ಆರೋಗ್ಯ

ಮನುಷ್ಯ ಕೇವಲ ಸೊಳ್ಳೆಗಳಿಂದ ಹತರಾಗುವ ಪಾಡು ಬಂತ್ತೆ….

Pinterest LinkedIn Tumblr

mosquito

ಮಂಗಳೂರು: ಮನುಷ್ಯನನ್ನು ಕಾಡುವ ಕೆಲವು ರೋಗಗಳಿಗೆ ಸೂಕ್ಷ್ಮಾಣುಗಳೇ ಕಾರಣ ಎನ್ನುವುದು ದೃಢಗೊಂಡು ಸುಮಾರು ನೂರೈವತ್ತು ವರ್ಷಗಳಾದವು. ಮಲೇರಿಯಾವು ಹೆಣ್ಣು ಸೊಳ್ಳೆಗಳಿಂದ ಹರಡುತ್ತದೆ ಎನ್ನುವುದನ್ನು ರೊನಾಲ್ಡ್ ರಾಸ್ ನಮ್ಮ ದೇಶದಲ್ಲೇ ತೋರಿಸಿಕೊಟ್ಟು 118 ವರ್ಷಗಳಾದವು. ಪರಿಣಾಮಕಾರಿಯಾದ ಸೂಕ್ಷ್ಮಾಣು ನಿರೋಧಕ ಔಷಧಗಳು ಬಂದು ಎಪ್ಪತ್ತೈದು ವರ್ಷಗಳಾದವು. ಈಗ ಹಲವು ಸೋಂಕುಗಳನ್ನೂ, ಸೋಂಕುವಾಹಕ ಕೀಟಗಳನ್ನೂ ನಿಯಂತ್ರಿಸುವ ಉಪಾಯಗಳು ನಮ್ಮಲ್ಲಿದ್ದರೂ, ಪ್ರತೀ ವರ್ಷ ಕೋಟಿಗಟ್ಟಲೆ ಜನರು ವಿಧವಿಧದ ಸೋಂಕುಗಳಿಗೆ ತುತ್ತಾಗುತ್ತಿದ್ದಾರೆ, ಲಕ್ಷಗಟ್ಟಲೆ ಜನ ಅವುಗಳಿಂದಾಗಿ ಸಾಯುತ್ತಿದ್ದಾರೆ. ತನ್ನ ಬುದ್ಧಿಮತ್ತೆಯಿಂದ ಇಡೀ ಜಗತ್ತನ್ನೇ ಜಯಿಸಬಲ್ಲೆನೆಂದು ಬೀಗುತ್ತಿರುವ ಮನುಷ್ಯನ ಸಾಮರ್ಥ್ಯವನ್ನೆಲ್ಲ ಈ ಸೂಕ್ಷ್ಮಾಣುಗಳು ಅಣಕಿಸುತ್ತಿವೆ.

