ಯೋಗರಾಜ್ ಭಟ್ ಸಮಯ ಸಂದರ್ಭವನ್ನು ಚೆನ್ನಾಗಿ ಬಳಸಿಕೊಳ್ಳುತ್ತಾರೆ. ಸಿಕ್ಕ ಅವಕಾಶವನ್ನು ಅವರು ಯಾವತ್ತೂ ಮಿಸ್ ಮಾಡಿಕೊಳ್ಳುವುದಿಲ್ಲ! ಹೀಗೆಂದರೆ ನೀವು ಅದನ್ನು ಬೇರೆ ರೀತಿ ಅರ್ಥೈಸಿಕೊಳ್ಳಬೇಡಿ. ನಾವು ಹೇಳುತ್ತಿರುವುದು ಅವರ ಹಾಡಿನ ಬಗ್ಗೆ. ಸಿನಿಮಾಗಳಿಗೆ ಭಟ್ಟರು ಬರೆದ ಸಾಕಷ್ಟು ಹಾಡುಗಳು ಹಿಟ್ ಆಗಿವೆ. ಹೊಸದೊಂದು ಟ್ರೆಂಡ್ ಅನ್ನು ಹುಟ್ಟುಹಾಕುವ ಮೂಲಕ ಮಾಸ್ ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡುವಲ್ಲಿ ಭಟ್ಟರ ಹಾಡಿನ ಪಾತ್ರಗಳನ್ನು ಅಲ್ಲಗಳೆಯುವಂತಿಲ್ಲ.
ಈಗ ಈ ವಿಷಯ ಯಾಕೆಂದು ನೀವು ಕೇಳಬಹುದು. ಭಟ್ಟರು ಈಗ ಮತ್ತೂಂದು ಹಾಡು ಬರೆದಿದ್ದಾರೆ. ಅದು ಕೂಡಾ ಈಗ ಸದ್ದು ಮಾಡುತ್ತಿದೆ. ಭಟ್ಟರು ಹಾಡು ಬರೆಯೋದೇನು ಹೊಸದಲ್ಲ, ಆದರೆ, ಈ ಬಾರಿ ಬರೆದಿರೋದು ರಾಜ್ಯದಲ್ಲಿ ಇತ್ತೀಚೆಗೆ ನಡೆದಂತೆ ಪ್ರಕರಣವೊಂದನ್ನಿಟ್ಟುಕೊಂಡು. ಅದು ಪ್ರಶ್ನೆ ಪತ್ರಿಕೆ ಲೀಕ್ ಆದ ಪ್ರಕರಣ.ಹೌದು, ಇತ್ತೀಚೆಗೆ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ, ದೊಡ್ಡ ಕೋಲಾಹಲವೇ ಉಂಟಾಗಿತ್ತು. ಆ ವಿಷಯವನ್ನಿಟ್ಟುಕೊಂಡು ಭಟ್ಟರು ಹಾಡು ಬರೆದಿದ್ದಾರೆ. ಈ ಹಾಡಿಗೆ ಯೋಗರಾಜ್ ಭಟ್, “ದುನಿಯಾ’ ವಿಜಯ್ ಚೇತನ್ ಸಾಸ್ಕ ಧ್ವನಿಯಾಗಿದ್ದಾರೆ.
“ಒಮ್ಮೆ ಲೀಕಾದದ್ದು ಮತ್ತೆ ಲೀಕಾಗುವುದೇ ಲೋಕ ನಿಯಮವಾಗಿರಲು ಮೂಕ ವಿದ್ಯಾರ್ಥಿ ಮೂರ್ನಾಲ್ಕು ಸರ್ತಿ ರಸಾಯನ ಶಾಸ್ತ್ರ ಪರೀಕ್ಷೆ ಬರೆಯಬೇಕಾ ರತ್ನಾಕರ … ಜೈ ರಸಾಯನ ಶಾಸ್ತ್ರ … ‘ ಎಂದು ಆರಂಭವಾಗುವ ಈ ಹಾಡಿನಲ್ಲಿ ಮೊದಲು ಯೋಗರಾಜ್ ಭಟ್ಟರ ನಂತರ “ದುನಿಯಾ’ ವಿಜಿ ಹಾಗೂ ಚೇತನ್ ಸಾಸ್ಕ ಧ್ವನಿ ಬರುತ್ತದೆ. ಭಟ್ಟರು ಈ ಹಾಡಿನಲ್ಲಿ ಪ್ರಶ್ನೆ ಪತ್ರಿಕೆ ಲೀಕ್ ಆಗಿರುವ ಬೇಜಾವಾಬ್ದಾರಿತನವನ್ನು ತಮ್ಮದೇ ಶೈಲಿಯಲ್ಲಿ ಆಡಿಕೊಂಡಿದ್ದಾರೆ. ಭಟ್ಟರು ಈ ಹಿಂದೆ ಚುನಾವಣೆಸಮಯದಲ್ಲೂ ಆ ಸಂದರ್ಭದಕ್ಕೆ ಪೂರಕವಾಗಿ ಹಾಡು ಬರೆದಿದ್ದರು.
ಈಗ ಪ್ರಶ್ನೆ ಪತ್ರಿಕೆ ಲೀಕ್ ಕುರಿತು. ಅಂದಹಾಗೆ, “ದುನಿಯಾ’ ವಿಜಯ್ ಕೂಡಾ ಇಲ್ಲಿ ಧ್ವನಿಗೂಡಿಸಲು ಕಾರಣ “ದನ ಕಾಯೋನು’ ಚಿತ್ರ. ಯೋಗರಾಜ್ ಭಟ್ ಹಾಗೂ ವಿಜಯ್ ಕಾಂಬಿನೇಶನ್ನಲ್ಲಿ ಬರುತ್ತಿರುವ ಚಿತ್ರವಿದು. ಹಾಗಾಗಿಯೇ ಈ ಹಾಡಿನಲ್ಲೂ “ದನಕಾಯೋರಿಂದ ಬಹಿರಂಗ ಪತ್ರ …’ ಎಂಬ ಸಾಲು ಕೂಡಾ ಬರುತ್ತದೆ.
-ಉದಯವಾಣಿ