ಮನೋರಂಜನೆ

ನಟ ಅನಂತ್‌ನಾಗ್‌-ರಾಧಿಕಾ ಚೇತನ್‌ ಅಭಿನಯದ ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಚಿತ್ರ ಮೇ 25 ರಂದು ರಾಜ್ಯಾದ್ಯಂತ ಬಿಡುಗಡೆ

Pinterest LinkedIn Tumblr

ಬೆಂಗಳೂರು: ಕನ್ನಡ ಸಿನಿಮಾಭಿಮಾನಿಗಳು ಕಾತುರದಿಂದ ನಿರೀಕ್ಷಿಸುತ್ತಿರುವ ಹಿರಿಯ ನಟ ಅನಂತ್‌ನಾಗ್‌ ಮತ್ತು ರಾಧಿಕಾ ಚೇತನ್‌ ಅಭಿನಯದ ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಚಿತ್ರ ಮೇ 25 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ಕನ್ನಡ ಚಿತ್ರರಂಗದಲ್ಲಿ ಈ ವರೆಗೂ ಯಾರು ಮಾಡದಂಥ ವಿಭಿನ್ನ ಕಥಾ ಹಂದರವಾನ್ನಿ ಇಟ್ಟುಕೊಂಡು ನರೇಂದ್ರ ಬಾಬು ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಆ್ಯಕ್ಷನ್-ಕಟ್ ಹೇಳಿರುವ ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಚಿತ್ರ ಸ್ಯಾಂಡಲ್ ವುಡ್’ನಲ್ಲಿ ಬಹಳ ನಿರೀಕ್ಷೆಯನ್ನು ಹುಟ್ಟುಹಾಕಿದೆ.

ಸಿನೆಮಾವನ್ನು ಕಲರ್ಸ್‌ ಆಫ್ ಆನೇಕಲ್‌ ಹೆಸರಿನಲ್ಲಿ ಸುದರ್ಶನ್‌, ರಾಮಮೂರ್ತಿ ಹಾಗು ದುಬೈಯ ಖ್ಯಾತ ಉದ್ಯಮಿ, ಗಾಯಕರು ಆಗಿರುವ ಹರೀಶ್ ಶೇರಿಗಾರ್ ಮತ್ತು ಅವರ ಧರ್ಮಪತ್ನಿ ಶರ್ಮಿಳಾ ಶೇರಿಗಾರ್ ಅವರ ಆಕ್ಮೇ ಮೂವೀಸ್ ಇಂಟರ್‍ನ್ಯಾಷನಲ್ ಬ್ಯಾನರ್‍ನಡಿಯಲ್ಲಿ ನಿರ್ಮಿಸಲಾಗಿದೆ.

ಈ ಸಿನೆಮಾದ ಟ್ರೇಲರ್ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದೆ. ಚಿತ್ರರಂಗದ ಜಗತ್ತಿನಲ್ಲಿ ನಾನಾ ರೀತಿಯ ಪಾತ್ರಗಳ ಮೂಲಕ ಗುರುತಿಸಿಕೊಂಡ ಅನಂತ್‌ನಾಗ್‌, ಈ ಸಿನೆಮಾದಲ್ಲಿ ವಿಶಿಷ್ಟ ಪಾತ್ರ ನಿರ್ವಹಿಸಿದ್ದಾರೆ.

ಅನಂತ್‌ನಾಗ್‌ ಅವರು ವೈಯಕ್ತಿಕವಾಗಿ ತುಂಬಾ ಇಷ್ಟಪಟ್ಟ ಕಥೆಗಳಲ್ಲಿ ಈ ಸಿನೆಮಾ ಒಂದಾಗಿದ್ದು, ಚಿತ್ರದ ಕಥೆಯಲ್ಲಿ ಅನಂತ್‌ನಾಗ್‌ ಅವರ ಕೊಡುಗೆ ಅಪಾರ’ ಎನ್ನುವುದು ನಿರ್ದೇಶಕ ನರೇಂದ್ರ ಬಾಬು ಮಾತು.

