ಚಿತ್ರ: ತಲೆ ಬಾಚ್ಕೊಳ್ಳಿ ಪೌಡರ್ ಹಾಕ್ಕೊಳ್ಳಿ
ನಿರ್ದೇಶನ: ವೇಣುಗೋಪಾಲ್
ನಿರ್ಮಾಣ: ನಾಮ್ದೇವ ಭಟ್ಟರ್
ತಾರಾಗಣ : ವಿಕ್ರಂ ಆರ್ಯ, ಚಿಕ್ಕಣ್ಣ, ರಮೇಶ್ಭಟ್,ಶೋಭರಾಜ್, ನಿಖೀತಾ,ಅಮಾನ್ ಗ್ರೇವಾಲ್, ಬುಲೆಟ್ ಪ್ರಕಾಶ್ ಇತರರು.
“ಈಗ ದೊಡ್ಡ ಹೀರೋನ ಹಾಕ್ಕೊಂಡು ಸಿನ್ಮಾ ಮಾಡಿದ್ರೆ, ಹಾಕಿದ ಕಾಸು ಬರುವ ಗ್ಯಾರಂಟಿ ಇಲ್ಲ. ಇನ್ನು, ನಿನ್ನನ್ನು ಹಾಕ್ಕೊಂಡು ಸಿನಿಮಾ ಮಾಡಿದ್ರೆ ಅಷ್ಟೇ…’ -ನಿರ್ಮಾಪಕನೊಬ್ಬ ಈ ಡೈಲಾಗ್ ಹೇಳುವ ಹೊತ್ತಿಗೆ, ಸಿನಿಮಾ ಹುಚ್ಚು ಇಟ್ಟುಕೊಂಡು ಹಳ್ಳಿ ಬಿಟ್ಟು ಬೆಂಗಳೂರಿಗೆ ಓಡಿ ಬಂದವನೊಬ್ಬ, ತಾನು ಹೀರೋ ಆಗಿ ಮಾವನ ಮಗಳನ್ನೇ ಮದುವೆ ಆಗ್ತಿàನಿ ಅಂತ ಚಾಲೆಂಜ್ ಮಾಡಿರುತ್ತಾನೆ. ಅತ್ತ, ತಂಗಿ ಮದುವೆ ಮಾಡಬೇಕು ಅಂತ ಇನ್ನೊಬ್ಬ, ದಿಢೀರ್ ಹಣ ಸಂಪಾದಿಸಲು, ವಂಚಕರ ಬಣ್ಣದ ಮಾತಿಗೆ ಮನೆ ಪತ್ರ ಅಡವಿಟ್ಟು ಅವರಿಗೆ ಹಣ ಕೊಟ್ಟು ಇಕ್ಕಟ್ಟಿಗೆ ಸಿಕ್ಕಿಕೊಳ್ಳುತ್ತಾನೆ. ಒಬ್ಬನಿಗೆ ಹೀರೋ ಆಗುವ ಆಸೆ ಈಡೇರುತ್ತಿಲ್ಲ. ಇನ್ನೊಬ್ಬನಿಗೆ ತಂಗಿ ಮದುವೆ ಮಾಡಲು ಸಾಧ್ಯವಾಗುತ್ತಿಲ್ಲ.
ಅದೇ ಬೇಸರದಲ್ಲಿ ಆ ಇಬ್ಬರೂ ಆತ್ಮಹತ್ಯೆಗೆ ಮುಂದಾಗಿ ರೈಲ್ವೆ ಹಳಿ ಮೇಲೆ ಮಲಗುತ್ತಾರೆ! ಆಮೇಲೆ ಏನಾಗುತ್ತೆ ಎಂಬುದೇ ಚಿತ್ರದ ಸಸ್ಪೆನ್ಸ್. ಇದು ಯಾವ ಜಾತಿಗೆ ಸೇರಿದ ಸಿನಿಮಾ ಅಂತ ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ಯಾಕೆಂದರೆ,ನಿರ್ದೇಶಕರು, ಎಲ್ಲವನ್ನೂ ಒಟ್ಟಿಗೆ ರುಬ್ಬಿ ಮಸಾಲೆ ಹಾಕಿದ್ದಾರೆ! ಕಥೆಯ ಸಾರಾಂಶ ಚೆನ್ನಾಗಿದೆ. ಪಾತ್ರಗಳನ್ನು ಹೆಣೆದಿರುವ ರೀತಿ ಬಗ್ಗೆ ಮಾತಾಡುವಂತಿಲ್ಲ.
