲಹೆ ಪಡೆಯದೆ ಸೇವಿಸಬಾರದು.

47. ಬೆನ್ನು ನೋವು ನಿವಾರಣೆಗೆ ಐಸ್‌ ಮಸಾಜ್‌: ಬೆನ್ನಿನ ಯಾವ ಭಾಗದಲ್ಲಿ ನೋವಿದೆಯೋ, ಆ ಭಾಗದಲ್ಲಿ ಐಸ್‌ನಿಂದ ೭ ರಿಂದ ೮ ನಿಮಿಷಗಳ ಮಸಾಜ್‌ ಮಾಡುವುದರಿಂದ ನೋವು ಕಡಿಮೆಯಾಗುತ್ತದೆ. ಈ ಐಸ್‌ ಮಸಾಜ್‌ನ್ನು ೨ ರಿಂದ ೩ ದಿನಗಳ ಕಾಲ ಮಾಡಬೇಕು.
ವಿ.ಸೂ: ಮೂಳೆ ಮುರಿದಿರುವ ಭಾಗದಲ್ಲಿ ಯಾವುದೇ ಕಾರಣಕ್ಕೂ ಮಸಾಜ್‌ ಮಾಡಬೇಡಿರಿ. ರೋಗಿಗೆ ತೊಂದರೆಯಾಗುತ್ತದೆ.

48. ಬಿಸಿ ಕಾಪು ಮತ್ತು ಐಸ್‌ ಮಸಾಜ್‌ : ಬೆನ್ನಿನ ಯಾವ ಭಾಗದಲ್ಲಿ ನೋವಿದೆಯೋ ಆ ಭಾಗದಲ್ಲಿ ಬಿಸಿ ಕಾಪು ಅಥವಾ ಉಪ್ಪಿನ ಕಾಪುವನ್ನು ಕೊಟ್ಟನಂತರ, ಐಸ್‌ನಿಂದ ಮಸಾಜ್‌ ಮಾಡುವುದರಿಂದ ನೋವು ಕಡಿಮೆಯಾಗುತ್ತದೆ.

49. ಬಿಕ್ಕಳಿಕೆ ನಿವಾರಣೆಗೆ: ದೀರ್ಘವಾದ ಉಸಿರನ್ನು ಎಳೆದುಕೊಂಡು, ಎಷ್ಟು ಹೊತ್ತು ಸಾಧ್ಯವೋ ಅಷ್ಟು ಹೊತ್ತು ಉಸಿರನ್ನು ಹಾಗೇ ಇರಿಸಿಕೊಳ್ಳಲು ಪ್ರಯತ್ನಿಸಿರಿ. ತಣ್ಣೀರನ್ನು ಕುಡಿಯಿರಿ ಅಥವಾ ತಣ್ಣೀರಿನಿಂದ ಕೆಲವು ನಿಮಿಷಗಳ ಕಾಲ ಬಾಯಿ ಮುಕ್ಕಳಿಸಿರಿ.

50.  ಕರುಳು ನುಳಿತ ಅಥವಾ ಹೊಟ್ಟೆನೋವು ನಿವಾರಣೆಗೆ :ತಾಜಾ ಈರುಳ್ಳಿ ಜೊತೆಗೆ ಸ್ವಲ್ಪ ಅಡುಗೆ ಉಪ್ಪನ್ನು ಸೇರಿಸಿ ತಿಂದರೆ ಕರುಳಿನ ನುಲಿತ ಅಥವಾ ಹೊಟ್ಟೆನೋವು ಕಡಿಮೆಯಾಗುತ್ತದೆ.

 ಪ್ರೀಯ ಓದುಗರೇ ಇನ್ನೂ ಹಲವು ಮನೆ ಮದ್ದುಗಳ ವಿವರ ನಿರೀಕ್ಷಿಸಿರಿ….

Comments are closed.