ಮನೋರಂಜನೆ

ಬಂದ್ರು ಸಾರ್‌… ಹೋ ಹೋ… ಶಕುಂತಲಾ ಹೋ ಹೋ

Pinterest LinkedIn Tumblr

juhiಬಂದ್ರು ಸಾರ್‌ … ಹೋ ಹೋ … ಶಕುಂತಲಾ ಹೋ ಹೋ …’ ಎಂದು 29 ವರ್ಷಗಳ ಹಿಂದೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು ಜೂಹಿ ಚಾವ್ಲಾ. ಈಗ ಮತ್ತೂಮ್ಮೆ ಅದೇ ಹಾಡು ಹಾಡುವ ಸಂದರ್ಭ ಬಂದೊದಗಿದೆ. ಏಕೆಂದರೆ, ಜೂಹಿ ಚಾವ್ಲಾ ಮತ್ತೆ ಕನ್ನಡ ಚಿತ್ರರಂಗಕ್ಕೆ ಬರುತ್ತಿದ್ದಾರೆ. ಈ ಬಾರಿ ರಮೇಶ್‌ ಅರವಿಂದ್‌ ಅಭಿನಯದ ಪುಷ್ಪಕ ವಿಮಾನ ಚಿತ್ರದಲ್ಲಿ ಅವರೊಂದು ಚೋಟಾ ಪಾತ್ರ ನಿರ್ವಹಿಸುತ್ತಿದ್ದಾರೆ.
ಜೂಹಿ ಚಾವ್ಲಾ ಕನ್ನಡಕ್ಕೆ ಬಂದಿದ್ದು ರವಿಚಂದ್ರನ್‌ ನಿರ್ದೇಶನದ ಪ್ರೇಮಲೋಕ ಚಿತ್ರದ ಮೂಲಕ.
ಆಗಷ್ಟೇ ಅವರು ಹಿಂದಿಯಲ್ಲಿ ಸಲ್ತನತ್‌ ಎಂಬ ಚಿತ್ರದಲ್ಲಿ ನಟಿಸಿದ್ದರು. ಅಮೀರ್‌ ಖಾನ್‌ ನಾಯಕನಾಗಿ ಅಭಿನಯಿಸಿದ ಮೊದಲ ಚಿತ್ರ ಖಯಾಮತ್‌ ಸೇ ಖಯಾಮತ್‌ ತಕ್‌ ಎಂಬ ಚಿತ್ರದಲ್ಲಿ ನಾಯಕಿಯಾಗಿ ನಟಿಸಿ ಸಿಕ್ಕಾಪಟ್ಟೆ ಜನಪ್ರಿಯರಾಗುವುದಕ್ಕೆ ಮುನ್ನ, ಕನ್ನಡದಲ್ಲಿ ಪ್ರೇಮಲೋಕ ಚಿತ್ರದಲ್ಲಿ ನಟಿಸಿದ್ದರು. ಆ ಚಿತ್ರ, ಜೂಹಿ ಗ್ಲಾಮರ್‌ ಎಲ್ಲಾ ಸಿಕ್ಕಾಪಟ್ಟೆ ಜನಪ್ರಿಯವಾಯಿತು. ಅಷ್ಟರಲ್ಲಿ ಖಯಾಮತ್‌ ಸೇ ಖಯಾಮತ್‌ ತಕ್‌ ಚಿತ್ರ ಸಹ ಸೂಪರ್‌ ಹಿಟ್‌ ಆಗಿ, ಜೂಹಿ ಚಾವ್ಲಾ ಬೇಡಿಕೆಯ ನಟಿಯಾದರು. ಆ ನಂತರ ಅವರು ಕನ್ನಡದಲ್ಲಿ ನಟಿಸಿದ್ದು ಮೂರೇ ಚಿತ್ರಗಳಲ್ಲಿ. ರಣಧೀರ ಚಿತ್ರಕ್ಕಾಗಿ ಅತಿಥಿಯಾಗಿ ಬಂದರೆ, ಕಿಂದರಿಜೋಗಿ ಮತ್ತು ಶಾಂತಿ ಕ್ರಾಂತಿ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿ ಹೋದರು. ವಿಶೇಷವೆಂದೆರೆ, ಈ ನಾಲ್ಕು ಚಿತ್ರಗಳಲ್ಲಿ ರವಿಚಂದ್ರನ್‌ ನಾಯಕರಾದರೆ, ನಾಲ್ಕು ಚಿತ್ರಗಳ ನಿರ್ದೇಶನವನ್ನೂ ಅವರೇ ಮಾಡಿದರು.