ನಿರ್ದೇಶಕರು ಇಲ್ಲಿ ಒಟ್ಟೊಟ್ಟಿಗೆ ಎರಡು ಸಿನಿಮಾ ತೋರಿಸಿದ್ದಾರೆ. ಇದು ಸಿನಿಮಾದೊಳಗಿನ ಸಿನಿಮಾ ಕಥೆ. ಚಿತ್ರಕಥೆ ತೆಳುವಾಗುತ್ತಿದ್ದಂತೆಯೇ, ಹಾಡುಗಳು ಕಾಣಿಸಿಕೊಂಡು ಸ್ವಲ್ಪ ಮಟ್ಟಿಗೆ ಮಜಾ ಕೊಡುತ್ತವೆ ಎಂಬುದು ಖುಷಿಯ ವಿಷಯ.ಚಿತ್ರದಲ್ಲಿ ಕಾಮಿಡಿ ಸ್ಟಾರ್ ಚಿಕ್ಕಣ್ಣ, ಶೋಭರಾಜ್, ಬುಲೆಟ್ ಪ್ರಕಾಶ್ ಅವರನ್ನು ಇನ್ನೂ ಚೆನ್ನಾಗಿ ತೋರಿಸಲು ಸಾಧ್ಯವಿತ್ತು. ಒಂದು ಸಣ್ಣ “ಗೇಮ್’ ಪ್ಲಾನ್ ಇಡೀ ಚಿತ್ರದ ಹೈಲೈಟ್. ಆ “ಗೇಮ್’ ಪ್ಲಾನ್ ಏನೆಂಬ ಕುತೂಹಲವಿದ್ದರೆ, ಸಿನ್ಮಾ ನೋಡಲ್ಲಡ್ಡಿಯಿಲ್ಲ. ವಿಕ್ರಂ ಆರ್ಯ ಅವರದು ಮೊದಲ ಪ್ರಯತ್ನವಾದ್ದರಿಂದ ತಪ್ಪುಗಳನ್ನು ಪಕ್ಕಕ್ಕಿಟ್ಟು ಬೆನ್ನುತಟ್ಟಬಹುದು. ಶೋಭರಾಜ್ ಎಂದಿನಂತೆ ಪಾತ್ರವನ್ನು ತಿಂದುಹಾಕಿದ್ದಾರೆ. ಬುಲೆಟ್ ಪ್ರಕಾಶ್ ಇರುವಷ್ಟು ಸಮಯ ನಗಿಸೋಕೆ ಪ್ರಯತ್ನಿಸಿದ್ದಾರೆ. ರಮೇಶ್ ಭಟ್ ಗಮನಸೆಳೆದರೆ, ನಾಯಕಿ ನಿಖೀತಾ ಹಾಗು ಅಮಾನ್ ಗ್ರೇವಾಲ್ ಹೇಳಿದ್ದನ್ನಷ್ಟೇ ಮಾಡಿದ್ದಾರೆ. ವಿಜಯ್ ಭಾರತಿ ಸಂಗೀತದಲ್ಲಿ ಎರಡು ಹಾಡುಗಳು ಪರವಾಗಿಲ್ಲ. ಗೌತಮ್ ಶ್ರೀವತ್ಸ ಹಿನ್ನೆಲೆ ಸಂಗೀತಕ್ಕಿನ್ನೂ ಧಮ್ ಬೇಕಿತ್ತು. ಮನು ಯ್ನಾಪ್ಲರ್ ಕ್ಯಾಮೆರಾ ಕೈಚಳಕದಲ್ಲಿ ಹಾಡುಗಳ ಸೌಂದರ್ಯ ಹೆಚ್ಚಿದೆ.
ವಿಭ
-ಉದಯವಾಣಿ