
ಬೆಂಗಳೂರು: ‘ಮಾಸ್ತಿಗುಡಿ’ಯ ಚಿತ್ರೀಕರಣದ ವೇಳೆ ದುರಂತವಾಗಿ ಸಾವನ್ನಪ್ಪಿದ ಅನಿಲ್ ಹಾಗೂ ಉದಯ್ ಈಗಷ್ಟೆ ಸಿನಿರಂಗಕ್ಕೆ ಕಾಲಿಟ್ಟವರು. ಕಟ್ಟುಮಸ್ತಾದ ದೇಹದಿಂದಲೇ ತೆರೆಮೇಲೆ ಖಳನಟರಾಗಿ ಮಿಂಚುವ ಕನಸು ಕಂಡಿದ್ದವರು. ಈಗ ಖಡಕ್ ನಟನೆಯೇ ಅವರ ಪ್ರಾಣವನ್ನು ಕಸಿದಿದೆ.
ಸುಮಾರು 30 ರಿಂದ 60 ಅಡಿ ಇರುವ ಜಲಾಶಯಕ್ಕೆ 100 ಅಡಿ ಎತ್ತರದಿಂದ ಹಾರುವ ವಿಜಯ್ ಒಬ್ಬರೇ ಏರ್ ಜಾಕೆಟ್ ಧರಿಸಿದ್ದರು. ಆದರೆ, ಉದಯ್ ಹಾಗೂ ಅನಿಲ್ ಯಾವುದೇ ರಕ್ಷಣಾ ಕವಚ ಧರಿಸಿರಲಿಲ್ಲ. ಅದಕ್ಕೆ ಕಾರಣ, ಸಿಕ್ಸ್ಪ್ಯಾಕ್! ಈ ಇಬ್ಬರಿಗೂ ಸಿಕ್ಸ್ಪ್ಯಾಕ್ ಇತ್ತು. ಅದು ತೆರೆಮೇಲೆ ಕಾಣಬೇಕೆನ್ನುವ ಕಾರಣಕ್ಕೆ ಇವರು ಜಾಕೆಟ್ ಧರಿಸಿರಲಿಲ್ಲ. ಒಂದು ವೇಳೆ ಧರಿಸಿದ್ದಿದ್ದರೆ ಇಬ್ಬರು ಖಳನಟರ ಪ್ರಾಣವನ್ನು ತಿಪ್ಪಗೊಂಡನಹಳ್ಳಿ ಕೆರೆ ನುಂಗುತ್ತಿರಲಿಲ್ಲ.
ಯುವನಟ ಉದಯ್ ‘ಜಯಮ್ಮನ ಮಗ’ ಚಿತ್ರದ ಮೂಲಕ ಹೆಸರು ಮಾಡಿದ್ದರು. ‘ಬಹದ್ದೂರ್’ ಚಿತ್ರದಲ್ಲೂ ಗಮನ ಸೆಳೆಯುವಂಥ ನಟನೆ ತೋರಿದ್ದರು. ಅನಿಲ್ ಕೂಡ ಸಾಕಷ್ಟು ಸಿನಿಮಾಗಳಲ್ಲಿ ಸ್ಟಂಟ್ ಮಾಡಿದ್ದರೂ, ‘ಮಾಸ್ಟರ್ ಪೀಸ್’, ‘ಜಾಕ್ಸನ್’, ‘ಮಿಸ್ಟರ್ ಆ್ಯಂಡ್ ಮಿಸೆಸ್ ರಾಮಾಚಾರಿ’’ ಇವರಿಗೆ ಹೆಸರು ತಂದುಕೊಟ್ಟಿದ್ದವು. ‘ಮಾಸ್ತಿಗುಡಿ’ಯಲ್ಲಿ ಮುಖ್ಯ ಖಳನಾಯಕನಾಗಿದ್ದ ಅನಿಲ್ಗೆ ಈ ಚಿತ್ರ ಬಹುದೊಡ್ಡ ವೇದಿಕೆಯೇ ಆಗಿತ್ತು. ಆದರೆ, ಈ ಉದಯೋನ್ಮುಖ ಖಳನಟರ ಅತೀ ಉತ್ಸಾಹವೋ, ಚಿತ್ರದ ಸಾಹಸ ನಿರ್ದೇಶಕರ ನಿರ್ಲಕ್ಷ್ಯವೋ, ಇದೀಗ ಇವರನ್ನು ಸಾವಿನ ಮನೆಗೆ ತಳ್ಳಿದೆ.
ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಕ್ಲೈಮ್ಯಾಕ್ಸ್ ದೃಶ್ಯಗಳ ಚಿತ್ರೀಕರಣ ಸೋಮವಾರ ಮಧ್ಯಾಹ್ನ 2.48ಕ್ಕೆ ಶುರುವಾಗಿತ್ತು. ಕೆಲವೇ ನಿಮಿಷಗಳಲ್ಲಿ ಈ ದುರಂತವೂ ಸಂಭವಿಸಿದೆ. ಚಿತ್ರದಲ್ಲಿ ಅರಣ್ಯ ಪ್ರದೇಶವನ್ನು ನಾಶ ಮಾಡುವ ಅನಿಲ್ ಹಾಗೂ ಉದಯ್ ಅವರ ವಿರುದ್ಧ ನಾಯಕ ಹೋರಾಡುವ ದೃಶ್ಯ ಅದಾಗಿತ್ತು. ನಾಯಕನಿಂದ ತಪ್ಪಿಸಿಕೊಳ್ಳುವ ಇಬ್ಬರು ಖಳನಟರು ಹೆಲಿಕಾಪ್ಟರ್ ಏರಿ ಸಾಹಸ ಪ್ರದರ್ಶಿಸುತ್ತಾರೆ. ಹೆಲಿಕಾಪ್ಟರ್ನಲ್ಲೂ ಹೋರಾಟ ನಡೆದು, ನಾಯಕನಿಗಿಂತ ಮುಂಚೆ ಉದಯ್ ಹಾಗೂ ಅನಿಲ್ ನೀರಿಗೆ ಹಾರುತ್ತಾರೆ. ನಂತರ ಅಂಡರ್ ವಾಟರ್ನಲ್ಲೂ ಟ್ ನಡೆಯುತ್ತದೆ. ಇಷ್ಟು ಸಾಹಸ ದೃಶ್ಯಗಳು ಸಾಹಸ ನಿರ್ದೇಶಕ ರವಿವರ್ಮರ ನಿರ್ದೇಶನದಂತೆ ಸಾಗಿತ್ತು.
Comments are closed.