ನಿರ್ದೇಶಕ ರವಿಶ್ರೀವತ್ಸ ಮತ್ತೆ ಸುದ್ದಿಯಾಗಿದ್ದಾರೆ. ಇದುವರೆಗೆ “ಡೆಡ್ಲಿ ಸೋಮ’ ಹಾಗು “ಮಾದೇಶ’ದಂತಹ ಭೂಗತ ಲೋಕದ ಚಿತ್ರಗಳನ್ನೇ ನೀಡುವ ಮೂಲಕ ಸುದ್ದಿಯಾಗಿದ್ದ ರವಿ ಶ್ರೀವತ್ಸ, ಈಗ ಮತ್ತೆ ಅಂಥದ್ದೇ ಮತ್ತೂಂದು ಭೂಗತ ಲೋಕದ ಕಥೆ ಹೆಣೆದು ನಿರ್ದೇಶನಕ್ಕೆ ಸಜ್ಜಾಗಿದ್ದಾರೆ. ಆ ಚಿತ್ರಕ್ಕೆ “ಭೂಗತ ಪುಟಗಳಲ್ಲಿ’ ಎಂದು ನಾಮಕರಣ ಮಾಡಲಾಗಿದೆ. ಶೀರ್ಷಿಕೆಯೇ ಹೇಳುವಂತೆ, ಇದು ಪಕ್ಕಾ ಅಂಡರ್ ವರ್ಲ್ಡ್ ಸಬೆjಕ್ಟ್ ಅನ್ನುವುದನ್ನು ಅಲ್ಲಗಳೆಯುವಂತಿಲ್ಲ. ಈ ಚಿತ್ರವನ್ನು ಸುಷ್ಮಾ ವೀರ್
ಮತ್ತು ಶಿವಪ್ರದೀಪ್ ನಿರ್ಮಾಣ ಮಾಡುತ್ತಿದ್ದಾರೆ.
ಇತ್ತೀಚೆಗೆ ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಚಿತ್ರದ ಸ್ಕ್ರಿಪ್ಟ್ ಪೂಜೆ ನಡೆದಿದೆ. ಸದ್ಯಕ್ಕೆ ನಾಯಕ, ನಾಯಕಿ ಸೇರಿದಂತೆ ಉಳಿದ ಕಲಾವಿದರ ಆಯ್ಕೆ ನಡೆದಿಲ್ಲ. ಮಾರ್ಚ್ 28 ರಿಂದ 30 ರವರೆಗೆ ಚಿತ್ರಕ್ಕೆ ಆಡಿಷನ್ ನಡೆಸಲಾಗುತ್ತಿದೆ. ಮೂಲದ ಪ್ರಕಾರ ಚಿತ್ರಕ್ಕೆ ಬಹುತೇಕ ರಂಗಭೂಮಿ ಹಿನ್ನೆಲೆ ಇರುವ ಕಲಾವಿದರನ್ನೇ ಆಯ್ಕೆ ಮಾಡಿಕೊಳ್ಳಲು ಚಿತ್ರತಂಡ ತೀರ್ಮಾನಿಸಿದೆಯಂತೆ.
ಇನ್ನು, ತಂತ್ರಜ್ಞರ ಆಯ್ಕೆ ಈಗಾಗಲೇ ನಡೆದಿದ್ದು, ಚಿತ್ರಕ್ಕೆ ಚಿನ್ನ ಮತ್ತು ಮನೋಹರನ್ ಎಂಬ ಇಬ್ಬರು ಸಂಗೀತ ನಿರ್ದೇಶಕರು ಇಲ್ಲಿ ಕೆಲಸ ಮಾಡಲಿದ್ದಾರೆ.
ಜೆ.ಜೆ.ಕೃಷ್ಣ ಅವರಿಲ್ಲಿ ಕ್ಯಾಮೆರಾ ಹಿಡಿಯುತ್ತಿದ್ದಾರೆ. ರವಿಚಂದ್ರ ಅವರು ಕತ್ತರಿ ಹಿಡಿಯಲಿದ್ದಾರೆ. ಕೆ.ವಿ. ರಾಜು ಮತ್ತು ರವಿಶ್ರೀವತ್ಸ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ರವಿ ಶ್ರೀವತ್ಸ ಅವರು ಕಥೆ ಬರೆದು, ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ.
ಚಿತ್ರದಲ್ಲಿ ತಾರಾ, ಸುಷ್ಮಾ ವೀರ್, ಯಮುನಾ ಶ್ರೀನಿಧಿ, ವಿಕ್ಟರಿ ವಾಸು, ಉಮೇಶ್ ಬಣಕಾರ್, ಮಾಸ್ಟರ್ ಆನಂದ್, ತ್ರಿವೇಣಿ, ವೈಜಯಂತಿ ಕಾಶಿ, ಪ್ರದೀಪ್, ಬಿ.ಜಯಶ್ರೀ ಮತ್ತು ಸುಂದರಶ್ರೀ ಸೇರಿದಂತೆ ಅನೇಕರು ಕಾಣಿಸಿಕೊಳ್ಳುತ್ತಿದ್ದಾರೆ.
“ಭೂಗತ ಪುಟಗಳಲ್ಲಿ’ ಚಿತ್ರ ಜೂನ್ನಲ್ಲಿ ಶುರುವಾಗಲಿದೆ. ಕಾರಣ, ಕೆಸಿಎನ್ ಕುಮಾರ್ ನಿರ್ಮಾಣದಲ್ಲಿ ನಿರ್ದೇಶಕ ರವಿಶ್ರೀವತ್ಸ ಅವರು ಪ್ರಜ್ವಲ್ ದೇವರಾಜ್ ಗೊಂದು ಸಿನಿಮಾ ಮಾಡುತ್ತಿದ್ದಾರೆ. ಆ ಸಿನಿಮಾದ ಚಿತ್ರೀಕರಣ ಮುಗಿದ ಬಳಿಕ ಅವರು “ಭೂಗತ ಪುಟಗಳಲ್ಲಿ’ ಚಿತ್ರವನ್ನು ಗೆತ್ತಿಕೊಳ್ಳಲಿದ್ದಾರೆ.
-ಉದಯವಾಣಿ