ಸೋನು ಗೌಡ ಖುಷಿಯಾಗಿದ್ದರು! ಅದಕ್ಕೆ ಎರಡು ಕಾರಣ. ಮೊದಲನೆಯದು ಅವರು ಅಭಿನಯಿಸಿರುವ “ಕಿರಗೂರಿನ ಗಯ್ಯಾಳಿ’ಗಳು ಸಿನಿಮಾ 50 ದಿನ ಪೂರೈಸಿರುವುದು, ಎರಡನೆಯದು “ಶರಾವತಿ ತೀರದಲ್ಲಿ’ ಹಾಗೂ “ಗುಲ್ಟಾ’ ಸಿನಿಮಾಗಳು ಕೈಯಲ್ಲಿರುವುದು. “ಕಿರಗೂರಿನ ಗಯ್ನಾಳಿಗಳು’ ಸಿನಿಮಾದಲ್ಲಿ ತನ್ನ ಪಾತ್ರಕ್ಕೆ ಜಾಸ್ತಿ ಡೈಲಾಗೇ ಇಲ್ಲ ಅಂತ ಶೂಟಿಂಗ್ ವೇಳೆ ಸೋನು ನಿರ್ದೇಶಕಿ ಸುಮನಾ ಕಿತ್ತೂರು ಅವರ ಬಳಿ ಗೋಳಾಡುತ್ತಿದ್ದರಂತೆ. ಎಲ್ಲರೂ ಬೈದಾಡುತ್ತಿದ್ದರೆ ತಾನೊಬ್ಬಳೇ ಮೌನಿ ಅಂತ ಬೇಜಾರಾಗುತ್ತಿತ್ತಂತೆ. ಆದ್ರೆ ಸಿನಿಮಾ ರಿಲೀಸ್ ಆದಮೇಲೆ ಆ ಪಾತ್ರದ ಮಹತ್ವ ಗೊತ್ತಾಗಿದೆ.
ಸಿನಿಮಾ ನೋಡಿದವರು ತನ್ನನ್ನು ಪಾತ್ರದ ಹೆಸರು ಹಿಡಿದು ಕರೆದಾಗ ಸೋನುಗೆ ಸಿಕ್ಕಾಪಟ್ಟೆ ಖುಷಿ. ಸೋನು ನಟನೆಯ ಎರಡು ಚಿತ್ರಗಳಲ್ಲೊಂದಾದ “ಶರಾವತಿ ತೀರದಲ್ಲಿ’ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ. ನಾಯಕ ನಾಯಕಿ ಒಂದು ದ್ವೀಪದಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ಅಲ್ಲಿ ಎದುರಾಗುವ ಘಟನೆಗಳೇ ಸಿನಿಮಾದ ಹೈಲೈಟ್. ಇದೊಂದು ಜರ್ನಿ ಸ್ಟೋರಿಯೂ ಹೌದು ಅಂತಾರೆ ಸೋನು. ಗಯ್ನಾಳಿಗಳಲ್ಲಿ ಮೌನಿಯಾಗಿದ್ದ ಸೋನುಗೆ ಇಲ್ಲಿ ಸಿಕ್ಕಾಪಟ್ಟೆ ಡೈಲಾಗ್ ಇದೆಯಂತೆ.