ಈಗ ಮಲೇರಿಯಾ ಹಾಗೂ ಡೆಂಗೀ ಸೋಂಕುಗಳು ನಮ್ಮ ರಾಜ್ಯವೂ ಸೇರಿದಂತೆ ದೇಶದ ಹಲವೆಡೆಗಳಲ್ಲಿ ವ್ಯಾಪಕವಾಗಿ ಹರಡುತ್ತಿವೆ, ಹಲವು ಸಾವು-ನೋವುಗಳಿಗೆ ಕಾರಣವಾಗಿವೆ. ಪ್ರತೀ ವರ್ಷ ಉಷ್ಣವಲಯದ ನೂರಕ್ಕೂ ಹೆಚ್ಚು ದೇಶಗಳಲ್ಲಿ ಸುಮಾರು 15-25 ಕೋಟಿ ಜನ ಮಲೇರಿಯಾದಿಂದಲೂ, 5-10 ಕೋಟಿ ಜನ ಡೆಂಗೀಯಿಂದಲೂ ಬಳಲುತ್ತಾರೆ ಮತ್ತು ಸುಮಾರು 10 ಲಕ್ಷದಷ್ಟು ಜನ ಮಲೇರಿಯಾದಿಂದಲೂ, 25000ದಷ್ಟು ಜನ ಡೆಂಗೀಯಿಂದಲೂ ಸಾವನ್ನಪ್ಪುತ್ತಾರೆ. ಈ ಪೈಕಿ ಶೇ. 80ರಷ್ಟು ಮಲೇರಿಯಾ ಪ್ರಕರಣಗಳು ಆಫ್ರಿಕಾ ಖಂಡದಲ್ಲಾದರೆ, ಹೆಚ್ಚಿನ ಡೆಂಗೀ ಪ್ರಕರಣಗಳು ಭಾರತವೂ ಸೇರಿದಂತೆ ಏಷ್ಯಾ ಖಂಡದ ರಾಷ್ಟ್ರಗಳಲ್ಲಿ ಉಂಟಾಗುತ್ತವೆ. ನಮ್ಮ ದೇಶದಲ್ಲಿ ಅಧಿಕೃತ ಮಾಹಿತಿಯಂತೆ 13 ಲಕ್ಷಕ್ಕಿಂತ ಹೆಚ್ಚು ಜನರು ಮಲೇರಿಯಾ ಪೀಡಿತರಾಗಿ, ಸಾವನ್ನಪ್ಪಿದರು ಎನ್ನಲಾಗಿದ್ದರೂ, ವಾಸ್ತವದಲ್ಲಿ ಇದು 20-30 ಪಟ್ಟು ಹೆಚ್ಚಿರಬಹುದೆಂದು ಅಂದಾಜಿಸಲಾಗಿದೆ. ಮಂಗಳೂರು ನಗರವು ದೇಶದಲ್ಲೇ ಅತೀ ಹೆಚ್ಚು ಮಲೇರಿಯಾ ಪ್ರಕರಣಗಳುಳ್ಳ ನಗರಗಳಲ್ಲಿ ಒಂದಾಗಿದೆ. ಮಂಗಳೂರು, ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆಗಳಲ್ಲಿ ಡೆಂಗೀ ಸೋಂಕು ಹರಡುತ್ತಿದ್ದು, ಕೆಲವರು ಈಗಾಗಲೇ ಅದರಿಂದಾಗಿ ಸಾವನ್ನಪ್ಪಿರುವ ಬಗ್ಗೆ ವರದಿಗಳಾಗಿವೆ.

ಇವೆರಡು ಸೋಂಕುಗಳ ಮಧ್ಯೆ ಹಲವು ಸಾಮ್ಯತೆಗಳಿವೆ, ಕೆಲವು ಭಿನ್ನತೆಗಳೂ ಇವೆ. ಮಲೇರಿಯಾ ರೋಗವು ಪ್ಲಾಸ್ಮೋಡಿಯಾ ಎಂಬ ಪರೋಪಜೀವಿಗಳಿಂದ ಉಂಟಾದರೆ, ಡೆಂಗೀ ಜ್ವರವು ವೈರಸ್ ನಿಂದ ಉಂಟಾಗುತ್ತದೆ. ಮನುಷ್ಯನನ್ನು ಕಾಡುವ ಐದು ಬಗೆಯ ಪ್ಲಾಸ್ಮೋಡಿಯಾಗಳ ಪೈಕಿ ವೈವಾಕ್ಸ್ ಹಾಗೂ ಫಾಲ್ಸಿಪಾರಂ ಎಂಬೆರಡು ವಿಧಗಳು ನಮ್ಮ ದೇಶದಲ್ಲಿ ಮಲೇರಿಯಾವನ್ನುಂಟು ಮಾಡುತ್ತವೆ. ಡೆಂಗೀ ವೈರಸ್ ನಲ್ಲಿ ನಾಲ್ಕು ವಿಧಗಳಿದ್ದು, ನಮ್ಮ ದೇಶದಲ್ಲಿ ಎರಡನೇ ಹಾಗೂ ಮೂರನೇ ವಿಧದ ವೈರಸ್ ಗಳು ಹೆಚ್ಚಿನ ಸೋಂಕುಗಳನ್ನುಂಟು ಮಾಡುತ್ತವೆ. ಮಲೇರಿಯಾ ಸೋಂಕನ್ನು ಹೆಣ್ಣು ಅನಾಫಿಲಸ್ ಸೊಳ್ಳೆಗಳು ಹರಡಿದರೆ, ಡೆಂಗೀಯನ್ನು ಈಡಿಸ್ ಜಾತಿಯ ಹೆಣ್ಣುಸೊಳ್ಳೆಗಳು ಹರಡುತ್ತವೆ. ಅನಾಫಿಲಸ್ ಸೊಳ್ಳೆಯು ನಡುರಾತ್ರಿ ಹೊತ್ತಲ್ಲಿ ಮನೆಯೊಳಗೆ ಮಲಗಿದ್ದಾಗ ಚುಚ್ಚಿದರೆ, ಈಡಿಸ್ ಸೊಳ್ಳೆಯು ಹೆಚ್ಚಾಗಿ ನಸುಕಿನಲ್ಲಿ ಯಾ ಸಂಜೆ ಹೊತ್ತಲ್ಲಿ ಮನೆಯೊಳಗಿದ್ದಾಗ ಚುಚ್ಚುತ್ತದೆ; ರಾತ್ರಿ ಮಲೇರಿಯಾದ ಭಯ, ಹಗಲಲ್ಲಿ ಡೆಂಗೀಯ ಅಪಾಯ!