ಶಾಂತಿ ಕ್ರಾಂತಿ ಚಿತ್ರದಲ್ಲಿ ನಟಿಸಿ ಹೋದ ನಂತರ ಜೂಹಿ ಚಾವ್ಲಾ ಇತ್ತ ಕಡೆ ಬರಲೇ ಇಲ್ಲ. ಕಾರಣ ಅವರು ಬಾಲಿವುಡ್‌ನ‌ಲ್ಲಿ ಸಖತ್‌ ಬಿಝಿಯಾಗಿದ್ದರು. ದೊಡ್ಡ ದೊಡ್ಡ ಸ್ಟಾರ್‌ಗಳ ಜೊತೆಗೆ ಅನೇಕ ಚಿತ್ರಗಳನ್ನೂ ಮಾಡಿದರು. ಅವರನ್ನು ಇಲ್ಲಿ ಕರೆದುಕೊಂಡು ಬರುವುದನ್ನು ಊಹಿಸುವುದೂ ಅಸಾಧ್ಯವಾಗಿತ್ತು. ಹಾಗಾಗಿ ಹಲವರು ಆ ಪ್ರಯತ್ನವನ್ನು ಮಾಡಲೇ ಇಲ್ಲ. ಜೂಹಿ ಚಾವ್ಲಾ ಕನ್ನಡಕ್ಕೆ ಬರುತ್ತಾರೆ ಎಂಬಂತಹ ಸುದ್ದಿ ಬಂದಿದ್ದು ಮೂರು ವರ್ಷಗಳ ಹಿಂದೆ. ಸುದೀಪ್‌ ಅಭಿನಯದ ಮತ್ತು ನಿರ್ದೇಶನದ ಮಾಣಿಕ್ಯ ಚಿತ್ರದಲ್ಲಿ ಅವರ ತಂದೆಯಾಗಿ ರವಿಚಂದ್ರನ್‌ ನಟಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಆಗ ಅವರ ಜೋಡಿಯಾಗಿ ಜೂಹಿ ಚಾವ್ಲಾ ಅವರನ್ನು ಕರೆದುಕೊಂಡು ಬಂದರೆ ಹೇಗೆ ಎಂಬ ಪ್ರಶ್ನೆ ಚಿತ್ರತಂಡದವರಿಗೆ ಎದುರಾಯಿತು. ಜೂಹಿ ಅವರನ್ನು ಸಂಪರ್ಕಿಸಿ, ಅವರು ಚಿತ್ರದಲ್ಲಿ ನಟಿಸುವುದಿಲ್ಲ ಎಂದರೋ ಅಥವಾ ಚಿತ್ರತಂಡದವರು ಅವನ್ನು ಸಂಪರ್ಕಿಸುವ ಗೋಜಿಗೇ ಹೋಗಲಿಲ್ಲವೋ ಗೊತ್ತಿಲ್ಲ. ಒಟ್ಟಿನಲ್ಲಿ ಜೂಹಿ ಚಾವ್ಲಾ ಬದಲು ಚಿತ್ರದಲ್ಲಿ ಕಾಣಿಸಿಕೊಂಡಿದ್ದು ರಮ್ಯಾ ಕೃಷ್ಣ.

