ನವದೆಹಲಿ: ಪಾಕಿಸ್ತಾನದ ಕಲಾವಿದರಿಗೆ ಭಾರತದಲ್ಲಿ ನಿರ್ಬಂಧ ವಿಧಿಸುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಬಾಲಿವುಡ್ ನಟ ಸಲ್ಮಾನ್ ಖಾನ್, ‘ಪಾಕಿಸ್ತಾನದ ಕಲಾವಿದರು ಭಯೋತ್ಪಾದಕರಲ್ಲ’ ಎಂದಿದ್ದಾರೆ.
‘ಭಾರತೀಯ ಸೇನೆ ಕಾರ್ಯಾಚರಣೆ ನಡೆಸುತ್ತಿರುವುದು ಭಯೋತ್ಪಾದಕರ ವಿರುದ್ಧ. ಪಾಕಿಸ್ತಾನದ ಕಲಾವಿದರು ಕಲಾವಿದರೇ ಹೊರತು ಭಯೋತ್ಪಾದಕರಲ್ಲ. ಪಾಕಿಸ್ತಾನದ ಕಲಾವಿದರನ್ನು ಭಯೋತ್ಪಾದಕರಂತೆ ಕಾಣುವುದು ಸರಿಯಲ್ಲ’ ಎಂದು ಸಲ್ಮಾನ್ ಹೇಳಿದ್ದಾರೆ.
‘ಪಾಕಿಸ್ತಾನದ ಕಲಾವಿದರು ವೀಸಾ ಪಡೆದೇ ಇಲ್ಲಿಗೆ ಬರುತ್ತಾರೆ. ಅವರಿಗೆ ವೀಸಾ ಯಾರು ನೀಡುತ್ತಾರೆ? ನಮ್ಮ ಸರ್ಕಾರವೇ ವೀಸಾ ಕೊಡುತ್ತದೆಯಲ್ಲವೆ?’ ಎಂದು ಸಲ್ಮಾನ್ ಪ್ರಶ್ನಿಸಿದ್ದಾರೆ.
ಪಾಕಿಸ್ತಾನದ ಕಲಾವಿದರ ಮೇಲೆ ನಿರ್ಬಂಧ ವಿಧಿಸಲು ಇಂಡಿಯನ್ ಮೋಷನ್ ಪಿಕ್ಚರ್ ಪ್ರೊಡ್ಯುಸರ್ಸ್ ಅಸೋಸಿಯೇಷನ್ ಗುರುವಾರ ನಿರ್ಣಯ ಕೈಗೊಂಡಿದೆ.
ಬೆಂಗಳೂರಿನಲ್ಲಿ ಶುಕ್ರವಾರ (ಸೆ.30) ನಿಗದಿಯಾಗಿದ್ದ ಪಾಕಿಸ್ತಾನಿ ಸಂಗೀತಗಾರ ಶಫ್ಕತ್ ಅಮಾನತ್ ಅಲಿ ಅವರ ಕಾರ್ಯಕ್ರಮ ರದ್ದಾಗಿದೆ. ಗುರುಗ್ರಾಮದಲ್ಲಿ ಅಕ್ಟೋಬರ್ 15ರಂದು ನಿಗದಿಯಾಗಿದ್ದ ಪಾಕಿಸ್ತಾನದ ಖ್ಯಾತ ಗಾಯಕ ಅತಿಫ್ ಅಸ್ಲಾಂ ಅವರ ಸಂಗೀತ ಕಾರ್ಯಕ್ರಮವೂ ರದ್ದಾಗಿದೆ.
ಉರಿ ದಾಳಿಯ ನಂತರದ ಬೆಳವಣಿಗೆಗಳಲ್ಲಿ ಪಾಕಿಸ್ತಾನಿ ಕಲಾವಿದರ ಕಾರ್ಯಕ್ರಮಗಳನ್ನು ಮುನ್ನೆಚ್ಚರಿಕೆ ಕಾರಣ ನೀಡಿ ರದ್ದುಗೊಳಿಸಲಾಗಿದೆ.
Comments are closed.