ಸೋಂಕುಳ್ಳ ಸೊಳ್ಳೆಯು ಕಚ್ಚಿದ 8-10 ದಿನಗಳ ಬಳಿಕ ಮಲೇರಿಯಾ ಲಕ್ಷಣಗಳು ತೊಡಗಿದರೆ, ಡೆಂಗೀ ಲಕ್ಷಣಗಳು ತೊಡಗಲು 4-7 ದಿನಗಳು ಬೇಕಾಗುತ್ತವೆ. ಮಲೇರಿಯಾದಲ್ಲಿ ಸಾಮಾನ್ಯವಾಗಿ ಚಳಿ ಹಾಗೂ ನಡುಕಗಳೊಂದಿಗೆ ಬಿಟ್ಟು-ಬಿಟ್ಟು ಬರುವ ಜ್ವರವಿದ್ದರೆ, ಡೆಂಗೀಯಲ್ಲಿ 2-7 ದಿನಗಳವರೆಗೆ ನಿರಂತರವಾದ ಜ್ವರವಿರುತ್ತದೆ.

ಮಲೇರಿಯಾದಲ್ಲಿ ತಲೆನೋವು, ವಾಂತಿ, ಒಣ ಕೆಮ್ಮು ಮುಂತಾದ ಲಕ್ಷಣಗಳೂ ಇರಬಹುದು. ಡೆಂಗೀ ಜ್ವರದಲ್ಲಿ ವಿಪರೀತವಾದ ಬೆನ್ನುನೋವು, ತಲೆನೋವು ಹಾಗೂ ಸ್ನಾಯುಗಳ ನೋವು ಸಾಮಾನ್ಯವಾಗಿರುತ್ತದೆ, ಕಣ್ಣಾಲಿಗಳನ್ನು ಅತ್ತಿತ್ತ ಹೊರಳಿಸುವಾಗಲೂ ನೋವಾಗುತ್ತದೆ; ವಾಕರಿಕೆ ಯಾ ವಾಂತಿಯೂ ಇರಬಹುದು. ಡೆಂಗೀ ಜ್ವರದಲ್ಲಿ ಮುಖ ಹಾಗೂ ಇಡೀ ದೇಹದ ಚರ್ಮವು ನಸುಗೆಂಪಾಗಿ ಕಾಣಿಸುತ್ತದೆ; ಚರ್ಮದ ಮೇಲೆ ಕೈಯನ್ನು ಒತ್ತಿ ಬಿಟ್ಟಾಗ ಅಷ್ಟು ಭಾಗದಲ್ಲಿ ನಸುಗೆಂಪು ಚರ್ಮವು ಬಿಳಿಚಿಕೊಂಡು ಕೈಯ ಅಚ್ಚು ಮೂಡುತ್ತದೆ. ಕಣ್ಣುಗಳು ಹಾಗೂ ಗಂಟಲಿನೊಳಗೂ ಕೆಂಪಾಗಿ ಕಾಣಿಸಬಹುದು. ವಾರದೊಳಗೆ ಡೆಂಗೀ ಜ್ವರವು ಕಡಿಮೆಯಾಗುತ್ತಿದ್ದಂತೆ ಕಾಲುಗಳ ಚರ್ಮದಡಿಯಲ್ಲಿ ರಕ್ತ ಸೋರಿಕೆಯಾಗಿ ಕೆಂಪಾದ ಕಲೆಗಳೂ, ದೇಹದ ಇತರ ಭಾಗಗಳಲ್ಲಿ ನವಿರಾದ ದಡಿಕೆಯೂ ಕಾಣಿಸಿಕೊಳ್ಳಬಹುದು.

