ಮನೋರಂಜನೆ

ಅಪೂರ್ವ ಸ್ನೇಹಕ್ಕೆ ಕಾಣಿಕೆ:ಸಂಭಾವನೆ ಬೇಡ ಅಂದ ಸುದೀಪ್‌, ರವಿಶಂಕರ್‌

Pinterest LinkedIn Tumblr

raviನನ್ನ ಚಿತ್ರದಲ್ಲಿ ರವಿಚಂದ್ರನ್‌ ಪಡೆದ ಸಂಭಾವನೆ ತುಂಬ ಕಮ್ಮಿ! – ಹಾಗಂತ “ಮಾಣಿಕ್ಯ’ ಚಿತ್ರದ ಬಗ್ಗೆ ಸುದೀಪ್‌ ಕೆಲ ದಿನಗಳ ಹಿಂದೆ ಹೇಳಿದ್ದರು. ಸುದೀಪ್‌ ನನ್ನ ಚಿತ್ರಕ್ಕೆ ಸಂಭಾವನೆಯನ್ನೇ ಪಡೆಯಲಿಲ್ಲ! -ಹಾಗಂತ “ಅಪೂರ್ವ’ ಚಿತ್ರದ ಬಗ್ಗೆ ರವಿಚಂದ್ರನ್‌ ಹೇಳಿದ್ದಾರೆ.

ಆ ಮೂಲಕ ಇಬ್ಬರೂ ಒಬ್ಬರಿಗೊಬ್ಬರು ಋಣಸಂದಾಯ ಮಾಡಿದ್ದಾರೆ. ಹೌದು, “ಮಾಣಿಕ್ಯ’ ಚಿತ್ರದಲ್ಲಿ ತಂದೆಯ ಪಾತ್ರಕ್ಕೆ ರವಿಚಂದ್ರನ್‌ ಅವರನ್ನು ಕಿಚ್ಚ ಸುದೀಪ್‌ ಒಪ್ಪಿಸಿದ್ದರು. ಹಾಗೇ ರವಿಚಂದ್ರನ್‌ ಅವರು ತಮ್ಮ ನಿರ್ದೇಶನದ “ಅಪೂರ್ವ’ ಚಿತ್ರದ ಒಂದು ಪ್ರಮುಖ ಪಾತ್ರಕ್ಕಾಗಿ ಕರೆದಾಗ ಸಂಭಾವನೆಯನ್ನೇ ಪಡೆದುಕೊಳ್ಳದೇ ಸುದೀಪ್‌ ಬಂದು ನಟಿಸಿ ಹೋಗಿದ್ದಾರಂತೆ. ಅಲ್ಲಿಗೆ ಅವರಿಬ್ಬರ ಬಾಂಧವ್ಯ ಇಲ್ಲಿ ಸಾಬೀತಾಗಿದೆ.

“ನಾನು ಒಂದು ಪಾತ್ರ ಮಾಡುತ್ತೀಯಾ ಅಂತ ಕೇಳಿದಾಗ ಏನು ಪಾತ್ರ ಅಂತ ಕೂಡ ಕೇಳಲಿಲ್ಲ. ಯಾವಾಗ ಬರಲಿ ಅಂತ ಕೇಳಿದ. ನಾನು ಒಂದು ಡೇಟ್‌ ಹೇಳಿದೆ. ಒಂದು ದಿನದ ಮಟ್ಟಿಗೆ ಮಾತ್ರ ಸುದೀಪ್‌ ಬೇಕಿತ್ತು. ನನ್ನ ಚಿತ್ರದಲ್ಲಿ ಅವರ ಧ್ವನಿ ಇದ್ದರೆ ಅದಕ್ಕೊಂದು ತೂಕ ಇರುತ್ತದೆ ಅಂತ ಕರೆದೆ. ಶೂಟಿಂಗ್‌ ದಿನ ಬರೋದು ಒಂದು ಗಂಟೆ ತಡವಾಯಿತು. ಕೊನೆಗೆ ಮರುದಿನ ಮತ್ತೆ ಬಂದು 1 ಗಂಟೆಯಷ್ಟು ಉಳಿದಷ್ಟು ಶೂಟಿಂಗ್‌ ಮುಗಿಸಿಕೊಟ್ಟು ಹೋದ. ಸಂಭಾವನೆ ತೆಗೆದುಕೊಳ್ಳಲಿಲ್ಲ’ ಅನ್ನುತ್ತಾ ವಿವರಿಸುತ್ತಾರೆ ರವಿಚಂದ್ರನ್‌. ಅಷ್ಟೇ ಅಲ್ಲ, ಈ ಚಿತ್ರದಲ್ಲಿ ಇನ್ನೊಂದು ಸಣ್ಣ ಪಾತ್ರವನ್ನು ಖ್ಯಾತ ಖಳ ನಟ ರವಿಶಂಕರ್‌ ನಿರ್ವಹಿಸಬೇಕಿತ್ತು. ಅವರೂ ಸಂಭಾವನೆ ತೆಗೆದುಕೊಳ್ಳದೇ ಚಿತ್ರದಲ್ಲಿ ನಟಿಸಿ ಹೋಗಿದ್ದಾರಂತೆ.

ಈ ಚಿತ್ರದ ಕತೆ ಎಲ್ಲರಿಗೂ ತುಂಬ ಹಿಡಿಸಿರುವುದಷ್ಟೇ ಅಲ್ಲ, ರವಿಚಂದ್ರನ್‌ ಅವರ ಮೇಲೆ ಚಿತ್ರರಂಗದ ಪ್ರೀತಿ ಈ ಕೆಲಸವನ್ನು ಮಾಡಿಸಿದೆ. ಪ್ರಕಾಶ್‌ ರೈ ಕೂಡ ಈ ಚಿತ್ರಕ್ಕೆ ಧ್ವನಿ ಕೊಟ್ಟಿದ್ದಾರೆ. ಈಗಾಗಲೇ ದರ್ಶನ್‌, ಗಣೇಶ್‌, ಸಾಧು ಕೋಕಿಲ ಮೊದಲಾದವರು ಈ ಚಿತ್ರದ ಕೆಲ ಭಾಗಗಳನ್ನ ನೋಡಿ ಅಚ್ಚರಿಗೊಂಡಿದ್ದಾರಂತೆ. ಇಂಥ ಸಿನಿಮಾವನ್ನು ನೋಡಿಲ್ಲ ಅಂತಲೇ ಅವರೆಲ್ಲಾ ಅಭಿಪ್ರಾಯಪಟ್ಟಿದ್ದಾರೆ. ಚಿತ್ರ ಈ ತಿಂಗಳ ಅಂತ್ಯಕ್ಕೆ ತೆರೆ ಕಾಣಲಿದೆ.
-ಉದಯವಾಣಿ

Comments are closed.