ಬೆಂಗಳೂರು: ನಿವೇಶನ ನೀಡುವುದಾಗಿ ಹಣ ಪಡೆದು ವಂಚಿಸಿದ ಆರೋಪದಡಿ ಶಾಸಕ ಸಿ.ಪಿ.ಯೋಗೇಶ್ವರ್ ಸೇರಿದಂತೆ ಐವರ ವಿರುದ್ಧ ಸಂಪಂಗಿರಾಮನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
‘ಸಿ.ಪಿ. ಯೋಗೇಶ್ವರ್, ಮಂಜು ಕುಮಾರಿ, ಸಿ.ಪಿ. ಗಂಗಾಧರೇಶ್ವರ್, ಮಹದೇವಯ್ಯ ಮತ್ತು ಎಚ್.ಆರ್. ರಮೇಶ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದರು.
‘ಯೋಗೇಶ್ವರ್ ಮತ್ತು ಅವರ ಕುಟುಂಬದ ಸದಸ್ಯರ ಒಡೆತನದ ಮೆಗಾಸಿಟಿ ಡೆವಲಪರ್ಸ್ ಅಂಡ್ ಬಿಲ್ಡರ್ಸ್ ಲಿಮಿಟೆಡ್ ಕಂಪೆನಿಯು ಬಿಡದಿ ಬಳಿ ವಜ್ರಗಿರಿ ಟೌನ್ಶಿಪ್ ಯೋಜನೆಯಲ್ಲಿ ನಿವೇಶನ ಹಂಚಿಕೆ ಮಾಡುವುದಾಗಿ ಕಂತುಗಳ ರೂಪದಲ್ಲಿ ಹಣ ಪಡೆದು ವಂಚಿಸಿದೆ. ಹೀಗಾಗಿ ಇವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಕೋರಿ ಫಕ್ರುದ್ದೀನ್ ಎಂಬುವರು 9ನೇ ಎಸಿಎಂಎಂ ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಿದ್ದರು.
‘ಈ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ನ್ಯಾಯಾಲಯ ಸೂಚಿಸಿತ್ತು. ತನಿಖೆ ವೇಳೆ, ಮೆಗಾಸಿಟಿ ಡೆವಲಪರ್ಸ್ ಅಂಡ್ ಬಿಲ್ಡರ್ಸ್ ಲಿಮಿಟೆಡ್ ವಂಚನೆ ಮಾಡಿರುವುದು ಗೊತ್ತಾಗಿತ್ತು. ಹೀಗಾಗಿ ಐವರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.
Comments are closed.