ಚಿತ್ರ: ಅಕಿರ
ನಿರ್ದೇಶನ: ನವೀನ್ ರೆಡ್ಡಿ ನಿರ್ಮಾಣ: ಚೇತನ್ ತಾರಾಗಣ: ಅನೀಶ್ ತೇಜೇಶ್ವರ್, ಕ್ರಿಷಿ ತಪಂಡಾ,
ಖಾಲಿ ಬೀರ್ ಬಾಟಲಿಯನ್ನ ಬಾಯಿಗಿಟ್ಟುಕೊಂಡು ಅವಳ ಹೆಸರು ಹೇಳುತ್ತಾನೆ. ಇನ್ನಾéವತ್ತೂ ನನ್ನೆದುರಿಗೆ, ನನ್ನ ನೆನಪಲ್ಲಿ ಬರಬೇಡ ಎಂದು ಹೇಳಿ ಆ ಬೀರ್ ಬಾಟಲ್ಲಿಯನ್ನು ಸಮುದ್ರಕ್ಕೆಸೆಯುತ್ತಾನೆ.ಇನ್ನು ಅವಳ ಕಾಟ ಇಲ್ಲ ಎನ್ನುವಷ್ಟರಲ್ಲೇ, ತನ್ನ ಸ್ಥಿತಿಯಲ್ಲೇ ಇರುವ ಹುಡುಗಿಯೊಬ್ಬಳನ್ನು ಭೇಟಿ ಮಾಡುತ್ತಾನೆ. ಅವಳಿಗೂ ಅದನ್ನೇ ಹೇಳಿಕೊಡುತ್ತಾನೆ. ಅವಳು ಸಹ ತನ್ನ ಬಾಯ್ಫ್ರೆಂಡ್ನ ಹೆಸರು ಬೀರ್ ಬಾಟಲಿಯಲ್ಲಿ ಹೇಳಿ ದೂರಕ್ಕೆಸೆಯುತ್ತಾಳೆ. ಅಲ್ಲಿಗೆ ಅವನೂ ಸಿಂಗಲ್, ಅವಳೂ ಸಿಂಗಲ್. ಇಬ್ಬರು ಸಿಂಗಲ್ಗಳು ಮಿಂಗಲ್ ಆಗುತ್ತಾರೆ. ಹೀಗೆ ಸ್ನೇಹಿತರಾದವರು ಪ್ರೇಮಿಗಳಾಗಬೇಕು, ಪ್ರೇಮಿಗಳು ತಮ್ಮ ಪ್ರೀತಿಯನ್ನು ಹೇಳಿಕೊಳ್ಳಬೇಕು ಎನ್ನುವಷ್ಟರಲ್ಲಿ …
“ಅಕಿರ’ ಒಂದು ತ್ರಿಕೋನ ಪ್ರೇಮಕಥೆಯ ಚಿತ್ರ. ಅವನು ಇವಳನ್ನು ಇಷ್ಟಪಡುತ್ತಾನೆ ಮತ್ತು ಇನ್ನೊಬ್ಬಳು ಇವನಿಗಾಗಿ ತಹತಹಿಸುತ್ತಾಳೆ ಮತ್ತು ಅವರಿಬ್ಬರಲ್ಲಿ ಅವನು ಯಾರನ್ನು ಆಯ್ಕೆ ಮಾಡಿಕೊಳ್ಳುತ್ತಾನೆ ಎನ್ನುವಷ್ಟು ಸರಳವಾದ ಕಥೆಯೇನಲ್ಲ ಇದು. ಇಲ್ಲಿ ನಿರ್ದೇಶಕರು ಇನ್ನಷ್ಟು ಟ್ವಿಸ್ rಗಳನ್ನು ತರುತ್ತಾರೆ. ಆ ಇಬ್ಬರು ಹುಡುಗಿಯರ ಜೊತೆಗೆ, ಇನ್ನಿಬ್ಬರು ಹುಡುಗಿಯರನ್ನು ಕರೆದುಕೊಂಡು ಬರುತ್ತಾರೆ. ಕೊನೆಯದಾಗಿ ಅವರಲ್ಲಿ ಅಕಿಲ್ ಯಾರನ್ನು ತನ್ನ ಬಾಳಸಂಗಾತಿಯನ್ನಾಗಿ ಮಾಡಿಕೊಳ್ಳುತ್ತಾನೆ ಎನ್ನುವುದು ಚಿತ್ರದ ಕೊನೆಯ ದೃಶ್ಯ. ಎಲ್ಲಕ್ಕಿಂತ ಮೊದಲು ಈ ಅಕಿರ ಎಂದರೇನು ಎಂಬ ಪ್ರಶ್ನೆ ಬರುತ್ತದೆ.
