ಬೆಂಗಳೂರು (ಜೂ.7): ಕಿರುತೆರೆ ನಿರೂಪಕಿ ಹಾಗೂ ಸಹ ನಟಿ ಚಂದನಾ ಆತ್ಮಹತ್ಯೆ ಪ್ರಕರಣ ಭಾರೀ ಚರ್ಚೆಗೆ ಕಾರಣವಾಗಿತ್ತು. ಪ್ರೀತಿಸಿ ಮೋಸ ಹೋದ ಕಾರಣಕ್ಕೆ ಅವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಂದನಾ ಪ್ರಿಯಕರ ದಿನೇಶ್ನನ್ನು ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಜೂ.1ನೇ ತಾರಿಕಿನಂದು ಚಂದನಾ ಆತ್ಮಹತ್ಯೆಗೆ ಶರಣಾಗಿದ್ದರು. ಈ ವೇಳೆ ಮಾಡಿಕೊಂಡ ಸೆಲ್ಫಿ ವೀಡಿಯೋದಲ್ಲಿ ದಿನೇಶ್ ನನಗೆ ಮೋಸ ಮಾಡಿದ್ದಾನೆ ಎಂದು ಹೇಳಿದ್ದರು. ಯುವತಿಗೆ ಮೋಸ ಮಾಡಿದ ಆರೋಪದ ಹಿನ್ನಲೆ ದಿನೇಶ್ನನ್ನು ಬಂಧಿಸಲಾಗಿದ್ದು, ವಿಚಾರಣೆ ಆರಂಭಿಸಿದ್ದಾರೆ.
ಕಳೆದ ಐದು ವರ್ಷಗಳಿಂದ ದಿನೇಶ್ ಜೊತೆ ಚಂದನಾ ಪ್ರೀತಿಯಲ್ಲಿದ್ದರು. ಅಲ್ಲದೆ, ಮದುವೆ ಆಗುವ ನಿರ್ಧಾರವನ್ನು ಕೂಡ ತೆಗೆದುಕೊಂಡಿದ್ದರು. ಇತ್ತೀಚೆಗೆ ಮದುವೆಯಾಗುವಂತೆ ದಿನೇಶ್ಗೆ ಚಂದನಾ ಒತ್ತಾಯ ಮಾಡಿದ್ದರು. ‘ಈಗ ಲಾಕ್ಡೌನ್ ಇದೆ. ಹೀಗಾಗಿ ಲಾಕ್ಡೌನ್ ಪೂರ್ಣಗೊಂಡ ನಂತರ ಮದುವೆಯಾಗುವುದಾಗಿ’ ದಿನೇಶ್ ಭರವಸೆ ನೀಡಿದ್ದ. ಆದರೆ, ಮತ್ತೆ ಉಲ್ಟಾ ಹೊಡೆದಿದ್ದ ದಿನೇಶ್ ಮದುವೆಯಾಗಲು ನಿರಾಕರಿಸಿದ್ದ.
ಇನ್ನು, ಮದುವೆ ಆಗುವುದಾಗಿ ನಂಬಿಸಿ ಚಂದನಾ ಜೊತೆ ಈತ ಅನೇಕ ಬಾರಿ ದೈಹಿಕ ಸಂಪರ್ಕ ಬೆಳೆಸಿದ್ದ. ಇನ್ನು, ಐದು ಲಕ್ಷ ಹಣ ಪಡೆದು ದಿನೇಶ್ ವಂಚಿಸಿದ್ದ ಎಂದು ಚಂದನಾ ಸಾವಿಗೂ ಮುನ್ನ ಮಾಡಿರುವ ವಿಡಿಯೋದಲ್ಲಿ ಹೇಳಿಕೊಂಡಿದ್ದರು. ಹೀಗಾಗಿ, ಚಂದನಾ ಕುಟುಂಬದವರು ಪೊಲೀಸ್ ಠಾಣೆಗೆ ದಿನೇಶ್ ವಿರುದ್ಧ ದೂರು ನೀಡಿದ್ದರು. ಇದನ್ನು ಆಧರಿಸಿ ಪೊಲೀಸರು ತನಿಖೆ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ.
Comments are closed.