ನವದೆಹಲಿ: ಖ್ಯಾತ ಬಾಲಿವುಡ್ ನಟ ಸುಶಾಂತ್ ಸಿಂಗ್ ನಿಗೂಢ ಸಾವಿನ ಕುರಿತಾದ ತನಿಖೆಯಲ್ಲಿ ಕಂಡುಬಂದ ಅಂಶಗಳನ್ನು ಸಿಬಿಐ ಬಹಿರಂಗಪಡಿಸಬೇಕು ಎಂದು ಮಹಾರಾಷ್ಟ್ರದ ಗೃಹಸಚಿವ ಅನಿಲ್ ದೇಶ್ ಮುಖ್ ಆಗ್ರಹಿಸಿದ್ದಾರೆ.
ಕಳೆದ ಸುಮಾರು ಐದು ತಿಂಗಳಿನಿಂದ ಸುಶಾಂತ್ ಸಿಂಗ್ ಸಾವಿಗೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸುತ್ತಿದ್ದು, ಈ ತನಿಖೆಯಲ್ಲಿ ಕಂಡುಬಂದಿರುವ ಅಂಶಗಳನ್ನು ಸಿಬಿಐ ತಿಳಿಸಬೇಕು ಎಂದಿದ್ದಾರೆ.
ಮಾಧ್ಯಮದವರರೊಂದಿಗೆ ಮಾತನಾಡಿದ ಅವರು ನಟ ಸುಶಾಂತ್ ಸಿಂಗ್ ಅವರ ಸಾವಿನ ಕುರಿತಾದ ಮಾಹಿತಿಗಾಗಿ ದೇಶದ ಜನರು ಕಾಯುತ್ತಿದ್ದಾರೆ. ಅದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದನ್ನು ಆದಷ್ಟು ಶೀಘ್ರವಾಗಿ ತಿಳಿಸಬೇಕು ಎಂದರು.
ಜೂನ್ 14ರಂದು ಮುಂಬೈನಲ್ಲಿರುವ ತಮ್ಮ ಅಪಾರ್ಟ್ ಮೆಂಟ್ ನಲ್ಲಿ ನಟ ಸುಶಾಂತ್ ಸಿಂಗ್ ಶವವಾಗಿ ಪತ್ತೆಯಾಗಿದ್ದರು. ಆ ಬಳಿಕ ಮುಂಬೈ ಪೋಲಿಸರಿಂದ ಬಂದ ಪ್ರಾಥಮಿಕ ವರದಿಯು ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿತ್ತು. ಅದಾದ ಬಳಿಕ ಈ ಪ್ರಕರಣದಲ್ಲಿ ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ಗೊಂದಲ ಉಂಟಾಗಿದ್ದು, ಕಳೆದ ಆಗಸ್ಟ್ ನಲ್ಲಿ ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿತ್ತು.
ಸುಶಾಂತ್ ಸಿಂಗ್ ನಿಗೂಢ ಸಾವು ಹಲವಾರು ತಿರುವುಗಳನ್ನು ತೆಗೆದುಕೊಂಡಿದ್ದು,ಆ ಮೂಲಕ ಬಾಲಿವುಡ್ ಸೇರಿದಂತೆ ಹಲವಾರು ಚಿತ್ರರಂಗದ ತಾರೆಯರು ಡ್ರಗ್ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡಿದ್ದರು.
Comments are closed.