ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಮಗ ನಿಖಿಲ್ ಅಭಿನಯದ ಮೂರನೆಯ ಚಿತ್ರವಾದ “ಸೀತಾರಾಮ ಕಲ್ಯಾಣ’ ಚಿತ್ರವು ತೆಲುಗಿನ “ರಾರೊಂಡಾಯಿ ವೇದುಕ ಚೂಡಮ್’ ಎಂಬ ಚಿತ್ರವೊಂದರ ರೀಮೇಕ್ ಎಂಬ ಮಾತಿತ್ತು. ಆದರೆ, ನಿಖಿಲ್ ಆಗಲೀ, ನಿರ್ದೇಶಕ ಹರ್ಷ ಆಗಲೀ, ಈ ಕುರಿತು ಯಾವುದೇ ಸ್ಪಷ್ಟೀಕರಣ ಕೊಟ್ಟಿರಲಿಲ್ಲ. ಈಗ ಚಿತ್ರ ರೀಮೇಕ್ ಹೌದಾ, ಅಲ್ಲವಾ ಎಂಬುದರ ಕುರಿತು ಚಿತ್ರದ ಕಾರ್ಯಕಾರಿ ನಿರ್ಮಾಪಕ ಸುನೀಲ್ ಗೌಡ ಮಾತನಾಡಿದ್ದಾರೆ.
“ಸೀತಾರಾಮ ಕಲ್ಯಾಣ’ ಚಿತ್ರವು ರೀಮೇಕ್ ಎನ್ನುವ ವಿಷಯ ಸುಳ್ಳು ಎನ್ನುವ ಅವರು, 20 ಚಿತ್ರಗಳಿಂದ ಸ್ಫೂರ್ತಿ ಪಡೆದಿದೆ ಎನ್ನುತ್ತಾರೆ. “ಇದು ಯಾವುದೋ ಒಂದು ಚಿತ್ರದ ರೀಮೇಕ್ ಅಲ್ಲ, 20 ಚಿತ್ರಗಳಿಂದ ಸ್ಫೂರ್ತಿ ಪಡೆದಿದೆ. “ದಿಲ್ವಾಲೆ ದುಲ್ಹನಿಯಾ ಲೇಜಾಯೆಂಗೆ’, “ಸೂರ್ಯವಂಶ’, “ಚಂದ್ರಚಕೋರಿ’, “ರೇಸು ಗುರ್ರಂ’ ಮುಂತಾದ ಚಿತ್ರಗಳು ಈ ಚಿತ್ರಕ್ಕೆ ಸ್ಫೂರ್ತಿ. ಇವೆಲ್ಲಾ ಫ್ಯಾಮಿಲಿ ಚಿತ್ರಗಳು.
ಹಾಗಾಗಿ ಈ ಚಿತ್ರಗಳಿಂದ ಸ್ಫೂರ್ತಿ ಪಡೆದು ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿದೆ’ ಎನ್ನುತ್ತಾರೆ ಸುನೀಲ್. “ಸೀತಾರಾಮ ಕಲ್ಯಾಣ’ ಚಿತ್ರವನ್ನು ಚೆನ್ನಾಂಬಿಕಾ ಫಿಲಂಸ್ನಡಿ ಅನಿತಾ ಕುಮಾರಸ್ವಾಮಿ ನಿರ್ಮಿಸುತ್ತಿದ್ದು, ಎ. ಹರ್ಷ ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ರಾಮ್-ಲಕ್ಷ್ಮಣ್ ಅವರ ಸಾಹಸ ನಿರ್ದೇಶನವಿದೆ. ಇನ್ನು ಹರ್ಷ ಅವರ “ಅಂಜನೀಪುತ್ರ’ದಲ್ಲಿ ಜೊತೆಯಾಗಿದ್ದ ಛಾಯಾಗ್ರಾಹಕ ಸ್ವಾಮಿ ಮತ್ತು ಸಂಗೀತ ನಿರ್ದೇಶಕ ರವಿ ಬಸ್ರೂರು, ಈ ಚಿತ್ರದಲ್ಲೂ ಜೊತೆಯಾಗುತ್ತಿದ್ದಾರೆ.
-ಉದಯವಾಣಿ
Comments are closed.