ಮನೋರಂಜನೆ

ಬಿಗ್’ಬಾಸ್’ನಲ್ಲಿ ಮನೆಯ ಇತರ ಸದಸ್ಯರ ಮೇಲೆ ಮೂತ್ರ ಎರಚಿದ ಓಂ ಸ್ವಾಮಿ ! ಮನೆಯಿಂದ ಹೊರಗೆ ಹಾಕಿದ ಭದ್ರತಾ ಸಿಬ್ಬಂದಿ

Pinterest LinkedIn Tumblr

ಮುಂಬೈ: ಹಿಂದಿಯ ಬಿಗ್ ಬಾಸ್ ಶೋ ಈ ವರ್ಷ ಜೋರು ಸದ್ದು ಮಾಡುತ್ತಿದೆ. ಸಾಕಷ್ಟು ವಿವಾದಗಳನ್ನೂ ಸೃಷ್ಟಿಸುತ್ತಿದೆ. ಓಂ ಸ್ವಾಮಿ ಎಂಬ ಸ್ಪರ್ಧಿಯನ್ನು ಈ ವಾರ ಹೊರಹಾಕಲಾಗಿದೆ. ಸಹ ಸದಸ್ಯರ ಮೇಲೆ ಈತ ಮೂತ್ರ ಎರಚಿದನೆಂಬ ಆರೋಪ ಇದೆ. ಹೀಗಾಗಿ, ಬಿಗ್ ಬಾಸ್’ನ ಭದ್ರತಾ ಸಿಬ್ಬಂದಿ ಇವರನ್ನು ಮನೆಯಿಂದ ಆಚೆ ಹಾಕಿದ್ದಾರೆ.

ಓಂ ಸ್ವಾಮಿ ಮಾಡಿದ್ದೇನು?
ಕ್ಯಾಪ್ಟನ್ಸಿ ಟ್ಯಾಸ್ಕ್’ನಲ್ಲಿ ಸಹಸ್ಪರ್ಧಿಗಳಾದ ಬಾನಿ ಮತ್ತು ರೋಹನ್ ಮೇಲೆ ಓಂ ಸ್ವಾಮಿ ಮೂತ್ರ ಎರಚುತ್ತಾರೆ. ಇದರಿಂದ ಸಿಟ್ಟಿಗೆದ್ದ ಇತರ ಸದಸ್ಯರು ಓಂ ಸ್ವಾಮಿಯನ್ನು ಮನೆಯಿಂದ ಹೊರಹಾಕುವಂತೆ ಬಿಗ್’ಬಾಸ್’ಗೆ ಒತ್ತಾಯಿಸುತ್ತಾರೆ. ಇದೇ ವೇಳೆ, ಕ್ಯಾಮೆರಾ ಮುಂದೆ ಹೋಗುವ ಓಂ ಸ್ವಾಮಿ, ಮೂತ್ರ ವಿಷವಲ್ಲ. ಅದನ್ನು ಎರಚಿದರೆ ಯಾವುದೇ ಅಪರಾಧವಾಗುವುದಿಲ್ಲ ಎಂದು ತಮ್ಮ ನಡವಳಿಕೆಯನ್ನು ಸಮರ್ಥಿಸಿಕೊಳ್ಳುತ್ತಾರೆ. ಆದರೆ, ತನ್ನನ್ನು ಮನೆಯಿಂದ ಹೊರಹಾಕುವ ಸಾಧ್ಯತೆ ಇದೆ ಎಂದು ಗೊತ್ತಾದ ಮೇಲೆ ತಾನು ಎರಚಿದ್ದು ಮೂತ್ರವಲ್ಲ, ನೀರು ಎಂದು ಸ್ಪಷ್ಟನೆ ನೀಡಲು ಪ್ರಯತ್ನಿಸುತ್ತಾರೆ. ಆದರೆ, ಬಿಗ್ ಬಾಸ್ ಭದ್ರತಾ ಸಿಬ್ಬಂದಿಯು ಓಂ ಸ್ವಾಮಿಯನ್ನು ಮನೆಯಿಂದ ಹೊರಗೆ ಎಳೆದುಕೊಂಡು ಹೋಗುತ್ತಾರೆ.

