ಮನೋರಂಜನೆ

ಮನಸ್ಸನ್ನು ಕಾಡುವ ಗೌಡ್ರು ಹೋಟೆಲ್‌ ಚಿತ್ರ ವಿಮರ್ಶೆ

Pinterest LinkedIn Tumblr

*ಪದ್ಮಾ ಶಿವಮೊಗ್ಗ


ಕಥೆಗೆ ಪ್ರಾಮುಖ್ಯತೆ ನೀಡಿರುವ ಮಲೆಯಾಳಂ ಸಿನಿಮಾಗಳು ಸಾಕಷ್ಟು ಯಶಸ್ವಿಯಾಗಿರುವುದನ್ನು ನೋಡಬಹುದು. ಅದೇ ರೀತಿ ಉಸ್ತಾದ್‌ ಹೋಟೆಲ್‌ ಎಂಬ ಚಿತ್ರ ಅಲ್ಲಿ ಸೂಪರ್‌ಹಿಟ್‌ ಆಗಿತ್ತು. ಈಗ ಅದು ಗೌಡ್ರು ಹೋಟೆಲ್‌ ಆಗಿ ಕನ್ನಡಕ್ಕೆ ರೀಮೇಕ್‌ ಆಗಿದೆ. ಜನರ ಹೊಟ್ಟೆ ತುಂಬಿಸುವುದಕ್ಕಿಂತ ಉಂಡವರ ಮನಸ್ಸು ತುಂಬುವಂತೆ ಮಾಡುವುದೇ ಪಾಕಶಾಸ್ತ್ರ ಎನ್ನುವುದನ್ನು ಸಿನಿಮಾ ನಿರೂಪಿಸಿದೆ. ಚಿತ್ರದ ದೇಹ ಸ್ವಲ್ಪ ದುರ್ಬಲವಾಗಿದೆ ಎನ್ನಿಸಿದರೂ ಆತ್ಮ ಸೊಗಸಾಗಿದೆ. ಬದುಕಿನ ಸಾರ್ಥಕತೆಯ ಬಗ್ಗೆ ಪ್ರೇಕ್ಷಕ ಒಮ್ಮೆ ಆತ್ಮವಿಮರ್ಶೆ ಮಾಡಿಕೊಳ್ಳುವಂತೆ ಕಥೆ ಹೆಣೆಯಲಾಗಿದೆ. ನಿರ್ದೇಶಕ ಪಿ.ಕುಮಾರ್‌ ಹೊಸ ನಾಯಕ ನಟನನ್ನು ಈ ಚಿತ್ರದ ಮೂಲಕ ತೆರೆಗೆ ಪರಿಚಯಿಸಿದ್ದಾರೆ.

ಈ ಹಿಂದೆ ಪ್ರಕಾಶ್‌ ರೈ, ಒಗ್ಗರಣೆ ಎಂಬ ಸಿನಿಮಾ ನಿರ್ದೇಶನ ಮಾಡಿದ್ದರು. ಊಟದೊಂದಿಗೆ ಬದುಕಿನ ಸ್ವಾದವನ್ನು ಹೇಳುವ ಪ್ರಯತ್ನ ಮಾಡಿದ್ದರು. ಎರಡು ರೀತಿಯ ಜನರಿರುತ್ತಾರೆ. ಊಟಕ್ಕಾಗಿ ಪರಿತಪಿಸುವ ಹಸಿದ ಹೊಟ್ಟೆ, ಇನ್ನೊಂದು ಊಟಕ್ಕೆ ಕೊರತೆ ಇಲ್ಲದಿದ್ದರೂ ರುಚಿ ಕೇಳುವ ಬಾಯಿ. ಹಾಗೆ ರುಚಿಯಾದ ಅಡುಗೆಯನ್ನು ಇನ್ನೊಬ್ಬರಿಗೆ ಮಾಡಿ ಬಡಿಸಿ ಅವರು ಆನಂದಿಸುವುದನ್ನು ನೋಡುವುದರಲ್ಲಿ ಸಂತೋಷ ಕಂಡುಕೊಳ್ಳುವವರು ಕೆಲವರಿದ್ದಾರೆ. ಪ್ರೀತಿ ಇರುವವರು ರುಚಿಯಾದ ಅಡುಗೆ ಜತೆ ತಮ್ಮ ಪ್ರೀತಿಯನ್ನು ಉಣಬಡಿಸುತ್ತಾರೆ. ಹೀಗೆ ಸಿನಿಮಾದಲ್ಲಿ ಇವರೆಲ್ಲರೂ ಇದ್ದಾರೆ. ಇಲ್ಲಿ ಹಸಿದ ಹೊಟ್ಟೆಗೆ ಊಟ ಹಾಕುವುದರಲ್ಲಿ ಆತ್ಮತೃಪ್ತಿ ಇದೆಯೋ ಅಥವಾ ರುಚಿ ಕೇಳುವವರಿಗೆ ಸ್ವಾದಭರಿತ ತಿನಿಸು ಮಾಡಿ ಬಡಿಸಿ ಶಹಭಾಷ್‌ಗಿರಿ ಗಿಟ್ಟಿಸುವುದರಲ್ಲಿ ತೃಪ್ತಿ ಇದೆಯೋ? ಇದನ್ನು ತಿಳಿಯಲು ಈ ಸಿನಿಮಾ ನೋಡಲೇಬೇಕು.