ನಮ್ಮ ದೇಹದೊಳಕ್ಕೆ ಯಾವುದೇ ಸೂಕ್ಷ್ಮಾಣುವು ಹೊಕ್ಕಿದಾಗ ಅದನ್ನು ನಾಶಪಡಿಸಿ ಸೋಂಕನ್ನು ಗುಣ ಪಡಿಸುವುದಕ್ಕೆ ನಮ್ಮ ರೋಗರಕ್ಷಣಾ ವ್ಯವಸ್ಥೆಯು ಪ್ರಯತ್ನಿಸುತ್ತದೆ. ಹೀಗೆ ವೈರಸ್ ಜನ್ಯ ಡೆಂಗೀ ಜ್ವರವು ಹೆಚ್ಚಿನವರಲ್ಲಿ ಯಾವುದೇ ಔಷಧಗಳಿಲ್ಲದೆಯೇ ಗುಣಹೊಂದುತ್ತದೆ. ಆದರೆ, ಮಲೇರಿಯಾದ ಪರೋಪಜೀವಿಗಳನ್ನು ಸಂಪೂರ್ಣವಾಗಿ ಹೊಡೆದೋಡಿಸುವುದಕ್ಕೆ ನಮ್ಮ ರೋಗರಕ್ಷಣಾ ವ್ಯವಸ್ಥೆಗೆ ಸಾಧ್ಯವಾಗುವುದಿಲ್ಲ, ಹಾಗಾಗಿ ಮಲೇರಿಯಾ ರೋಗವು ಗುಣಹೊಂದಬೇಕಾದರೆ ಆ ಪರೋಪಜೀವಿಯನ್ನು ನಾಶ ಪಡಿಸುವ ಔಷಧಗಳನ್ನು ಸೇವಿಸಲೇಬೇಕಾಗುತ್ತದೆ. ಆದ್ದರಿಂದ ಜ್ವರವಿದ್ದವರಲ್ಲಿ ಆದಷ್ಟು ಬೇಗನೇ ರಕ್ತ ಪರೀಕ್ಷೆಯನ್ನು ಮಾಡಿಸಿ ಮಲೇರಿಯಾ ಸೋಂಕನ್ನು ಪತ್ತೆ ಮಾಡುವುದು ಅತ್ಯಗತ್ಯವಾಗುತ್ತದೆ. ಡೆಂಗೀ ಜ್ವರವು ಯಾವುದೇ ಚಿಕಿತ್ಸೆಯಿಲ್ಲದೆಯೇ ಗುಣ ಹೊಂದುವುದರಿಂದ ಹೆಚ್ಚಿನವರಲ್ಲಿ ಅದನ್ನು ದೃಢ ಪಡಿಸುವುದಕ್ಕೂ ಸಾಧ್ಯವಾಗುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಸುಲಭದ ಪರೀಕ್ಷೆಗಳು ಲಭ್ಯವಾಗಿವೆಯಾದರೂ, ಅವು ಸಾಕಷ್ಟು ದುಬಾರಿಯಾಗಿದ್ದು, ಅವುಗಳ ವಿಶ್ವಾಸಾರ್ಹತೆಯೂ ಖಾತರಿಯಿಲ್ಲ.