ಮನೆಯಿಂದ ಹೊರಬಂದ ಓಂ ಸ್ವಾಮಿ ಈಗ ಸಾಕಷ್ಟು ಚಾನೆಲ್’ಗಳಿಗೆ ಮುಖ್ಯ ಅತಿಥಿ. ಬಿಗ್ ಬಾಸ್ ಮನೆಯ ಎಲ್ಲ ಸದಸ್ಯರೂ ದೇಶದ್ರೋಹಿಗಳು ಎಂದು ಓಂ ಸ್ವಾಮಿ ಹಂಗಿಸಿದ್ದಾರೆ. ಮನೆಯೊಳಗಿದ್ದಾಗ ತನ್ನ ಆಹಾರಕ್ಕೆ ಇತರ ಸದಸ್ಯರು ಮದ್ದು ಹಾಕಿ ಕಲಬೆರಕೆ ಮಾಡಿ ಕೊಡುತ್ತಿದ್ದರು ಎಂದು ಸ್ವಾಮಿ ಆರೋಪಿಸಿದ್ದಾರೆ. ಎಲ್ಲರೂ ಗುಂಪು ಮಾಡಿಕೊಂಡು ತಮ್ಮೊಬ್ಬರನ್ನೇ ಟಾರ್ಗೆಟ್ ಮಾಡುತ್ತಿದ್ದರು ಎಂದೂ ಅವರು ಹೇಳಿಕೊಂಡಿದ್ದಾರೆ.

ಇಷ್ಟಕ್ಕೇ ಸುಮ್ಮನಾಗದ ಓಂ ಸ್ವಾಮಿ, ಬಿಗ್ ಬಾಸ್ ನಿರೂಪಕ ಸಲ್ಮಾನ್ ಖಾನ್ ಮೇಲೂ ಹರಿಹಾಯ್ದಿದ್ದಾರೆ. ಸಲ್ಮಾನ್ ಒಬ್ಬ ಐಎಸ್’ಐ ಏಜೆಂಟ್ ಎಂದು ಓಂ ಸ್ವಾಮಿ ದೂರಿದ್ದಾರೆ.

ಯಾರು ಈ ಓಂ ಸ್ವಾಮಿ?
ಸದಾಚಾರಿ ಸಾಯಿಬಾಬಾ ಸ್ವಾಮಿ ಓಂ ಜೀ ಎಂಬ ಪೂರ್ಣ ಹೆಸರು ಹೊಂದಿರುವ ಓಂ ಸ್ವಾಮಿ ಮಧ್ಯವಯಸ್ಸಿನವರಾಗಿದ್ದು, ಜ್ಯೋತಿಷ್ಯ ಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಹೊಂದಿದ್ದಾರೆ. ಜ್ಯೋತಿಷ್ಯ, ಆದ್ಯಾತ್ಮ ಹಾಗೂ ರಾಜಕಾರಣದ ಬಗ್ಗೆ ತನಗೆ ಅಪರಿಮಿತಾಸಕ್ತಿ ಇದೆ ಎನ್ನುತ್ತಾರೆ. ಸದ್ಯ ತಮ್ಮದೇ ರಾಜಕೀಯ ಪಕ್ಷ ಹೊಂದಿದ್ದು, 2015ರ ದಿಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗಿಯೂ ಖುದ್ದು ನರೇಂದ್ರ ಮೋದಿಯವರೇ ತಮ್ಮ ಪರ ಪ್ರಚಾರ ಮಾಡಲು ಆಸಕ್ತರಾಗಿದ್ದರೆಂದು ಇವರು ಹೇಳಿಕೊಂಡಿದ್ದಾರೆ. ಆದರೆ, ಇಡೀ ಜಗತ್ತೇ ತಮ್ಮ ಮನೆ ಎಂದು ಇವರು ತಮ್ಮ ಪರಿಚಯ ಮಾಡಿಕೊಂಡಿರುವುದನ್ನು ಬಿಟ್ಟರೆ ಇವರ ಕೌಟುಂಬಿಕ ಹಿನ್ನೆಲೆ ಬಗ್ಗೆ ಯಾರಿಗೂ ಗೊತ್ತಿಲ್ಲ.

Comments are closed.