ಮನೋರಂಜನೆ

ಕುರಿ ಪ್ರತಾಪ್ ನಾಪತ್ತೆ; ಅಸಲಿ ಸತ್ಯ ಇಲ್ಲಿದೆ

Pinterest LinkedIn Tumblr


‘ಬಿಗ್ ಬಾಸ್ ಕನ್ನಡ ಸೀಸನ್ 7’ ಗ್ರ್ಯಾಂಡ್ ಫಿನಾಲೆ ಮುಗಿದನಂತರ ಎಲ್ಲ ಸ್ಪರ್ಧಿಗಳು ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದಾರೆ. ಅದರಲ್ಲೂ 5 ಜನ ಫೈನಲಿಸ್ಟ್‌ಗಳು ಬಹುತೇಕ ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದರು. ಆದರೆ ಕುರಿ ಪ್ರತಾಪ್ ಮಾತ್ರ ಮಾಧ್ಯಮಗಳ ಕ್ಯಾಮರಾ ಮುಂದೆ ಎದುರಾಗಿರಲಿಲ್ಲ. ಇದಕ್ಕೆ ಕಾರಣ ಇದೆ. ಆದರೆ ವಿಜಯ ಕರ್ನಾಟಕಕ್ಕೆ ಬಿಗ್ ಬಾಸ್ ಮನೆಯಿಂದ ಹೊರಬಂದನಂತರ ಟೆಲಿಫೋನ್ ಮೂಲಕ ಕುರಿ ಪ್ರತಾಪ್ ಸಂದರ್ಶನ ನೀಡಿದ್ದರು.

ಕುರಿ ಪ್ರತಾಪ್ ಮಾಧ್ಯಮಗಳ ಮುಂದೆ ಬರದಿರಲು ಇದೇ ಕಾರಣ…..
ಬಿಗ್ ಬಾಸ್‌ನಲ್ಲಿ ಕುರಿ ಪ್ರತಾಪ್ ವಿನ್ ಆಗಿಲ್ಲ ಎಂಬ ಬೇಸರಕ್ಕೆ ಅವರು ಮಾಧ್ಯಮಗಳ ಮುಂದೆ ಹಾಜರಾಗುತ್ತಿಲ್ಲ, ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಆದರೆ ಇದು ಶುದ್ಧ ಸುಳ್ಳು. ವಿಜಯ ಕರ್ನಾಟಕಕ್ಕೆ ಮಾಹಿತಿ ನೀಡಿರುವ ಪ್ರತಾಪ್ ಅವರು ” ತಮ್ಮ ವೈಯಕ್ತಿಕ ಕೆಲಸಗಳಲ್ಲಿ ಬ್ಯುಸಿಯಿದ್ದೇನೆ. ಅಷ್ಟೇ ಅಲ್ಲದೆ 4 ತಿಂಗಳುಗಳ ಕಾಲ ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಹೀಗಾಗಿ ಕೆಲ ತಾಂತ್ರಿಕ ಸಮಸ್ಯೆಗಳು ಉಂಟಾಗಿವೆ. ಮನೆಯ ಕಡೆ ಕೂಡ ಒಂದಿಷ್ಟು ಕೆಲಸ ಇದೆ. ಅದಕ್ಕೂ ಮಿಗಿಲಾಗಿ ನನ್ನ ಕುಟುಂಬವಿರುವುದು ಮೈಸೂರಿನಲ್ಲಿ” ಎಂದಿದ್ದಾರೆ. ಶೂಟಿಂಗ್‌ಗೋಸ್ಕರ ಕುರಿ ಪ್ರತಾಪ್ ಬೆಂಗಳೂರಿಗೆ ಬರುತ್ತಿದ್ದರಷ್ಟೇ. ಹೀಗಾಗಿ ಅವರು ಈಗ ಮೈಸೂರಿನಲ್ಲಿಯೇ ನೆಲೆಸಿದ್ದಾರಂತೆ.

ಬಿಗ್ ಬಾಸ್ ವಿನ್ ಆಗದಿದ್ದಕ್ಕೆ ಕುರಿ ಪ್ರತಾಪ್‌ಗೆ ಖಂಡಿತ ಬೇಸರ ಇಲ್ಲ!
ಕುರಿ ಪ್ರತಾಪ್ ಕೈಯಲ್ಲಿ ಈಗಾಗಲೇ ಒಪ್ಪಿಕೊಂಡ ಹಲವು ಪ್ರಾಜೆಕ್ಟ್‌ಗಳಿವೆ. ಅದನ್ನು ಪ್ರತಾಪ್ ಮುಗಿಸಿಕೊಡಬೇಕಿದೆ. ಶೆಡ್ಯೂಲ್ ಹೇಳಿದಕೂಡಲೇ ಅವರು ಶೂಟಿಂಗ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸ್ವತಃ ಕುರಿ ಪ್ರತಾಪ್ ಹೇಳಿದ್ದಾರೆ. ಬಿಗ್ ಬಾಸ್‌ನಲ್ಲಿ ಕುರಿ ಪ್ರತಾಪ್ ಗೆಲ್ಲದೇ ಇರೋದಿಕ್ಕೆ ಅವರಿಗೆ ಯಾವುದೇ ಬೇಸರವಿಲ್ಲವಂತೆ, ಅವರ ಅಭಿಮಾನಿಗಳಿಗೂ ಕೂಡ ಈ ಮಾತನ್ನೇ ಹೇಳುತ್ತಾರೆ ಪ್ರತಾಪ್. ಅಷ್ಟೇ ಅಲ್ಲದೆ ಬಿಗ್ ಬಾಸ್ ಎಂಬುದು ಅವರ ಪಾಲಿಗೆ ಕೇವಲ ಆಟ ಆಗಿರದೆ ಅದೊಂದು ಅದ್ಭುತ ಅನುಭವವಂತೆ. ಹೀಗಾಗಿ ಎಂದೆಂದಿಗೂ ಬಿಗ್‌ಬಾಸ್‌ಗೆ ಚಿರಋಣಿಯಾಗಿರುತ್ತೇನೆ ಎಂದಿದ್ದಾರೆ ಅವರು. ಇನ್ನೇನು ಕೆಲವೇ ದಿನಗಳಲ್ಲಿ ಅವರು ಚಿತ್ರೀಕರಣದಲ್ಲಿ ಪಾಲ್ಗೊಳ್ಳುವ ಬಗ್ಗೆಯೂ ಮಾತನಾಡಿದ್ದಾರೆ. ಹೀಗಾಗಿ ಕುರಿ ಪ್ರತಾಪ್ ಅವರು ಮಾಧ್ಯಮಗಳ ಮುಂದೆ ಹಾಜರಾಗದ ಕುರಿತು ಹುಟ್ಟಿಕೊಂಡ ಗಾಸಿಪ್‌ಗಳಿಗೆ ಸ್ವತಃ ಪ್ರತಾಪ್ ಅವರೇ ಸ್ಪಷ್ಟನೆ ನೀಡಿದ್ದಾರೆ.

Comments are closed.