ರಕ್ತಪರೀಕ್ಷೆಯಲ್ಲಿ ಮಲೇರಿಯಾ ಸೋಂಕಿರುವುದು ದೃಢಗೊಂಡ ಕೂಡಲೇ ಪರಿಣಾಮಕಾರಿಯಾದ ಮಲೇರಿಯಾ ನಿರೋಧಕ ಔಷಧಗಳನ್ನು ನೀಡಬೇಕು. ಆದರೆ ಮಲೇರಿಯಾ ಇಲ್ಲದಿದ್ದರೆ ಈ ಔಷಧಗಳನ್ನು ಬಳಸಬಾರದು. ಮಲೇರಿಯಾದ ಪತ್ತೆ ಹಾಗೂ ಚಿಕಿತ್ಸೆಯಲ್ಲಿ ವಿಳಂಬವಾದರೆ ರೋಗವು ಬಿಗಡಾಯಿಸಿ ಸಾವಿಗೂ ಕಾರಣವಾಗಬಹುದು. ಶೇ. 3-6 ರಷ್ಟು ಮಲೇರಿಯಾ (ಅದರಲ್ಲೂ ಫಾಲ್ಸಿಪಾರಂ) ರೋಗಿಗಳಲ್ಲಿ ಮೆದುಳು, ಶ್ವಾಸಾಂಗ, ಯಕೃತ್ತು, ಮೂತ್ರಪಿಂಡಗಳು ಮುಂತಾದ ಅಂಗಗಳಿಗೆ ಹಾನಿಯಾಗಿ ಕುಂಠಿತ ಪ್ರಜ್ಞೆ, ಉಸಿರಾಟದ ತೊಂದರೆ, ತೀವ್ರವಾದ ಕಾಮಾಲೆ ಯಾ ರಕ್ತಕೊರೆ, ಮೂತ್ರದ ಪ್ರಮಾಣದಲ್ಲಿ ಇಳಿಕೆ ಇತ್ಯಾದಿ ತೊಂದರೆಗಳು ಕಾಣಿಸಿಕೊಳ್ಳಬಹುದು. ಅಂತಹಾ ರೋಗಿಗಳನ್ನು ಕೂಡಲೇ ಸುಸಜ್ಜಿತವಾದ ಆಸ್ಪತ್ರೆಗೆ ದಾಖಲಿಸಿ ಸೂಕ್ತವಾದ ಚಿಕಿತ್ಸೆಯನ್ನು ನೀಡಬೇಕಾಗುತ್ತದೆ. ಆದರೆ ನಮ್ಮ ದೇಶದಲ್ಲಿ ದುರ್ಗಮವಾದ ಹಾಗೂ ಹಿಂದುಳಿದ ಪ್ರದೇಶಗಳಲ್ಲೇ ಅತಿ ಹೆಚ್ಚು ಮಲೇರಿಯಾ ಉಂಟಾಗುತ್ತಿದ್ದು, ದುರ್ಲಭವಾಗಿರುವ ವೈದ್ಯಕೀಯ ಸೌಲಭ್ಯ, ಬಡತನ ಹಾಗೂ ಅಜ್ಞಾನಗಳೇ ಶೇ. ತೊಂಭತ್ತಕ್ಕೂ ಹೆಚ್ಚಿನ ಸಾವುಗಳಿಗೆ ಕಾರಣವಾಗಿವೆ.

ಡೆಂಗೀ ಜ್ವರವು ತನ್ನಿಂತಾನಾಗಿ ಕಡಿಮೆಯಾಗುವುದರಿಂದ ಹೆಚ್ಚಿನವರಲ್ಲಿ ಯಾವುದೇ ಚಿಕಿತ್ಸೆಯ ಅಗತ್ಯವಿಲ್ಲ. ಜ್ವರ ನಿವಾರಕ ಔಷಧಗಳನ್ನು ಸೇವಿಸಿದರೆ ವೈರಾಣುಗಳನ್ನು ಕೊಲ್ಲುವ ಜ್ವರದ ಏಟನ್ನೇ ದುರ್ಬಲಗೊಳಿಸಿದಂತಾಗುತ್ತದೆ. ಆದರೆ ಜ್ವರ, ಮೈಕೈನೋವು ಎಂದಾಕ್ಷಣ ನೋವು ನಿವಾರಕ ಔಷಧಗಳನ್ನು ಬಳಸುವುದು ಅತಿ ಸಾಮಾನ್ಯವಾಗಿದ್ದು, ಡೆಂಗೀಯಲ್ಲಿ ಯಕೃತ್ತಿನ ತೊಂದರೆಗಳು, ರಕ್ತಕಣಗಳಲ್ಲಿ ಇಳಿಕೆ, ರಕ್ತಸ್ರಾವ ಇವೇ ಮುಂತಾದ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ ಡೆಂಗೀ ಲಕ್ಷಣಗಳಿರುವವರು ಜ್ವರ ಹಾಗೂ ನೋವು ನಿವಾರಕ ಔಷಧಗಳಿಂದ ಆದಷ್ಟು ದೂರವಿರುವುದೇ ಒಳ್ಳೆಯದು.