ಸಿನಿಮಾದ ಕಥೆಯೇ ವಿಭಿನ್ನವಾಗಿದೆ. ಜೀವನದಲ್ಲಿ ದಾಂಪತ್ಯವೇ ಮುಖ್ಯ ಎಂದುಕೊಂಡಿರುವ ಒಬ್ಬನಿಗೆ, ಲೀವಿಂಗ್‌ ರಿಲೇಶನ್‌ ಶಿಪ್‌ನಲ್ಲಿರುವ ಜೋಡಿಯ ಪರಿಚವಾಗುತ್ತದೆ. ಇವರಿಬ್ಬರದ್ದೂ ವಿಭಿನ್ನ ಬದುಕು. ಅವರ ನಡುವಿನ ಕಥೆಯೇ ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಸಿನಿಮಾ. ಈ ಸಿನಿಮಾದಲ್ಲಿ ಭಾವನಾತ್ಮಕ ತೊಳಲಾಟವನ್ನು ಹೇಳಲು ಹೊರಟಿದ್ದಾರೆ ನಿರ್ದೇಶಕರು. ಜತೆಗೆ ವಯಸ್ಸು ಅರವತ್ತಾದರೂ ದುಡಿದರೆ ಮಾತ್ರ ಜೀವನ ಸಾಗಿಸಲು ಸಾಧ್ಯ ಎಂಬ ಸತ್ಯವನ್ನೂ ತೋರಿಸುತ್ತಿದ್ದಾರೆ.

ಈ ಚಿತ್ರದಲ್ಲಿ ಅನಂತ್‌ನಾಗ್‌ ವಿಶೇಷ ಪಾತ್ರ ಮಾಡುತ್ತಿದ್ದಾರೆ. ನಿವೃತ್ತಿ ನಂತರವೂ ಹೊಟ್ಟೆ ಪಾಡಿಗಾಗಿ ಗಾರ್ಮೆಂಟ್ಸ್‌ ಸೇರಿಕೊಳ್ಳುವ ಪಾತ್ರವನ್ನು ಅವರು ನಿರ್ವಹಿಸಿದ್ದಾರೆ. ಇವರ ಜತೆ ರಾಧಿಕಾ ಚೇತನ್‌ ಕೂಡ ಪಾತ್ರ ಮಾಡಿದ್ದು, ಖಾಸಗಿ ಕಂಪನಿಯ ಬಾಸ್‌ ಆಗಿ ಕಾಣಿಸಿಕೊಂಡಿದ್ದಾರೆ.

ಸರಿ ತಪ್ಪುಗಳ ನಡುವಿನ ಜರ್ನಿಯಲ್ಲಿ ಏನೆಲ್ಲಾ ಆಗುತ್ತದೆ ಎಂಬ ಅಂಶದೊಂದಿಗೆ ಸಿನಿಮಾ ಸಾಗುತ್ತದೆ ಎನ್ನುವ ನರೇಂದ್ರ ಬಾಬು ಇಲ್ಲಿ, ಯಾವುದೇ ಸಂದೇಶ ಹೇಳುವ ಪ್ರಯತ್ನ ಮಾಡಿಲ್ಲ ಎನ್ನುತ್ತಾರೆ. ನರೇಂದ್ರ ಬಾಬು ಈ ಸಿನಿಮಾ ಬಗ್ಗೆ ಖುಷಿಯಾಗಲು ಕಾರಣ, ಯಾವುದೇ ರಾಜಿಯಾಗದೇ ಸಿನಿಮಾ ಮಾಡಿದ್ದು. ಸಿನಿಮಾದಲ್ಲಿ ಏನೇನು ಮಾಡಬೇಕೆಂದು ಬಯಸಿದ್ದರೋ ಅವೆಲ್ಲವನ್ನು ತೆರೆಮೇಲೆ ತರುವ ಅವಕಾಶ ಇಲ್ಲಿ ಸಿಕ್ಕಿತಂತೆ.

