ಮನೋರಂಜನೆ

ಕಿರುತೆರೆಯ ಪ್ರಖ್ಯಾತ ನಟ ಸಂಜೀವ್ ಕುಲಕರ್ಣಿ ನಿಧನ

Pinterest LinkedIn Tumblr


ಕನ್ನಡ ಕಿರುತೆರೆ ಲೋಕದ ಪ್ರಖ್ಯಾತ ಕಲಾವಿದ, ನಿರೂಪಕ ಸಂಜೀವ್ ಕುಲಕರ್ಣಿ ನಿನ್ನೆ ಇಹಲೋಕವನ್ನು ತ್ಯಜಿಸಿದ್ದಾರೆ. ಇವರಿಗೆ 49 ವರ್ಷ ವಯಸ್ಸಾಗಿತ್ತು. 15 ವರ್ಷಗಳಿಂದ ಇವರು ಕಾರ್ಡಿಯೋಮಯೋಪತಿ ರೋಗದಿಂದ ಬಳಲುತ್ತಿದ್ದರು. ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.

ಸಂಜೀವ್ ಚಿಕಿತ್ಸೆಗಾಗಿ ಧನಸಹಾಯ ಬೇಡಿದ್ದ ಸುದೀಪ್
ಇಷ್ಟು ವರ್ಷಗಳಲ್ಲಿ ಹಲವಾರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿರುವ ಸಂಜೀವ್ ಅವರ ಹೃದಯದ ಸ್ಥಿತಿ ಕೆಲದಿನಗಳಿಂದ ಇನ್ನಷ್ಟು ಚಿಂತಾಜನಕಸ್ಥಿತಿಗೆ ಬಂದು ತಲುಪಿತ್ತು. ಹೀಗಾಗಿ ಸಂಜೀವ್ ಅವರ ಚಿಕಿತ್ಸೆಗಾಗಿ ಹಣದ ಸಹಾಯದ ಅಗತ್ಯವಿತ್ತು. ಈ ಬಗ್ಗೆ ಇವರ ಮಗ, ಇತರ ಕಲಾವಿದರು, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ಹಣಸಹಾಯ ಬೇಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಂಜೀವ್ ನಮ್ಮನೆಲ್ಲ ಅಗಲಿದ್ದಾರೆ. ಇಂದು ಮೃತರ ಅಂತ್ಯಕ್ರಿಯೆ ಚಾಮರಾಜಪೇಟೆಯ ಟಿಆರ್‌ಮಿಲ್ ಬಳಿ ನಡೆಯಲಿದೆ.

ಸಂಜೀವ್ ಕುಲಕರ್ಣಿ ನಿಧನಕ್ಕೆ ಸಂತಾಪ ಸೂಚಿಸಿದ ಸ್ಯಾಂಡಲ್‌ವುಡ್‌ ಕಲಾವಿದರು
ಇವರ ನಿಧನದ ಸುದ್ದಿ ಕೇಳಿ ಅನೇಕ ಕಲಾವಿದರು ಸೋಶಿಯಲ್ ಮೀಡಿಯಾದಲ್ಲಿ ಸಂತಾಪವನ್ನು ಸೂಚಿಸುತ್ತಿದ್ದಾರೆ. “ಸಂಜೀವ್ ಕುಲಕರ್ಣಿ ಇಲ್ಲ ಎಂದು ನಂಬಲಾಗುತ್ತಿಲ್ಲ. ಹಲವಾರು ಸರ್ಜರಿಗಳಿಗೆ ಒಳಗಾದ ಇವರು ಮೇಲಿಂದ ಮೇಲೆ ನೋವನ್ನು ಅನುಭವಿಸಿದ್ದಾರೆ. ಅವರ ನಗುವಿನ ಮುಖವನ್ನು ನೋಡಿರುವ ನನಗೆ ಅವರ ಶವವನ್ನು ನೋಡಲು ಆಗದು. ನಾನು ಶವ ನೋಡಲು ಇಷ್ಟಪಡುವುದಿಲ್ಲ. ನೀವು ಜೀವಂತವಾಗಿರುವಾಗ ಹೇಗೆ ಇರುತ್ತಿದ್ದೀರೋ ಹಾಗೆ ನೆನಪಿನಲ್ಲಿ ಇರುತ್ತೀರಿ” ಎಂದು ನಟಿ ಶಾಂಭವಿ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ನಟ ರವಿಶಂಕರ್ ಗೌಡ ಅವರು ” ಅಪ್ಪಟ ಕನ್ನಡದ ಪ್ರತಿಭೆ , ಅಜಾತಶತ್ರು , ಒಳ್ಳೆಯ ಗೆಳೆಯ. ನೀವು ಬದುಕಬೇಕೆಂಬ ಉತ್ಕಟ ಆಸೆಯಿಂದ ಕನ್ನಡಿಗರು ಪ್ರಾರ್ಥನೆ ಮಾಡಿ ತಮ್ಮ ಕೈಲಾದ ಸಹಾಯವನ್ನು ಮಾಡಿದ್ದರೂ ವಿಧಿಲಿಖಿತ ಮಾತ್ರ ಬದಲಾಗಲಿಲ್ಲ. ಹೋಗಿ ಬನ್ನಿ. ಸಂಜೀವ್ ನಿಮ್ಮ ಆತ್ಮಕ್ಕೆ ರಾಯರು ಚಿರಶಾಂತಿ ನೀಡಲಿ. ಗೆಳೆಯ ಸಂಜೀವ್ ಕುಲಕರ್ಣಿ ಇನ್ನಿಲ್ಲ.” ಎಂದು ಟ್ವೀಟ್ ಮಾಡಿದ್ದಾರೆ.

ಹಲವು ಧಾರಾವಾಹಿಗಳಲ್ಲಿ ನಟಿಸಿದ್ದ ಸಂಜೀವ್ ಕುಲಕರ್ಣಿ
ಸಂಜೀವ್ ಅವರು ‘ಸಂಭ್ರಮ-ಸೌರಭ’ ಎಂಬ ಕಾರ್ಯಕ್ರಮವನ್ನು ಪ್ರತಿ ತಿಂಗಳು ಆಯೋಜಿಸುತ್ತಿದ್ದರು. ಜೊತೆಗೆ ಕನ್ನಡದ ‘ನಾಗಿಣಿ, ರಾಜಾ ರಾಣಿ, ಏಟು ಎದಿರೇಟು’ ಮುಂತಾದ ಧಾರಾವಾಹಿಗಳಲ್ಲಿ ಅವರು ನಟಿಸಿದ್ದಾರೆ. ಅಷ್ಟೇ ಅಲ್ಲದೆ ವೃತ್ತಿಯಿಂದ ಅವರು ಪ್ರಖ್ಯಾತ ನಿರೂಪಕರಾಗಿದ್ದವರು. ಸಂಜೀವ್ ಕುಲಕರ್ಣಿ ಮಗ ಸೌರಭ್ ಕುಲಕರ್ಣಿ ಕೂಡ ಓರ್ವ ನಟ. ಇವರ ಮಗ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುವ ‘ಪಾಪಾ ಪಾಂಡು’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

Comments are closed.