ಎಲ್ಲಾ ಅಂದುಕೊಂಡಂತೆ ಆಗಿದ್ದರೆ “ಶ್ರೀಮನ್ನಾರಾಯಣ’ ಎಂಬ ಚಿತ್ರ ಮಾಡಬೇಕಿತ್ತು ರಿಷಭ್ ಮತ್ತು ರಕ್ಷಿತ್ ಶೆಟ್ಟಿ. ಈಗ ಆ ಪ್ಲಾನ್ನಲ್ಲಿ ದೊಡ್ಡದೊಂದು ಬದಲಾವಣೆ ಆಗಿದೆ. ಆ ಚಿತ್ರವನ್ನು ಮುಂದಕ್ಕೆ ಹಾಕಿ, ಆ ಜಾಗದಲ್ಲಿ ಇನ್ನೊಂದು ಚಿತ್ರ ಮಾಡಲಾಗುತ್ತಿದೆ. ಅದೇ “ಕಿರಿಕ್ ಪಾರ್ಟಿ’. ರಕ್ಷಿತ್ ಈ ಚಿತ್ರದ ಕಥೆಗಾರ, ನಿರ್ಮಾಪಕ ಮತ್ತು ನಾಯಕನಾದರೆ, ರಿಷಭ್ ಈ ಚಿತ್ರದ ನಿರ್ದೇಶಕ. ಇದೇ ತಿಂಗಳ ಆರು ಮತ್ತು ಏಳರಂದು (ಭಾನುವಾರ ಮತ್ತು ಸೋಮವಾರದಂದು) ಚಿತ್ರಕ್ಕೆ ಜಯನಗರದ ನಾಲ್ಕನೇ ಬ್ಲಾಕಿನ ವಿಜಯಾ ಕಾಲೇಜ್ನಲ್ಲಿ ಆಡಿಷನ್ ನಡೆಸಿ, ಇಬ್ಬರು ನಾಯಕಿಯರು ಮತ್ತು ಒಂದಿಷ್ಟು ಹೊಸ ಪ್ರತಿಭೆಗಳನ್ನು ಹೆಕ್ಕಿ ತೆಗೆಯುವ ಪ್ರೋಗ್ರಾಂನ್ನು ರಿಷಭ್ ಮತ್ತು ರಕ್ಷಿತ್ ಜೊತೆಯಾಗಿ ಹಾಕಿಕೊಂಡಿದ್ದಾರೆ.
ಚಿತ್ರದ ಕಥೆಯನ್ನು ಸುಮಾರು ನಾಲ್ಕೈದು ವರ್ಷಗಳ ಹಿಂದೆ ಮಾಡಿಟ್ಟುಕೊಂಡಿದ್ದರಂತೆ ರಕ್ಷಿತ್. ಆದರೆ, ಅದ್ಯಾಕೋ ಒಂದು ಹಂತದಲ್ಲಿ ಚಿತ್ರ ಮಾಡೋದು ಬೇಡ ಎಂದು ತೀರ್ಮಾನಿಸಿ, ಅದನ್ನು ಪಕ್ಕಕ್ಕಿಟ್ಟಿದ್ದು ಆಗಿದೆ. ಆದರೆ, ಈ ಕಥೆ ಇಷ್ಟವಾಗಿದ್ದ ರಿಷಭ್ ಮಾತ್ರ, “ನಂಗೆ ಕೊಡು ಮಾರಾಯ ಸಿನ್ಮಾ ಮಾಡ್ತೀನಿ …’ ಅಂದಿದ್ದರಂತೆ. ಅದರಂತೆ ರಕ್ಷಿತ್, ಆ ಕಥೆಯನ್ನು ತಮ್ಮ ಸ್ನೇಹಿತನಿಗೆ ಕೊಟ್ಟು ತಾವು ನಿರ್ಮಾಪಕ ಮತ್ತು ನಾಯಕನಾದರೆ, ರಿಷಭ್ ನಿರ್ದೇಶಿಸುತ್ತಿದ್ದಾರೆ. ಇನ್ನು ಅವರ ಸೆವೆನ್ ಆಡ್ಸ್ ತಂಡವು ಚಿತ್ರಕಥೆಯನ್ನು ಮಾಡಿದೆ.
ಈ ಚಿತ್ರದಲ್ಲಿ “ಉಳಿದವರು ಕಂಡಂತೆ’ ಟೀಮ್ ರಿಪೀಟ್ ಆಗುತ್ತಿದೆಯಂತೆ. ಆ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದ ಕರಮ್ ಚಾವ್ಲಾ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ಸಂಕಲನಕಾರ ಸಚಿನ್ ಇಲ್ಲೂ ಮುಂದುವರೆಯಲಿದ್ದಾರೆ. ಇನ್ನು ಸಿಂಪಲ್ ಸುನಿ, ಧನಂಜಯ್ ಮತ್ತು ಅಭಿಜಿತ್ ಎನ್ನುವವರು ಸೇರಿ ಚಿತ್ರಕ್ಕೆ ಸಂಭಾಷಣೆಗಳನ್ನು ರಚಿಸುತ್ತಿದ್ದಾರೆ. ಇಂಜಿನಿಯರಿಂಗ್ ವಿದ್ಯಾರ್ಥಿಗಳ ತರಲೆ ಮತ್ತು ತಮಾಷೆಗಳೇ ಈ ಚಿತ್ರದ ಕಥೆಯಂತೆ. “ಫೀಲ್ ಗುಡ್ ಸಿನಿಮಾ ಅಂತಾರಲ್ಲ, ಆ ತರಹದ ಸಿನಿಮಾ ಇದು. “ಉಳಿದವರು ಕಂಡಂತೆ’ಯಂತಹ ಗಂಭೀರವಾದ ಚಿತ್ರವನ್ನು ಕೊಟ್ಟ ತಂಡದಿಂದ ಒಂದು ಮನರಂಜಿಸುವ ಪ್ರಯತ್ನ ಇದು’ ಎನ್ನುತ್ತಾರೆ ರಿಷಭ್.
ಆಡಿಷನ್ ಬೆಳಿಗ್ಗೆ ಒಂಭತ್ತರಿಂದ ಸಂಜೆ ಆರರವರೆಗೂ ವಿಜಯ ಕಾಲೇಜ್ನಲ್ಲಿ ನಡೆಯಲಿದೆ. 20ರಿಂದ 30ರವರ್ಷದವರೆಗಿನ ಹೊಸಮುಖಗಳನ್ನು ಈ ಸಂದರ್ಭದಲ್ಲಿ ಆಯ್ಕೆ ಮಾಡಲಾಗುತ್ತಿದೆ.
-ಉದಯವಾಣಿ