ಮನೋರಂಜನೆ

ಕೊಟ್ಟ ಮಾತು ಉಳಿಸಿಕೊಂಡ ನಟ ಅಭಿಷೇಕ್ ಅಂಬರೀಷ್

Pinterest LinkedIn Tumblr


ಮಂಡ್ಯ: ನಟ ಅಭಿಷೇಕ್ ಅವರು ಚುನಾವಣೆ ಮುಗಿದ ಮೇಲೆ ಮಂಡ್ಯಕ್ಕೆ ಬಂದು ಟೀ ಕುಡಿಯುತ್ತೇನೆ ಎಂದು ಹೇಳಿದ್ದರು. ಇದೀಗ ಅವರು ಕೊಟ್ಟ ಮಾತಿನಂತೆ ಮಂಡ್ಯಕ್ಕೆ ಬಂದು ಟೀ ಕುಡಿದಿದ್ದಾರೆ.

ಚುನಾವಣೆ ಮುಗಿದ ಬಳಿಕ ನಟ ಅಭಿಷೇಕ್ ಅಂಬರೀಶ್ ಮತ್ತು ಸುಮಲತಾ ಏ. 19(ಇಂದು) ಸಿಂಗಾಪುರಕ್ಕೆ ಹೋಗುತ್ತಾರೆ. ಸಿಂಗಾಪುರಕ್ಕೆ ತೆರಳಲು ಈಗಾಗಲೇ ಟಿಕೆಟ್ ಕೂಡ ಬುಕ್ ಮಾಡಿದ್ದಾರೆ ಎನ್ನಲಾದ ನಕಲಿ ಟಿಕೆಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದಕ್ಕೆ ಉತ್ತರಿಸಿದ್ದ ಅಭಿಷೇಕ್, ಚುನಾವಣೆ ಮುಗಿದ ಮಾರನೇ ದಿನ ಮಂಡ್ಯದ ಮಹಾವೀರ್ ಸರ್ಕಲ್‍ಗೆ ಬಂದು ಟೀ ಕುಡಿಯುತ್ತೇನೆ. ಯಾವ ಸಿಂಗಾಪುರಕ್ಕೂ ಹೋಗಲ್ಲ. ಇದೆಲ್ಲವೂ ಸುಳ್ಳು ಎಂದಿದ್ದರು. ಅದರಂತೆಯೇ ಇದೀಗ ಮಂಡ್ಯದ ಮಹಾವೀರ ಸರ್ಕಲ್‍ನ ಟೀ ಶಾಪ್‍ಗೆ ಬಂದು ಟೀ ಕುಡಿದಿದ್ದಾರೆ.

ಇದೇ ವೇಳೆ ಮಾಧ್ಯಮದ ಜೊತೆ ಮಾತನಾಡಿದ ಅಭಿಷೇಕ್, ಎರಡು ವಾರದ ಹಿಂದೆ ಇಲ್ಲಿಗೆ ಬಂದಿದ್ದೆ. ಆಗ ಬೆಲ್ಲ ಖಾಲಿಯಾಗಿದೆ ಎಂದು ಸಕ್ಕರೆ ಟೀ ಕೊಟ್ಟಿದ್ದರು. ಆಗ ಚುನಾವಣೆ ಮುಗಿದ ಬಳಿಕ ನಾನು ಬರುತ್ತೇನೆ ಆಗ ಬೆಲ್ಲದ ಟೀ ಕೊಡಿ ಎಂದು ಕೇಳಿದ್ದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಸಿಂಗಾಪುರಕ್ಕೆ ಹೋಗುತ್ತಾರೆ ಎಂದು ಸುದ್ದಿ ಹರಿದಾಡುತ್ತಿತ್ತು. ನಾನು ಯಾವ ಸಿಂಗಾಪುರಕ್ಕೂ ಹೋಗಲ್ಲ ಎಂದು ಮೊದಲೇ ಹೇಳಿದ್ದೆ. ಜೊತೆಗೆ ಮಂಡ್ಯದ ಮಹಾವೀರ ಸರ್ಕಲ್‍ನಲ್ಲೇ ಟೀ ಕುಡಿಯುವ ಪ್ಲಾನ್ ಇತ್ತು. ಇವತ್ತು ಆರಾಮಾಗಿ ಟೀ ಕುಡಿಯಲು ಬಂದಿದ್ದೇನೆ ಎಂದಿದ್ದಾರೆ.

ಜನರು ನಮ್ಮ ಕೈಯನ್ನು ಹಿಡಿಯುತ್ತಾರೆ ಎಂಬ ನಂಬಿಕೆ ಇದೆ. ಈಗಾಗಿ ಎಲ್ಲವೂ ಒಳ್ಳೆದಾಗುತ್ತದೆ ಎಂಬ ವಿಶ್ವಾದ ಇದೆ. ಫಲಿತಾಂಶಕ್ಕಾಗಿ ಕಾಯುತ್ತಿದ್ದೇವೆ ಎಂದು ಅಭಿಷೇಕ್ ಹೇಳಿದ್ದಾರೆ.

Comments are closed.