ಚಿತ್ರದ ಮತ್ತೊಂದು ವಿಶೇಷ ಎಂದರೆ ಈ ಚಿತ್ರಕ್ಕಾಗಿ ಜಗತ್ತಿನ ಅತ್ಯಂತ ಎತ್ತರದ ಕಟ್ಟಡವಾದ ಭುರ್ಜ್‌ಖಲೀಫಾದಲ್ಲಿ ಚಿತ್ರೀಕರಣ ಮಾಡಲಾಗಿರುವುದು. ಈವರೆಗೂ ಕನ್ನಡದ ಯಾವುದೇ ಸಿನೆಮಾ ಇಲ್ಲಿ ಚಿತ್ರೀಕರಣವಾಗಿಲ್ಲ. ಹಾಗೆ ಚಿತ್ರೀಕರಣ ಮಾಡಿದ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಯನ್ನು “ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಚಿತ್ರ ಮುಡಿಗೇರಿಸಿಕೊಂಡಿದೆ.

ಚಿತ್ರಕ್ಕೆ ಸಂಗೀತ ನಿರ್ದೇಶನವನ್ನು ರಂಗಭೂಮಿ ಹಿನ್ನೆಲೆಯ ರಾಮಚಂದ್ರ ಹಡಪದ್ ಅವರು ನೀಡಿದ್ದು, ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು, ವಿಜಯ ಪ್ರಕಾಶ್, ಅರ್ಮಾನ್ ಮಲ್ಲಿಕ್, ವರ್ಷ, ವಾಣಿ ಸತೀಶ್, ಶ್ವೇತ ಪ್ರಭು ಹಾಡುಗಳಿಗೆ ಧ್ವನಿಯಾಗಿದ್ದಾರೆ. ವಿನಾಯಕರಾಮ್ ಕಲಗಾರು, ನರೇಂದ್ರ ಬಾಬು ಸಾಹಿತ್ಯ ಬರೆದಿದ್ದಾರೆ.

ಗಲ್ಫಿನಲ್ಲಿ ಚಿರಪರಿಚಿತ ಖ್ಯಾತ ಉದ್ಯಮಿಯಾಗಿರುವ ಹರೀಶ್ ಶೇರಿಗಾರ್ ಹಾಗು ಅವರ ಧರ್ಮಪತ್ನಿ ಶರ್ಮಿಳಾ ಶೇರಿಗಾರ್ ಅವರ ಆಕ್ಮೇ ಮೂವೀಸ್ ಇಂಟರ್‍ನ್ಯಾಷನಲ್ ಬ್ಯಾನರ್‍ನಡಿಯಲ್ಲಿ ನಿರ್ಮಿಸಲಾಗಿರುವ ಈ ಸಿನೆಮಾ ಮೂರನೆಯದ್ದಾಗಿದೆ. ಮೊದಲ ಕಾಣಿಕೆಯಾಗಿ ‘ಮಾರ್ಚ್-22 ‘ ಸಿನೆಮಾ ನೀಡಿದ್ದು, ಈ ಸಿನೆಮಾ ಭರ್ಜರಿ ಹಿಟ್ ಕಂಡಿತ್ತು. ಅನಂತರ ನಟಿ ವಿಜಯಲಕ್ಷ್ಮೀ ಸಿಂಗ್‌ಮತ್ತು ನಟ ಜೈಜಗದೀಶ್‌ ಜೊತೆಗೆ ಸೇರಿ ‘ಯಾನ’ ಸಿನೆಮಾ ನಿರ್ಮಿಸಿದ್ದು, ಈ ಸಿನೆಮಾ ಬಿಡುಗಡೆಗೆ ಸಿದ್ಧವಾಗಿದೆ.

Comments are closed.