ಇಲ್ಲಿ ನಾಯಕನ ಹೆಸರು ಅಕಿಲ್ ರಾಜ್ ಅಂತ. ಅದನ್ನು ಸಣ್ಣದು ಮಾಡಿ, ಅಕಿರ ಎಂದು ಸಿನಿಮಾಗೆ ಹೆಸರಿಡಲಾಗಿದೆಯಾ ಎಂದರೆ ಅದೂ ಇಲ್ಲ. ಚಿತ್ರದಲ್ಲಿ ಯಾರೊಬ್ಬರೂ ನಾಯಕನನ್ನು ಅಕಿರ ಎಂದು ಕರೆಯುವುದಿಲ್ಲ. ಹಾಗಿದ್ದರೆ ಅಕಿರ ಎಂದರೇನು ಎಂದರೇನು ಎಂದರೆ ಕೊನೆಗೆ ಒಂದು ಸಾಲಿನಲ್ಲಿ ಉತ್ತರ ಬರುತ್ತದೆ. ನೋವು, ನಲಿವು, ಆಸೆ, ಕಷ್ಟ… ಯಾವುದಕ್ಕೂ ಬಗ್ಗದೆ ಯಾವನು ಸ್ಥಿತಪ್ರಜ್ಞನಾಗಿ ಉಳಿಯುತ್ತಾನೋ ಅವನು ಅಕಿರ ಎಂದು ನಿರ್ದೇಶಕರು ಹೇಳಿಸುತ್ತಾರೆ. ಅಕಿಲ್ ರಾಜ್, ಅಕಿರ ಆಗುವುದಕ್ಕೆ ಮುನ್ನ ಎಲ್ಲದಕ್ಕೂ ಸ್ಪಂದಿಸುತ್ತಾನೆ. ಸಂತೋಷವಾದಾಗ ಕುಣಿದಾಡುತ್ತಾನೆ, ಪ್ರೀತಿಗಾಗಿ ಸುಳ್ಳು ಹೇಳುತ್ತಾನೆ, ಸಿಟ್ಟಾದಾಗ ಕಪಾಳಕ್ಕೆ ಬಾರಿಸುತ್ತಾನೆ, ದುಃಖವಾದಾಗ ಕಣ್ಣೀರು ಸುರಿಸುತ್ತಾನೆ, ತನಗೆ ಮೋಸವಾಗಿದೆ ಎಂದನಿಸಿದಾಗ ಮಧ್ಯೆ ರಸ್ತೆಯಲ್ಲಿ ಟ್ರಾμಕ್ ಮತ್ತು ಮಳೆಯನ್ನೂ ಲೆಕ್ಕಿಸದೆ ಕುಳಿತು ಬಿಡುತ್ತಾನೆ … ಇದೇ ಮಾತನ್ನು ಪ್ರೇಕ್ಷಕರ ಬಗ್ಗೆ ಹೇಳುವಂತಿಲ್ಲ. ನಾಯಕನ ಎಲ್ಲಾ ವೇಷಗಳನ್ನು ನೋಡಿ, ಅವರು ಅಕಿರ ಆಗುವುದಕ್ಕಿಂತ ಹೆಚ್ಚಾಗಿ ಅಕಿಲ್ ಆಗಿಯೇ ಉಳಿದು ಬಿಡುತ್ತಾರೆ.