ನಾಯಕ ರಿಷಿ ವಿದೇಶದಲ್ಲಿ ಓದಿದವನು. ಆದರೆ, ಗೌಡ್ರು ಹೊಟೇಲ್‌ ನಡೆಸುವ ತಾತ (ಪ್ರಕಾಶ್‌ ರೈ )ನಂತೆ ಅಡುಗೆ ಮಾಡೋದ್ರಲ್ಲಿ ಖುಷಿ ಕಾಣುವವನು. ದೊಡ್ಡ ಶೆಫ್‌ ಆಗಿ ವಿದೇಶದ ಶ್ರೀಮಂತ ಹೊಟೇಲ್‌ನಲ್ಲಿ ಕೆಲಸ ಮಾಡುವ ಕನಸು ಕಾಣುತ್ತಿರುತ್ತಾನೆ. ಅಪ್ಪ ಶ್ರೀಮಂತ ಉದ್ಯಮಿ. ಹೊಟೇಲ್‌ ನಡೆಸುವವನ ಮಗ ಎಂದು ಹೇಳಿಕೊಳ್ಳುವುದು ಅವಮಾನ ಎಂದು ಭಾವವಿಸಿದವನು. ತನ್ನ ಮಗ ತನ್ನಂತೆ ದೊಡ್ಡ ಉದ್ಯಮಿಯಾಗಬೇಕು ಎಂಬ ಕನಸು ಕಾಣುವವನು. ಈ ವಿಚಾರದಲ್ಲಿ ಅಪ್ಪ-ಮಗನ ನಡುವೆ ಭಿನ್ನಾಭಿಪ್ರಾಯ ಬೆಳೆದು ಕೆಲ ಕಾಲ ತಾತನ ಜತೆ ಇರಲು ಬರುತ್ತಾನೆ ರಿಷಿ. ಈ ನಡುವೆ ಕಥೆಯಲ್ಲಿ ಒಂದು ಲವ್‌ ಸ್ಟೋರಿಯೂ ಸೇರಿಕೊಳ್ಳುತ್ತದೆ. ಹಣ ಮುಖ್ಯವೋ ಅಥವಾ ಪ್ರೀತಿಯೋ ಎನ್ನುವುದರ ಎಳೆಯೂ ಇದೆ. ಗೌಡ್ರು ಹೊಟೇಲ್‌ ಇರುವ ಜಾಗದ ಮೇಲೆ ಫೈವ್‌ ಸ್ಟಾರ್‌ ಹೊಟೇಲ್‌ ಉದ್ಯಮಿ ಕಣ್ಣು ಬೀಳುತ್ತದೆ. ಇದನ್ನು ಕಬಳಿಸುವ ಪ್ರಯತ್ನ ನಡೆಯುತ್ತದೆ. ತಾತನಿಗೆ ರಿಷಿ ಗೌಡ್ರು ಹೊಟೇಲ್‌ನಲ್ಲೇ ಉಳಿಯಬೇಕು ಎಂಬ ಆಸೆ. ರಿಷಿಗೆ ವಿದೇಶದಲ್ಲಿ ಅಡುಗೆ ಭಟ್ಟನಾಗುವ ಕನಸು. ಅಪ್ಪನಿಗೆ ತನ್ನ ಬಳಿಯೇ ಇರಲಿ ಎಂಬ ಧಾವಂತ. ಮೊಮ್ಮಗ ರಿಷಿಗೆ ಊಟ ನೀಡುವುದರಲ್ಲಿ ಇರುವ ಪರಮಾನಂದದ ಪರಿಚಯ ಮಾಡಿಸುತ್ತಾನೆ ತಾತ. ಅದರ ಹಿಂದಿನ ಉದ್ದೇಶದ ಬಗ್ಗೆಯೂ ಅರಿವು ಮೂಡಿಸುತ್ತಾನೆ. ಮುಂದೆ ಏನಾಗುತ್ತದೆ? ರಿಷಿ ಏನು ಮಾಡುತ್ತಾನೆ? ಎನ್ನುವುದನ್ನು ಸಿನಿಮಾದಲ್ಲಿ ನೋಡಿ.

