ಬೆಂಗಳೂರು: ನನ್ ಮಗಂದ್ ನನ್ ಎಕ್ಕಡ ಅಂತಾ ತಲೆ ತುಂಬಾ ಇರುವ ಕೂದಲನ್ನು ಕೆದರಿಸಿ ಕೆದರಿಸಿ ಹೇಳುವ ಹುಚ್ಚಾ ವೆಂಕಟ್ ಗೆ ಕೊನೆಗೂ ಚುನಾವಣಾ ಆಯೋಗ ಎಕ್ಕಡವನ್ನು ದಯಪಾಲಿಸಿದೆ.
ನಟ, ನಿರ್ದೇಶಕ ಹುಚ್ಚ ವೆಂಕಟ್ ಈ ಬಾರಿ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಎಲ್ಲಾ ಪಕ್ಷದವರು ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈಗಾಗಲೇ ಚುನಾವಣೆ ಪ್ರಚಾರವನ್ನು ಶುರು ಮಾಡಿದ್ದಾರೆ.
ಹುಚ್ಚ ವೆಂಕಟ್ ಆರ್ ಆರ್ ನಗರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಚುನಾವಣೆ ಆಯೋಗವು ಅಭ್ಯರ್ಥಿಗಳ ಗುರುತನ್ನ, ಚಿಹ್ನೆಯನ್ನು ಘೋಷಣೆ ಮಾಡಿದೆ. ಆದರೆ ನಿಮ್ಮಪ್ಪನ ಚಪ್ಪಲಿ ಸೈಜ್ ಗೊತ್ತಾ, ಅಪ್ಪಂಗೆ ಯಾವತ್ತಾದ್ದರೂ ಚಪ್ಪಲಿ ಕೊಡಿಸಿದ್ದೀರಾ ಅಂತಾ ಪದೇ ಪದೇ ಟಿವಿಯೆದುರು ಕುಂತಾಗ ಸೆಂಟಿಮೆಂಟ್ ಡೈಲಾಗ್ ಹೇಳುವ ವೆಂಕಟ್ ಗೆ ಚಿಹ್ನೆಯಾಗಿ ಎಕ್ಕಡವೆ ತನ್ನ ಗುರುತಾಗಿ ಸಿಕ್ಕಿದೆ.
ಎಕ್ಕಡನಾ ಕಾಡಿಬೇಡಿ ವೆಂಕಟ್ ಪಡೆದುಕೊಂಡರೋ ಅಥವಾ ಚುನಾವಣಾಧಿಕಾರಿಗಳೇ ವೆಂಕಟ್ ಎಕ್ಕಡಾ ಡೈಲಾಗ್ ಗೆ ಫಿದಾ ಆಗಿ ಇದೇ ಚಿಹ್ನೆ ಕೊಟ್ಟರೋ ಗೊತ್ತಿಲ್ಲ. ಆದರೆ ಎಕ್ಕಡದೊಂದಿಗೆ ಕಣಕ್ಕಿಳಿದಿರುವ ವೆಂಕಟ್ ಆರ್ ಆರ್ ನಗರದಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸಲಿದ್ದಾರೆ.
Comments are closed.