ಮನೋರಂಜನೆ

ವೈದ್ಯರು, ಉದ್ಯಮಿಗಳು, ರಾಜಕಾರಣಿಗಳ ಮೇಲೆ ಏಕೆ ನಿಷೇಧ ಹೇರುವುದಿಲ್ಲ ? ಪಾಕ್ ಕಲಾವಿದರಿಗೆ ನಿಷೇಧದ ಬಗ್ಗೆ ನಟಿ ಪ್ರಿಯಾಂಕಾ ಅಸಮಾಧಾನ

Pinterest LinkedIn Tumblr

priyanka-chopra

ನ್ಯೂಯಾರ್ಕ್: ಉರಿ ಉಗ್ರ ದಾಳಿ ಬಳಿಕ ಪಾಕಿಸ್ತಾನ ಕಲಾವಿದರಿಗೆ ಭಾರತದಲ್ಲಿ ನಿಷೇಧ ಹೇರಬೇಕೆಂಬ ಆಗ್ರಹಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಪಾಕಿಸ್ತಾನ ಕಲಾವಿದರ ಮೇಲೆ ನಿಷೇಧ ಹೇರುವುದು ಸರಿಯಾದ ನಡೆಯಲ್ಲ. ದೇಶದಲ್ಲಿ ನಡೆಯುವ ಎಲ್ಲಾ ರಾಜಕೀಯ ಬೆಳವಣಿಗೆಗಳಿಗೆ ಕಲಾವಿದರು ಹಾಗೂ ನಟರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತಿದೆ. ಕೇವಲ ಕಲಾವಿದರನ್ನಷ್ಟೇ ಏಕೆ ದೂರಲಾಗುತ್ತದೆ? ಉದ್ಯಮ ವಲಯಗಳಲ್ಲಿ ಏಕೆ ಇದು ಅನ್ವಯವಾಗುವುದಿಲ್ಲ ಎಂದು ಪ್ರಶ್ನಿಸಿದ್ದಾರೆ. ವೈದ್ಯರು ಹಾಗೂ ರಾಜಕಾರಣಿಗಳಿಗೆ ಏಕೆ ಅನ್ವಯಿಸುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.

ನಿಜವಾದ ಅಪರಾಧಿಗಳ ವಿರುದ್ಧ ಹೋರಾಟ ಮಾಡುವ ಬದಲು ಕಲಾವಿದರನ್ನು ಗುರಿಯಾಗಿಸುವುದು ಸರಿಯಲ್ಲ. ದೇಶದ ಸುರಕ್ಷತೆಗಾಗಿ ಸರ್ಕಾರ ತೆಗೆದುಕೊಳ್ಳುವ ಯಾವುದೇ ತೀರ್ಮಾನಕ್ಕೆ ನಾನು ಬದ್ಧಳಾಗಿದ್ದೇನೆ. ಆದರೆ, ಕಲಾವಿದರನ್ನು ಈ ವಿಚಾರದಲ್ಲಿ ತಳುಕು ಹಾಕುವುದು ಸರಿಯಲ್ಲ. ಕಲಾವಿದರೆಂದರೆ ಮನರಂಜನೆ. ಮನರಂಜನಾ ಕ್ಷೇತ್ರವೊಂದು ವ್ಯಾವಹಾರಿಕ ಕೇಂದ್ರ. ಜನರು ತಮಗಿಷ್ಟವಾದ ಸಿನಿಮಾವನ್ನು ಆಯ್ಕೆ ಮಾಡಿಕೊಂಡು ಟಿಕೆಟ್ ಪಡೆದು 3 ಗಂಟೆಗಳ ಕಾಲ ಸಿನಿಮಾ ನೋಡಿ ಬರುತ್ತಾರೆ ಅಷ್ಟೇ. ಕಲಾವಿದರು ಸಾರ್ವಜನಿಕ ವ್ಯಕ್ತಿಗಳು ಎಂಬ ಕಾರಣಕ್ಕಾಗಿ ಸಿನಿಮಾ ಕಲಾವಿದರನ್ನು ಮಾತ್ರ ಗುರಿ ಮಾಡಲಾಗುತ್ತಿದೆ ಇದು ಸರಿಯಲ್ಲ ಎಂದು ತಿಳಿಸಿದ್ದಾರೆ.

ಉರಿ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಮತ್ತಷ್ಟು ಹದಗೆಡುವಂತೆ ಮಾಡಿದ್ದು, ಕೆಲ ದಿನಗಳ ಹಿಂದಷ್ಟೇ ಪಾಕಿಸ್ತಾನ ಕಲಾವಿದರು ಕೂಡಲೇ ಭಾರತವನ್ನು ತೊರೆಯುವಂತೆ (ಎಂಎನ್ ಎಸ್) ಮಹಾರಾಷ್ಟ್ರ ನವನಿರ್ಮಾಣ ಸೇನೆ ಕರೆ ನೀಡಿತ್ತು. ಇದರ ಬೆನ್ನಲ್ಲೇ ಇದೀಗ ಭಾರತೀಯ ಚಲನಚಿತ್ರ ನಿರ್ಮಾಪಕರ ಸಂಘ ಕೂಡ ಪಾಕಿಸ್ತಾನ ಕಲಾವಿದರಿಗೆ ಭಾರತದಲ್ಲಿ ನಿಷೇಧ ಹೇರಿದೆ.

Comments are closed.