ಅವರನ್ನು ಹಾಗೆ ಮಾಡುವುದು ನಿರ್ದೇಶಕ ನವೀನ್ ಅವರ ಚಿತ್ರಕಥೆ ಮತ್ತು ನಿರೂಪಣೆ. ಚಿತ್ರ ಕೆಲವೊಮ್ಮೆ ಯದ್ವಾತದ್ವಾ ಸಾಗಿದರೆ, ಇನ್ನೂ ಕೆಲವೊಮ್ಮೆ ಬಹಳ ನಿಧಾನವಾಗಿ ಮುಂದುವರೆಯುತ್ತದೆ. ಏನೇನಾಗುತ್ತಿದೆ ಎಂದು ಪ್ರೇಕ್ಷಕನಿಗೆ ಸ್ಪಷ್ಟವಾಗುವುದು ಕೊನೆಯಲ್ಲಿ. ಅಲ್ಲಿಯವರೆಗೂ ಅವನು ಏನಾದರೂ ಮಾಡಬೇಕಲ್ಲ. ಅವನು ಸುಸ್ತಾಗುತ್ತಾನೆ, ಮುಂದೆ ಓಡಿಸ್ರೋ ಎಂದು ಬೊಬ್ಬೆ ಹಾಕುತ್ತಾನೆ, ರಂಗಾಯಣ ರಘು ಅವರಿಂದ ಆ ರೀತಿ ಆಡಿಸುವುದನ್ನು ನೋಡಿ ಮಮ್ಮಲ ಮರಗುತ್ತಾನೆ, ಕಾಮಿಡಿ ಬೇಕು ಎನ್ನುವ ಕಾರಣಕ್ಕೆ ಬುಲೆಟ್ ಪ್ರಕಾಶ್ರನ್ನು ಕರೆತರಲಾಗಿದೆ ಎಂದು ಕೊರಗುತ್ತಾನೆ, ಸೆಖೆಗೆ ಬೆವರಿಳಿಸುತ್ತಾನೆ, ಆಕಳಿಸುತ್ತಾನೆ, ಹೀಗೆ ಒಬ್ಬೊಬ್ಬ ಪ್ರೇಕ್ಷಕ ಒಂದೊಂದು ರೀತಿಯಲ್ಲಿ ಸ್ಪಂದಿಸುತ್ತಾನೆ. “ಅಕಿರ’ ಚಿತ್ರದ ಒಂದು ಪ್ಲಸ್ಪಾಯಿಂಟ್ ಎಂದರೆ, ಈ ಚಿತ್ರದ ಮೂಲಕ ಮೂರು ಪ್ರತಿಭೆಗಳು ಚಿತ್ರರಂಗಕ್ಕೆ ಸಿಕ್ಕಿರುವುದು. ಅನೀಶ್, ಕ್ರಿಷಿ ಮತ್ತು ಛಾಯಾಗ್ರಾಹಕ ಯೋಗಿ ಮೂವರ ಕೆಲಸ ಹೊಸದಾಗಿ ಗಮನ ಸೆಳೆಯುತ್ತದೆ. ಅನೀಶ್ ಅಭಿನಯದಲ್ಲಿ ಇನ್ನು ಸ್ವಲ್ಪ ಮಾಗಬೇಕಿನಿಸಿದರೂ, ಹಾಡು ಮತ್ತು ಫೈಟುಗಳಲ್ಲಿ ಅವರು ಇಷ್ಟವಾಗುತ್ತಾರೆ. ಅದಿತಿ ರಾವ್ ಸ್ವಲ್ಪ ಸಪ್ಪೆಯಾದರೆ, ಕ್ರಿಷಿ ಗಮನಸೆಳೆಯುತ್ತಾರೆ. ಇನ್ನು ಛಾಯಾಗ್ರಾಹಕ ಯೋಗಿ ಚಿತ್ರವನ್ನು ಕಟ್ಟಿಕೊಟ್ಟಿರುವ ರೀತಿಗೆ ಖುಷಿಕೊಡುತ್ತಾರೆ. ಸಂಗೀತ ನಿರ್ದೇಶಕ ಅಜನೀಶ್ ಮತ್ತು ಸಂಕಲನಕಾರ ಶ್ರೀಕಾಂತ್ ಅವರ ಕೆಲಸವನ್ನು ಮರೆಯುವಂತಿಲ್ಲ. ಚಿತ್ರ ಒಂದು ಲೆವೆಲ್ಗೆ ಬರುವುದಕ್ಕೆ ಅಜನೀಶ್ ಸಂಗೀತ ಮತ್ತು ಹಿನ್ನೆಲೆ ಸಂಗೀತ ಹಾಗೂ ಶ್ರೀಕಾಂತ್ ಅವರ ಮೌಸ್ ಪ್ರಯೋಗ ಸಹ ಕಾರಣ. ಇನ್ನು ಲಕ್ಷ್ಮೀದೇವಿ, ಅವಿನಾಶ್ ಅಭಿನಯದ ಬಗ್ಗೆ ಮಾತಾಡುವ ಹಾಗಿಲ್ಲ.
ಚೇತನ್ ನಾಡಿಗೇರ್
-ಉದಯವಾಣಿ