ಡೆಂಗೀ ಜ್ವರದಲ್ಲೂ ಶೇ. 5ರಷ್ಟು ರೋಗಿಗಳಲ್ಲಿ ಸೂಕ್ಷ್ಮವಾದ ರಕ್ತನಾಳಗಳಿಗೆ ಹಾನಿಯಾಗಿ ಗಂಭೀರವಾದ ಸಮಸ್ಯೆಗಳುಂಟಾಗಬಹುದು. ವಾರದೊಳಗೆ ಡೆಂಗೀ ಜ್ವರವು ಇಳಿದರೂ, ನಂತರದ 24-48 ಗಂಟೆಗಳ ಅವಧಿಯಲ್ಲಿ ಹೊಟ್ಟೆ ನೋವು, ವಾಂತಿ, ಬಾಯಿ ಹಾಗೂ ಒಸಡುಗಳಲ್ಲಿ ರಕ್ತಸ್ರಾವ, ವಿಪರೀತವಾದ ನಿಶ್ಶಕ್ತಿ ಹಾಗೂ ತಳಮಳ, ಎದೆ ಹಾಗೂ ಉದರಗಳಲ್ಲಿ ದ್ರವ ಸಂಗ್ರಹ, ಯಕೃತ್ತಿನ ಹಿರಿದಾಗುವಿಕೆ, ಪ್ಲೇಟ್ಲೆಟ್ ಕಣಗಳ ಸಂಖ್ಯೆಯಲ್ಲಿ ಇಳಿಕೆ ಹಾಗೂ ರಕ್ತಸಾಂದ್ರತೆಯ ಹೆಚ್ಚಳ ಮುಂತಾದ ತೊಂದರೆಗಳಿರುವ ರೋಗಿಗಳನ್ನು ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ.

ಆ ನಂತರದ 48-72 ಗಂಟೆಗಳ ಅವಧಿಯಲ್ಲಿ ರಕ್ತನಾಳಗಳ ಸೋರಿಕೆಯು ಮುಂದುವರಿದರೆ ರಕ್ತದೊತ್ತಡವು ಇನ್ನಷ್ಟು ಇಳಿದು ಆಘಾತದ ಸ್ಥಿತಿಯುಂಟಾಗಬಹುದು ಹಾಗೂ ರಕ್ತಸ್ರಾವವೂ ಹೆಚ್ಚಾಗಬಹುದು. ಅಂತಹಾ ರೋಗಿಗಳಿಗೆ ಅತಿ ಜಾಗರೂಕತೆಯಿಂದ ಲವಣ ದ್ರಾವಣಗಳ ಪೂರಣವನ್ನು ಕೈಗೊಳ್ಳಬೇಕಾಗುತ್ತದೆ ಮತ್ತು ರಕ್ತಸ್ರಾವವು ತೀವ್ರವಾಗಿದ್ದರೆ ರಕ್ತದ ಮರುಪೂರಣವನ್ನೂ ಮಾಡಬೇಕಾಗಬಹುದು. ಆದರೆ ಯಾವುದೇ ಡೆಂಗೀ ರೋಗಿಗಳಿಗೆ ಯಾವುದೇ ಸಂದರ್ಭದಲ್ಲೂ ಪ್ಲೇಟ್ಲೆಟ್ ಮರುಪೂರಣ ಮಾಡುವ ಅಗತ್ಯವಿಲ್ಲ, ಅದರಿಂದ ಯಾವುದೇ ಪ್ರಯೋಜನವೂ ಇಲ್ಲ. ಅನಗತ್ಯವಾಗಿ ಲವಣ ದ್ರಾವಣ, ರಕ್ತ ಯಾ ಪ್ಲೇಟ್ಲೆಟ್ ಗಳನ್ನು ಪೂರಣ ಮಾಡುವುದರಿಂದ ಒಳಿತಿಗಿಂತಲೂ ಹಾನಿಯೇ ಆಗುವ ಸಾಧ್ಯತೆಗಳು ಹೆಚ್ಚು.

