ಅಂದು ಜ್ಞಾನಜ್ಯೋತಿ ಸಭಾಂಗಣ ಕಿಕ್ಕಿರಿದಿತ್ತು. ಸಿನಿಮಾ ಮಂದಿಯೇ ಅಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದರಿಂದ ಆ ವೇದಿಕೆ ಕಾರ್ಯಕ್ರಮ ಕಲರ್ಫುಲ್ ಆಗಿತ್ತು. ಅದು ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ “ಇಷ್ಟಕಾಮ್ಯ’ ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ.
ಅಂದಿನ ಹೈಲೈಟ್ ಮುಖ್ಯಮಂತ್ರಿ ಸಿದ್ಧರಾಮಯ್ಯ. ಅವರೊಂದು ಚಿತ್ರದ ಹಾಡು ರಿಲೀಸ್ ಮಾಡುವ ಮೂಲಕ ಚಿತ್ರಕ್ಕೆ ಶುಭಹಾರೈಸಿದರು. “ಸಮಾಜಕ್ಕೆ ಒಳ್ಳೆಯ ಸಂದೇಶ ತರುವ ಮತ್ತು ಮೌಲ್ಯ ಇರುವಂತಹ ಸಿನಿಮಾಗಳು ಬಂದರೆ ಮಾತ್ರ
ಚಿತ್ರರಂಗ ಇನ್ನಷ್ಟು ಬೆಳವಣಿಗೆಯಾಗಲು ಸಾಧ್ಯ. ಎಲ್ಲರಿಗೂ ಚಿತ್ರ ಯಶಸ್ಸು ಕೊಡಲಿ ಅಂದರು ಅವರು. ನಟ ರವಿಚಂದ್ರನ್ ಕೂಡ
ಚಿತ್ರದ ಇನ್ನೊಂದು ಹಾಡನ್ನು ಬಿಡುಗಡೆ ಮಾಡಿದರು. “ಮೇಷ್ಟ್ರು ಇಷ್ಟಪಟ್ಟು, ಮಾಡಿರುವ ಇಷ್ಟಕಾಮ್ಯ ಚಿತ್ರ ಗೆಲ್ಲಬೇಕು. ಈ
ಟೈಟಲ್ ಬಗ್ಗೆ ಹಲವರು ಹಲವು ರೀತಿ ಅರ್ಥ ಮಾಡಿಕೊಳ್ತಾರೆ.ನನಗೂ ಸಹ ಟೈಟಲ್ನ ಅರ್ಥ ಗೊತ್ತಿರಲಿಲ್ಲ. ನಿರ್ದೇಶಕರಿಂದ ಕೇಳಿ
ತಿಳಿದುಕೊಂಡೆ. “ಅಮೆರಿಕಾ ಅಮೆರಿಕಾ’ ಚಿತ್ರ ಯಶಸ್ಸು ಪಡೆದಂತೆಯೇ ಈ ಚಿತ್ರವೂ ಸಕ್ಸಸ್ ಆಗಲಿ’ ಅಂತ ಶುಭಕೋರಿದ ರವಿಚಂದ್ರನ್, ನಟಿಯರಾದ ಮಯೂರಿ ಹಾಗು ಕಾವ್ಯಾ ಶೆಟ್ಟಿ ಅವರಿಗೆ ಈ ಚಿತ್ರದ ನಂತರ ಇನ್ನಷ್ಟು ಒಳ್ಳೆಯ ಚಿತ್ರಗಳಲ್ಲಿ ನಟಿಸುವ ಅವಕಾಶ ಸಿಗಲಿ ಅಂದರು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು, ಸಾಹಿತಿ ಚಂದ್ರಶೇಖರ ಕಂಬಾರ, ಸಚಿವೆ
ಉಮಾಶ್ರೀ, ನಾಯಕ ವಿಜಯ್ ಸೂರ್ಯ, ನಾಯಕಿಯರಾದ ಮಯೂರಿ, ಕಾವ್ಯಾಶೆಟ್ಟಿ, ಸುಮನ್ ನಗರ್ಕರ್ ಹಾಗು ಸಂಗೀತ
ನಿರ್ದೇಶಕ ಅಜನೀಶ್ ಸೇರಿದಂತೆ ಇತರರು ಇದ್ದರು.
-ಉದಯವಾಣಿ