ಪುನೀತ್ ಶರ್ಮನ್ ನಿರ್ದೇಶನದ ಈ ಚಿತ್ರದ ನಾಯಕ ವಿಕ್ರಂ ಭರತ್. ಎಲ್ಲ ಅಂದುಕೊಂಡಂತೆ ನಡೆದರೆ ಈ ಚಿತ್ರ ಸೆಪ್ಟೆಂಬರ್ ಹೊತ್ತಿಗೆ ತೆರೆಕಾಣಬಹುದು. ಇನ್ನೊಂದು “ಗುಲ್ಟಾ’ ಚಿತ್ರ. ಇದು ಕ್ರೈಂ ಥ್ರಿಲ್ಲರ್. ಚೆನ್ನೈನ μಲ್ಮಂ ಇನ್ಸ್ಟಿಟ್ಯೂಟ್ನ ವಿದ್ಯಾರ್ಥಿಗಳು ಮಾಡುತ್ತಿರೋ ಈ ಸಿನಿಮಾವನ್ನು ಮೊದಲು ಕಿರುಚಿತ್ರವಾಗಿ ಯೂಟ್ಯೂಬ್ನಲ್ಲಿ ಹಾಕಲಾಗಿತ್ತು. ನಟ ರಕ್ಷಿತ್ ಶೆಟ್ಟಿ ಅವರು ಈ ಸಿನಿಮಾ ಬಗ್ಗೆ ತಮ್ಮ ಫೇಸ್ಬುಕ್ ವಾಲ್ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. 25,000ಕ್ಕೂ ಹೆಚ್ಚು ಹಿಟ್ಗಳು ಬಂದಿದ್ದವು. ಈಗ ನಿರ್ಮಾಪಕರು ಸಿಕ್ಕಿ ಬಿಡುಗಡೆ ಹಂತದಲ್ಲಿದೆ. ಸೋನುಗೆ ಇದರಲ್ಲಿ ವಿಲನ್ ಶೇಡ್ ಇರುವ ನಾಯಕಿ ಪಾತ್ರ.
ಅಭಿನಯ ಪ್ರಧಾನ ಚಿತ್ರಗಳು ಹೆಚ್ಚೆಚ್ಚು ಸಿಗುತ್ತಿರುವ ಬಗ್ಗೆ ಸೋನುವಿಗೆ ಹರ್ಷವಿದೆ. “ಈ ಎರಡೂ ಚಿತ್ರಗಳಲ್ಲೂ ವಿಭಿನ್ನ ಪಾತ್ರ. ನಾನು ಯಾವತ್ತೂ ಸಂಭಾವನೆ ವಿಚಾರದಲ್ಲಿ ಹೆಚ್ಚು ತಲೆಕೆಡಿಸಿಕೊಂಡವಳಲ್ಲ. ಕೆಲವು ಚಿತ್ರಗಳ ಸಂಭಾವನೆ ಈವರೆಗೆ ಬಂದಿಲ್ಲ. ಕೆಲವೊಮ್ಮೆ ಬೇಜಾರಾಗುತ್ತೆ, ಅಷ್ಟು ಕಷ್ಟಪಟ್ಟು ಮಾಡಿದರೂ ದುಡ್ಡೇ ಕೊಟ್ಟಿಲ್ವಲ್ಲ ಅಂತ ಸಂಕಟವಾಗತ್ತೆ. ಸ್ವಲ್ಪ ಹೊತ್ತು ಬಿಟ್ಟು ಪಾಪ, ಅವರಿಗೇನು ಸಮಸ್ಯೆ ಇದೆಯೋ ಏನೋ. ನನಗೆ ಬರೋ ಹಣವಾಗಿದ್ದರೆ ಯಾವುದಾದರೊಂದು ರೂಪದಲ್ಲಿ ಬಂದೇ ಬರುತ್ತೆ. ಆ ಹಣ ಬರಲ್ಲ ಅಂತ ನನ್ನ ಹಣೆಯಲ್ಲಿ ಬರೆದಿದ್ದರೆ ಏನೂ ಮಾಡಲಿಕ್ಕಾಗಲ್ಲ ಅಂತ ಸುಮ್ಮನಾಗ್ತಿàನಿ. ಸಂಭಾವನೆಯನ್ನು ನೋಡಿ ಸಿನಿಮಾ ಒಪ್ಪಿಕೊಳಲ್ಲ. ಮನಸ್ಸಿಗೊಪ್ಪುವ ಕತೆ ಸಿಕ್ಕರೆ ಖುಷಿಯಿಂದ ನಟಿಸುತ್ತೇನೆ’ ಅಂತಾರೆ ಈ ಚೂಪು ಮೂಗಿನ ಹುಡುಗಿ. ಈಕೆ ತಮಿಳಿನ ಒಂದು ಚಿತ್ರವನ್ನ ಒಪ್ಪಿಕೊಂಡಿದ್ದಾರೆ. “ನಾಯಿಕುಟ್ಟಿ’ ಅನ್ನೋದು ಸಿನಿಮಾ ಹೆಸರು.
-ಉದಯವಾಣಿ