ತಿಂಗಳ ಹಿಂದೆಯಷ್ಟೇ “ಹಾಫ್ ಮೆಂಟಲ್’ ಚಿತ್ರ ಸುದ್ದಿಯಾಗಿತ್ತು. ಅದಕ್ಕೆ ಕಾರಣ ಆ ಚಿತ್ರದ ನಿರ್ಮಾಪಕ ಶಶಿಕುಮಾರ್ ಆತ್ಮಹತ್ಯೆಗೆ ಯತ್ನಿಸಿದ್ದು. ಈಗ ಮತ್ತೆ ಆ ಚಿತ್ರ ಸುದ್ದಿಯಲ್ಲಿದೆ.
ಈ ಬಾರಿ ಬಿಡುಗಡೆಯ ವಿಷಯದಲ್ಲಿ. ಹೌದು, “ಹಾಫ್ ಮೆಂಟಲ್’ ಎಂಬ ಚಿತ್ರ ಆರಂಭವಾಗಿ ಸುಮಾರು ಎರಡು ವರ್ಷವೇ ಕಳೆದಿದೆ. ಸಂದೀಪ್ ಹಾಗೂ ಸೋನು ನಾಯಕ-ನಾಯಕಿಯಾಗಿರುವ ಈ ಚಿತ್ರವನ್ನು ಲಕ್ಷ್ಮೀ ದಿನೇಶ್ ನಿರ್ದೇಶನ ಮಾಡಿದ್ದಾರೆ. ಕಾರಣಾಂತರಗಳಿಂದ ಚಿತ್ರ
ತಡವಾಗಿತ್ತು. ಈಗ ಬಿಡುಗಡೆಗೆ ಸಿದ್ಧವಾಗಿದ್ದು, ಏಪ್ರಿಲ್ನಲ್ಲಿ ಬಿಡುಗಡೆಯಾಗುತ್ತಿದೆ.
ಈ ಬಾರಿ ಶಶಿಕುಮಾರ್ ಅವರಿಗೆ ಸಿನಿಮಾ ಬಿಡುಗಡೆ ಮಾಡಲು ಸಾಕಷ್ಟು ಮಂದಿ ಸಹಾಯ ಮಾಡಲು ಮುಂದೆ ಬಂದಿದ್ದಾರಂತೆ. ಅದರಲ್ಲಿ ನಾಯಕಿ ಸೋನು ಕೂಡಾ ಒಬ್ಬರು. ಸಾಮಾನ್ಯವಾಗಿ ನಿರ್ಮಾಪಕ ಕಷ್ಟಕ್ಕೆ ಸಿಲುಕಿದರೆ ನಾಯಕಿಯರು ಸಹಾಯಕ್ಕೆ ಬರೋದು ಕಡಿಮೆ ಎಂಬ ಮಾತಿದೆ. ಒಂದು ವೇಳೆ ಬಂದರೂ ಅದು ಕೆಲವೇ ಕೆಲವು ಮಂದಿ. ಈಗ ಸೋನು ನಿರ್ಮಾಪಕರ ಸಹಾಯಕ್ಕೆ ಧಾವಿಸಿ, ಚಿತ್ರ ಬಿಡುಗಡೆಗೂ ಸಹಕರಿಸುತ್ತಿದ್ದಾರಂತೆ. ಸೋನು ಪಡೆದ ಸಂಭಾವನೆಯ ಸ್ವಲ್ಪ ಭಾಗವನ್ನು ನಿರ್ಮಾಪಕರಿಗೆ ಹಿಂದಿರುಗಿಸುವ ಮೂಲಕ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ. ಜೊತೆಗೆ ವಿತರಕ ಬಸವರಾಜು ಹಾಗೂ ಅವರ ಸ್ನೇಹಿತರು ಕೂಡಾ “ಹಾಫ್ ಮೆಂಟಲ್’ ಬಿಡುಗಡೆಯಾಗಲು ಸಾಥ್ ನೀಡುತ್ತಿದ್ದಾರೆ. ತಮ್ಮ ಜಾಹ್ನವಿ ಎಂಟರ್ಪ್ರೈಸಸ್ ನಡಿ ಬಸವರಾಜ್ ಅವರೇ ಈ ಚಿತ್ರವನ್ನು ವಿತರಣೆ ಕೂಡಾ ಮಾಡುತ್ತಿದ್ದಾರೆ.
ತಮ್ಮ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿರುವ ಬಗ್ಗೆ ಮಾತನಾಡುವ ನಿರ್ಮಾಪಕ ಶಶಿಕುಮಾರ್, “ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ. ಆದರೆ ವಿತರಣೆ ಮಾಡಲು ಯಾರೂ ಮುಂದೆ ಬರುತ್ತಿರಲಿಲ್ಲ. ಹಾಡು, ಟ್ರೇಲರ್ ನೋಡುವಷ್ಟು ತಾಳ್ಮೆ ಕೂಡಾ ಯಾರಿಗೂ ಇರಲಿಲ್ಲ. ಬಿಡುಗ ಡೆ ಮಾಡಿಕೊಡಿ ಎಂದು ಕೇಳಿದರೆ ಲಕ್ಷಗಟ್ಟಲೇ ಕಾಸು ಕೇಳುತ್ತಿದ್ದರು. ಎಲ್ಲಿ ಹೋದರೂ ನನಗೆ ಈ ತರಹದ ಅನುಭವವೇ ಆಯಿತು. ನನ್ನಲ್ಲಿ ಅಷ್ಟೊಂದು ಹಣ ಇರಲಿಲ್ಲ. ಹಾಗಾಗಿ ಆತ್ಮಹತ್ಯೆಗೆ ಯತ್ನಿಸಿದೆ. ಈಗ ನನ್ನ ಸ್ನೇಹಿತರು, ವಿತರಕ ಬಸವರಾಜು ಹಾಗೂ ನಾಯಕಿ ಸೋನು ಸೇರಿದಂತೆ ಅನೇಕರು ಸಿನಿಮಾ ಬಿಡುಗಡೆಗೆ ಸಹಾಯ ಮಾಡುತ್ತಿದ್ದಾರೆ. ನಾಯಕಿ ಸೋನು ಹಣಕಾಸಿನ ಸಹಾಯ ಮಾಡಿದ್ದಾರೆ. ಅವರ ಸಹಾಯವನ್ನು ಮರೆಯುವಂತಿಲ್ಲ. ಚಿತ್ರ ಏಪ್ರಿಲ್ ನಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಇಡೀ ತಂಡದ ಶ್ರಮದ ಫಲವಾಗಿ ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ’ ಎನ್ನುವುದು ನಿರ್ಮಾಪಕ ಶಶಿಕುಮಾರ್ ಮಾತು.
-ಉದಯವಾಣಿ