ಮಲೇರಿಯಾ ಹಾಗೂ ಡೆಂಗೀಗಳೆರಡನ್ನೂ ನಿಯಂತ್ರಿಸಬೇಕಾದರೆ ಅವುಗಳನ್ನು ಹರಡುವ ಸೊಳ್ಳೆಗಳನ್ನು ನಿಯಂತ್ರಿಸುವುದು ಅತಿ ಮುಖ್ಯ. ಹಾರುವ ಬಲಿತ ಸೊಳ್ಳೆಗಳ ನಿಯಂತ್ರಣಕ್ಕಿಂತ ನೀರಲ್ಲಿ ಸ್ಥಿರವಾಗಿರುವ ಸೊಳ್ಳೆಮರಿಗಳನ್ನು ನಾಶ ಪಡಿಸುವುದು ಸುಲಭದ ಕೆಲಸ. ಅನಾಫಿಲಸ್ ಹಾಗೂ ಈಡಿಸ್ ಸೊಳ್ಳೆಗಳೆರಡೂ ನಿಂತಿರುವ ಶುದ್ಧವಾದ ನೀರಲ್ಲೇ ಮೊಟ್ಟೆಯಿಡುವುದರಿಂದ ಅಲ್ಲಿಲ್ಲಿ ಎಸೆದಿರುವ ಬಾಟಲುಗಳು, ಡಬ್ಬಗಳು, ಎಳನೀರಿನ ಚಿಪ್ಪುಗಳು, ನೀರಿನ ತೊಟ್ಟಿಗಳು ಇತ್ಯಾದಿಗಳಲ್ಲಿ ನೀರು ನಿಲ್ಲದಂತೆ ಜಾಗ್ರತೆ ವಹಿಸಬೇಕಾಗುತ್ತದೆ.

ಪ್ರತಿಯೋರ್ವ ನಾಗರಿಕನೂ ತನ್ನ ಜವಾಬ್ದಾರಿಯೆಂದರಿತು ಈ ಕೆಲಸವನ್ನು ಮಾಡಬೇಕಾಗುತ್ತದೆ. ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ಕಟ್ಟಡಗಳಲ್ಲಿ ಅತಿ ಹೆಚ್ಚು ನೀರು ನಿಲ್ಲುವ ಅವಕಾಶಗಳಿದ್ದು, ಅದನ್ನು ತಡೆಯುವಲ್ಲಿ ಆರೋಗ್ಯ ಇಲಾಖೆಯ ಕಟ್ಟುನಿಟ್ಟಿನ ಕ್ರಮಗಳಷ್ಟೇ ನೆರವಾಗಬಲ್ಲವು. ಐವತ್ತು-ಅರುವತ್ತರ ದಶಕಗಳಲ್ಲಿ ಮಲೇರಿಯಾ ನಿಯಂತ್ರಣದಲ್ಲಿ ತೋರಿದ್ದ ಹುರುಪು ಈಗ ಅದೆಲ್ಲೋ ಮಾಯವಾಗಿದ್ದು, ಆಡಳಿತದ ಆಲಸ್ಯವು ಜನಸಾಮಾನ್ಯರನ್ನು ಸೊಳ್ಳೆಗಳಿಗೆ ಆಹಾರವಾಗಿಸಿವೆ. ಜನರೂ, ಆಡಳಿತ ವ್ಯವಸ್ಥೆಯೂ ಜೊತೆಗೂಡಿ ದುಡಿಯದಿದ್ದರೆ ಸೊಳ್ಳೆಗಳಿಂದ ಹತರಾಗುವ ಪಾಡನ್ನು ತಪ್ಪಿಸಲಾಗದು.

Comments are closed.