ಮನೋರಂಜನೆ

ಬಾಳಬಂಧನಕ್ಕೆ ಒಳಗಾದ ‘ಅಶ್ವಿನಿ ನಕ್ಷತ್ರ’ ನಟಿ!

Pinterest LinkedIn Tumblr


ಕಿರುತೆರೆಯಲ್ಲಿ ಜನಪ್ರಿಯತೆ ಪಡೆದು, ನಂತರ ಹಿರಿತೆರೆಯಲ್ಲೂ ಖ್ಯಾತಿ ಗಳಿಸಿದ ನಟಿ ಮಯೂರಿ ಶುಕ್ರವಾರ (ಜೂ.12) ಬಾಳಬಂಧನಕ್ಕೆ ಒಳಗಾಗಿದ್ದಾರೆ. ಬಹುಕಾಲದ ಗೆಳೆಯ ಅರುಣ್‌ ಜೊತೆ ಅವರು ಸಪ್ತಪದಿ ತುಳಿದಿದ್ದಾರೆ. ಬೆಂಗಳೂರಿನ ಜೆಪಿ ನಗರದ ಶ್ರೀ ತಿರುಮಲಗಿರಿ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿವಾಹ ನೆರವೇರಿದೆ.

ಶೀಘ್ರದಲ್ಲೇ ಮಯೂರಿ ಮದುವೆ ಆಗುತ್ತಾರೆ ಎಂಬ ಸುದ್ದಿ ಇತ್ತೀಚೆಗೆ ಹಬ್ಬಿತ್ತಾದರೂ ಆ ಬಗ್ಗೆ ಯಾರೂ ಅಧಿಕೃತವಾಗಿ ಹೇಳಿಕೊಂಡಿರಲಿಲ್ಲ. ಮಯೂರಿ ಕೂಡ ತಮ್ಮ ಖಾಸಗಿ ಬದುಕಿನ ಬಗ್ಗೆ ಹೆಚ್ಚು ಬಹಿರಂಗ ಪಡಿಸಿರಲಿಲ್ಲ. ಈಗ ತಾವು ಮದುವೆ ಆಗಿರುವ ವಿಚಾರವನ್ನು ಅಭಿಮಾನಿಗಳಿಗೆ ಖುಷಿಖುಷಿಯಾಗಿ ತಿಳಿಸಿದ್ದಾರೆ.

ವಿವಾಹದ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿರುವ ಅವರು, ‘ಹೌದು, ನಾನು ಮದುವೆ ಆಗಿದ್ದೇನೆ. ನಮ್ಮ 10 ವರ್ಷದ ಗೆಳೆತನಕ್ಕೆ ಇಂದು ಅರ್ಥ ಸಿಕ್ಕಿದೆ. ಸದ್ಯದಲ್ಲೇ ನಾವು ಹೆಚ್ಚಿನ ವಿಚಾರ ಹಂಚಿಕೊಳ್ಳುತ್ತೇವೆ’ ಎಂದು ಪೋಸ್ಟ್‌ ಮಾಡಿದ್ದಾರೆ. ನವ ಜೋಡಿಗೆ ಅಭಿಮಾನಿಗಳಿಂದ ಶುಭಾಶಯ ಹರಿದುಬರುತ್ತಿದೆ. ಚಿತ್ರರಂಗದ ಅನೇಕರು ಶುಭ ಹಾರೈಸುತ್ತಿದ್ದಾರೆ.

ಲಾಕ್‌ಡೌನ್‌ ಸಮಯ ಆದ್ದರಿಂದ ಕೇವಲ ಕುಟುಂಬಸ್ಥರು, ಸ್ನೇಹಿತರು ಮತ್ತು ಕೆಲವೇ ಮಂದಿ ಆಪ್ತರ ಸಮ್ಮುಖದಲ್ಲಿ ಮಯೂರಿ-ಅರುಣ್‌ ವಿವಾಹ ನೆರವೇರಿದೆ. ಇವರಿಬ್ಬರದ್ದು ಲವ್‌ ಕಮ್‌ ಅರೇಂಜ್‌ ಮ್ಯಾರೇಜ್‌. ಹಲವು ವರ್ಷಗಳ ಪ್ರೀತಿಗೆ ಎರಡೂ ಕುಟುಂಬದವರ ಒಪ್ಪಿಗೆ ಸಿಕ್ಕಿದ್ದು, ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.

ಕಿರುತೆರೆಯಲ್ಲಿ ಮಿಂಚಿದ ಬಳಿಕ ಹಲವು ಸಿನಿಮಾಗಳಲ್ಲಿ ನಟಿಸುವ ಅವಕಾಶ ಮಯೂರಿಗೆ ಸಿಕ್ಕಿತ್ತು. ಅಜಯ್‌ ರಾವ್‌ ಜೊತೆ ನಟಿಸಿದ ‘ಕೃಷ್ಣ ಲೀಲಾ’ ಚಿತ್ರದ ಮೂಲಕ ಅವರಿಗೆ ಭರ್ಜರಿ ಯಶಸ್ಸು ಸಿಕ್ಕಿತು. ‘ಇಷ್ಟ ಕಾಮ್ಯ’, ‘ನಟರಾಜ ಸರ್ವೀಸ್‌’, ‘ಕರಿಯ 2’ ಮುಂತಾದ ಸಿನಿಮಾಗಳಲ್ಲಿ ಮಯೂರಿ ನಟಿಸಿದ್ದಾರೆ. ಪ್ರಸ್ತುತ, ಅವರು ಅಭಿನಯಿಸಿರುವ ‘ಮೌನಂ’ ಮತ್ತು ‘ಪೊಗರು’ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ.

Comments are closed.