ಮನೋರಂಜನೆ

ಕನ್ನಡ ಚಿತ್ರರಂಗದವರಿಗೆ ಗುಡ್‌ನ್ಯೂಸ್‌ ನೀಡಿದ ಸಿಎಂ ಯಡಿಯೂರಪ್ಪ !

Pinterest LinkedIn Tumblr

ಬೆಂಗಳೂರು: ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿದ್ದು ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಲವಾರು ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿತ್ತು. ಇನ್ನು ಚಿತ್ರಮಂದಿರಗಳಲ್ಲಿ ಶೇ. 50ರಷ್ಟು ಮಾತ್ರ ಆಸನ ಭರ್ತಿಗೆ ಅವಕಾಶ ಎಂದು ವರದಿಯಾಗುತ್ತಿದ್ದು ಈ ಬಗ್ಗೆ ಸ್ಯಾಂಡಲ್ವುಡ್ ನ ಸ್ಟಾರ್ ನಟರು ಆಕ್ರೋಶ ವ್ಯಕ್ತಪಡಿಸಿದ್ದರು.

ಕಳೆದ ಒಂದು ವರ್ಷದಿಂದ ಚಿತ್ರಮಂದಿರಗಳಿಗೆ ಬೀಗ ಜಡಿಯಲಾಗಿತ್ತು. ಇದೀಗ ತಾನೇ ಚಿತ್ರಮಂದಿರಗಳತ್ತ ಪ್ರೇಕ್ಷಕರು ಬರುತ್ತಿದ್ದು ಇದರ ಬೆನ್ನಲ್ಲೇ ಸಿಮೀತ ಆಸನಕ್ಕೆ ಮತ್ತೆ ಅವಕಾಶ ನೀಡಿದರೆ ಚಿತ್ರ ನಿರ್ಮಾಪಕರು, ನಟರು ಮತ್ತು ಕಾರ್ಮಿಕರು ಸಂಕಷ್ಟಕ್ಕೆ ಸಿಲುಕುತ್ತಾರೆ. ಹೀಗಾಗಿ ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಆಸನ ಭರ್ತಿ ಆದೇಶ ಮಾಡಬಾರದು ಎಂದು ಸ್ಯಾಂಡಲ್ವುಡ್ ನಟರಾದ ಪುನೀತ್ ರಾಜಕುಮಾರ್, ದುನಿಯಾ ವಿಜಯ್, ಸುದೀಪ್ ಸೇರಿದಂತೆ ಹಲವು ನಾಯಕರು ಸರ್ಕಾರಕ್ಕೆ ಮನವಿ ಮಾಡಿದ್ದರು.

ಖಾಸಗಿ ಮಾಧ್ಯಮಗಳಲ್ಲಿ ಆಸನ ಭರ್ತಿ ವಿಚಾರವಾಗಿ ನಿರಂತರ ವರದಿಗಳು ಪ್ರಸಾರವಾಗಿದ್ದು ರಾಜಕೀಯ ಪ್ರಚಾರಗಳಿಗೆ ಇಲ್ಲದ ನಿರ್ಬಂಧ ಚಿತ್ರಮಂದಿರಗಳಿಗೆ ಯಾಕೆ ಎಂದು ಪ್ರಶ್ನಿಸಲಾಗುತ್ತಿತ್ತು.

ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು, ರಾಜ್ಯದಲ್ಲಿ ಸಿನಿಮಾ ಮಂದಿರಗಳಲ್ಲಿ ಶೇ. 50ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡುವ ಯಾವ ಪ್ರಸ್ತಾಪವೂ ಸರ್ಕಾರದ ಮುಂದಿಲ್ಲ. ಪ್ರೇಕ್ಷಕರು ಮತ್ತು ಥಿಯೇಟರ್ ಮಾಲೀಕರು ಎಲ್ಲಾ ಆವಶ್ಯಕ ಮುಂಜಾಗ್ರತಾ ಕ್ರಮಗಳನ್ನು ತಪ್ಪದೇ ಪಾಲಿಸಿ, ಕೊರೋನಾ ನಿಯಂತ್ರಣಕ್ಕೆ ಸರ್ಕಾರದೊಂದಿಗೆ ಸಹಕರಿಸಿ ಎಂದು ಮನವಿ ಮಾಡಿದ್ದಾರೆ.

ಪ್ರಸ್ತುತ ದರ್ಶನ್ ಅಭಿನಯದ ರಾಬರ್ಟ್ ಚಿತ್ರ ಬಿಡುಗಡೆಯಾಗಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಇನ್ನು ಸ್ಟಾರ್ ನಟರಾದ ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ, ಸುದೀಪ್ ಅಭಿನಯದ ಕೋಟಿಗೊಬ್ಬ 3 ಚಿತ್ರಗಳು ಬಿಡುಗಡೆಯ ಹೊಸ್ತಿಲಲಿದ್ದು ಅರ್ಧ ಆಸನ ಭರ್ತಿ ವಿಚಾರ ಚಿತ್ರ ನಿರ್ಮಾಪಕರನ್ನು ಚಿಂತೆಗೀಡಾಗುವಂತೆ ಮಾಡಿತ್ತು.

Comments are closed.