ಆ ನಂತರ ರವಿಚಂದ್ರನ್‌ ಅವರ ತಮ್ಮ ಮಗ ಮನೋರಂಜನ್‌ಗಾಗಿ ಶುರು ಮಾಡಿದ ರಣಧೀರ ಪ್ರೇಮಲೋಕದಲ್ಲಿ ಚಿತ್ರದಲ್ಲಿ ಜೂಹಿ ನಟಿಸಬಹುದು ಎಂದು ಸುದ್ದಿಯಾಯಿತು. ಅದಕ್ಕೆ ಕಾರಣವೂ ಇತ್ತು. ಜೂಹಿ ರಣಧೀರ ಮತ್ತು ಪ್ರೇಮಲೋಕ ಚಿತ್ರಗಳಲ್ಲಿ ನಟಿಸಿದವರು. ಮನೋರಂಜನ್‌ ಅವರನ್ನು ಚಿಕ್ಕಂದಿನಿಂದ ನೋಡಿಕೊಂಡು ಬಂದವರು. ಅದೇ ಸಲುಗೆಯ ಮೇಲೆ ನಟಿಸಬಹುದು ಎಂದು ಸುದ್ದಿಯಾಯಿತು. ಅದಕ್ಕೆ ಸರಿಯಾಗಿ ಚಿತ್ರ ಶುರುವಾದ ಎರಡು ವಾರಕ್ಕೆ ಜೂಹಿ ಚಾವ್ಲಾ ಅವರು ಬೆಂಗಳೂರಿಗೆ ಬಂದು, ರವಿಚಂದ್ರನ್‌ ಮನೆಗೆ ಭೇಟಿ ಕೊಟ್ಟು, ಮನೋರಂಜನ್‌ಗೆ ಹಾರೈಸಿ, ಆಶೀರ್ವದಿಸಿ ಹೋದರು. ಹಾಗಾಗಿ ಜೂಹಿ ಬರುತ್ತಾರಾ? ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಚಿತ್ರ ಮುಂದುವರೆದಿದ್ದರೆ ಮತ್ತು ರವಿಚಂದ್ರನ್‌ ಕರೆದಿದ್ದರೆ ಬರುತ್ತಿದ್ದರೇನೋ? ಆದರೆ, ರವಿಚಂದ್ರನ್‌,
ಅಪೂರ್ವ ಚಿತ್ರದಲ್ಲಿ ತೊಡಗಿಸಿಕೊಂಡಿದ್ದರಿಂದ ಆ ಚಿತ್ರ ಮುಂದುವರೆಯಲಿಲ್ಲ.

ಈಗ ಜೂಹಿ ಚಾವ್ಲಾ ಅವರನ್ನು ಕೊನೆಗೂ ಒಪ್ಪಿಸಿ ಪುಷ್ಪಕ ವಿಮಾನದಲ್ಲಿ ಹಾರಲು ಚಿತ್ರತಂಡ ಕರೆ ತರುತ್ತಿದೆ. ಸೋಮವಾರ (ಏಪ್ರಿಲ್‌ 4)ದಿಂದ ನಾಲ್ಕು ದಿನಗಳ ಕಾಲ ಜೂಹಿ ಚಾವ್ಲಾ ಕೂಡಾ ಕಾಲ್‌ಶೀಟ್‌ ಕೊಟ್ಟಿದ್ದಾರಂತೆ. ಕೆಲವು ದೃಶ್ಯಗಳು ಮತ್ತು ಒಂದು ಹಾಡಿನಲ್ಲಿ ಜೂಹಿ ಚಾವ್ಲಾ ಕಾಣಿಸಿಕೊಳ್ಳುತ್ತಾರಂತೆ. ಅವರ ಪಾತ್ರ ಏನು? ಚಿತ್ರದಲ್ಲಿ ಅವರು ಏನು ಮಾಡುತ್ತಾರೆ ಎಂಬಂತಹ ವಿಷಯಗಳನ್ನು ಚಿತ್ರತಂಡದವರು ಹೇಳುವುದಕ್ಕೆ ಹೋಗಿಲ್ಲ. ಎಲ್ಲವನ್ನೂ ಚಿತ್ರದಲ್ಲಿ ನೋಡಿ ಎನ್ನುತ್ತಿದ್ದಾರೆ. ಸದ್ಯಕ್ಕೆ ಉಳಿದಿರುವುದು ಇಷ್ಟೇ. ಬಂದ್ರು ಸಾರ್‌ … ಹೋ ಹೋ … ಜೂಹಿ ಚಾವ್ಲಾ ಹೋ ಹೋ … ಎಂದು ಹಾಡುವುದು.
-ಉದಯವಾಣಿ

Write A Comment