ಬೆಂಗಳೂರು: ಇಂದು ನಟಿ ಶೃತಿ ಹರಿಹರನ್ ಮಹಿಳಾ ಆಯೋಗದ ಕಚೇರಿಗೆ ಆಗಮಿಸಿ ಮೀಟೂ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಹೇಳಿಕೆಯನ್ನು ದಾಖಲಿಸಿದರು. ಕಚೇರಿಗೆ ಆಗಮಿಸಿದ ಶೃತಿ ಹರಿಹರನ್, ನಾನು ಸಕ್ಕರೆ ಇದ್ದಂತೆ.. ಮಾಧ್ಯಮಗಳು ಇರುವೆ ಅಂತಾ ಹೇಳಿದ್ದರು. ಮಹಿಳಾ ಆಯೋಗದಿಂದ ಹೊರ ಬಂದಾಗ ಈ ಕುರಿತು ಪ್ರಶ್ನಿಸಿದಾಗ, ನಾನು ಆ ರೀತಿ ಹೇಳಿಯೇ ಇಲ್ಲ ಎಂದು ಮಾತು ಬದಲಿಸಿದರು.
ನನ್ನ ಜೀವನದಲ್ಲಿ ಮಾಧ್ಯಮಗಳನ್ನು ತುಂಬಾ ಗೌರವಿಸುತ್ತೇನೆ. ನಾನು ಆ ರೀತಿ ಹೇಳಿಲ್ಲ ಅಂತಾ ಹೇಳಿದಾಗ, ನಮ್ಮ ಪ್ರತಿನಿಧಿ, ನೀವು ಮಾತನಾಡಿರುವ ಆಡಿಯೋ ಮತ್ತು ವಿಡಿಯೋ ಇದೆ. ಬೇಕಾದರೆ ಒಂದು ಸಾರಿ ಕೇಳಿ ಎಂದು ಪ್ರಶ್ನೆ ಮಾಡಿದರು. ಒಂದು ಕ್ಷಣ ಗೊಂದಲಕ್ಕೊಳಗಾದ ಶೃತಿ ನಗುವೊಂದನ್ನು ಬೀರಿ ಕಾರ್ ಹತ್ತಿ ಹೊರಟು ಹೋದರು.
ನಟ ಅರ್ಜುನ್ ಸರ್ಜಾ ವಿರುದ್ಧ ಶೃತಿ ಹರಿಹರನ್ ಮಾಧ್ಯಮಗಳ ಮುಂದೆಯೇ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಈ ಸಂಬಂಧ ಮಹಿಳಾ ಅಯೋಗ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿತ್ತು. ಪ್ರಕರಣ ದಾಖಲಿಸಿಕೊಂಡ ಮಹಿಳಾ ಅಯೋಗ ಶೃತಿಗೆ ತಮ್ಮ ಹೇಳಿಕೆಯನ್ನು ದಾಖಲಿಸುವಂತೆ ಸೂಚಿಸಿತ್ತು. ಅದ್ಯಾಕೋ ಶೃತಿ ಮಾತ್ರ ಕಳೆದ ಕೆಲ ದಿನಗಳಿಂದ ಫುಲ್ ಸೈಲೆಂಟ್ ಆಗಿದ್ದರು. ಈ ಹಿನ್ನೆಲೆಯಲ್ಲಿ ಇಂದು ವಕೀಲ ಅನಂತ್ ನಾಯ್ಕ್ ಅವರ ಜೊತೆ ಮಹಿಳಾ ಆಯೋಗದ ಮುಂದೆ ಹಾಜರಾದ ಶೃತಿ, ವಿಸ್ಮಯ ಚಿತ್ರೀಕರಣದ ಅನುಭವವನ್ನು ಹಂಚಿಕೊಂಡಿದ್ದಾರೆ. ಶೃತಿಯನ್ನು ಪ್ರತ್ಯೇಕ ಕೊಠಡಿಗೆ ಕರೆದುಕೊಂಡ ಹೋದ ಮಹಿಳಾ ಆಯೋಗ ಅಧ್ಯಕ್ಷೆ ನಾಗಲಕ್ಷ್ಮಿ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿ ಪಡೆದುಕೊಂಡಿದ್ದಾರೆ.
Comments are closed.