ಗೌಡ್ರು ಹೊಟೇಲ್‌ ಬಿರಿಯಾನಿಯಂತೆ ಸ್ಪೈಸಿ ಅಲ್ಲ ಚಿತ್ರದ ಹೀರೋ. ಮೊಸರನ್ನಕ್ಕೇ ಸೀಮಿತ. ಇನ್ನು ವೇದಿಕಾ ಮೊಸರನ್ನದಲ್ಲಿ ಗೋಡಂಬಿಯಂತೆ. ಪ್ರಕಾಶ್‌ ರೈ ಮಾಗಿದ, ಸಂತನಂಥ ಅನ್ನದಾತ. ನಿರ್ದೇಶನದ ಬಗ್ಗೆ ಹೇಳುವುದಾದರೆ ಬಿರಿಯಾನಿಗೆ ಸ್ವಲ್ಪ ನೀರು ಜಾಸ್ತಿಯಾಗಿದೆ. ಇಡೀ ಚಿತ್ರದಲ್ಲಿ ಮೊದಲರ್ಧಕ್ಕಿಂತ ದ್ವಿತಿಯಾರ್ಧ ಚೆನ್ನಾಗಿ ಮೂಡಿಬಂದಿದೆ. ಕೊನೆಯ ದೃಶ್ಯಗಳು ನೋಡುಗರನ್ನು ಭಾವುಕರನ್ನಾಗಿ ಮಾಡುತ್ತವೆ. ಕಥೆ ಚಿತ್ರದ ಜೀವಾಳ. ಮಾಮೂಲಿ ಕಮರ್ಷಿಯಲ್‌ ಸಿನಿಮಾ ನೋಡಿ ಬೇಸತ್ತವರು, ನಾನ್‌ಸೆನ್ಸ್‌ ದೃಶ್ಯಗಳಿಲ್ಲದೆ, ಒಂದು ಒಳ್ಳೆಯ ಕಥೆ ಇರಬೇಕು ಎನ್ನುವವರು ನೋಡಬೇಕಾದ ಸಿನಿಮಾ.

ನಿರ್ದೇಶನ: ಪೊನ್‌ ಕುಮಾರನ್‌

ನಿರ್ಮಾಣ: ಸತೀಶ್‌ ರೆಡ್ಡಿ

ತಾರಾಗಣ: ಪ್ರಕಾಶ್‌ ರೈ, ರಚನ್‌ ಚಂದ್ರ, ವೇದಿಕಾ, ಅನಂತ್‌ನಾಗ್‌, ಕಡ್ಡಿಪುಡಿ ಚಂದ್ರು

ಛಾಯಾಗ್ರಹಣ: ಶಿವ

ಸಂಗೀತ: ಯುವನ್‌ ಶಂಕರ್‌ರಾಜಾ

Comments are closed.