ಬೆಂಗಳೂರು: ‘ಕಿಲ್ಲಿಂಗ್ ವೀರಪ್ಪನ್’ ಸಿನೆಮಾ ಬಿಡುಗಡೆಯ ಅಡಚಣೆಗಳು ಕೊನೆಗೂ ನಿವಾರಣೆಯಾಗುವ ಲಕ್ಷಣಗಳು ಕಾಣುತ್ತಿವೆ. ವೀರಪ್ಪನ್ ಅವರ ಪತ್ನಿ ‘ಕಿಲ್ಲಿಂಗ್ ವೀರಪ್ಪನ್’ ನಿರ್ಮಾಪಕರೊಂದಿಗೆ ತಮ್ಮ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡಿದ್ದು, ನಿರ್ಮಾಪಕರು ಮುತ್ತುಲಕ್ಷ್ಮಿಗೆ ಹಣ ನೀಡಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲವಾದರೂ ಗಾಂಧಿನಗರದ ಮೂಲಗಳ ಪ್ರಕಾರ “ಮುತ್ತುಲಕ್ಷ್ಮಿ ಅವರಿಗೆ ಒಳ್ಳೆಯ ಹಣ ನೀಡಲಾಗಿದೆ. ಈಗ ಸಿನೆಮಾ ಬಿಡುಗಡೆಗೆ ಅವರು ಹಸಿರು ನಿಶಾನೆ ತೋರಲಿದ್ದಾರೆ” ಎನ್ನುತ್ತವೆ.
ಈ ಹಿಂದೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ೨೦೦೬ರಲ್ಲಿ ಮುತ್ತುಲಕ್ಷ್ಮಿ ಅವರೊಂದಿಗೆ ಮಾಡಿಕೊಂಡಿದ್ದ ಒಪ್ಪಂದದ ಪ್ರಕಾರ ಸಿನೆಮಾ ಹಿಂದಿಯಲ್ಲಿ ನಿರ್ಮಾಣಗೊಂಡು ತಮಿಳಿನಲ್ಲಿ ಡಬ್ ಆಗಲಿದೆ ಎಂದಿತ್ತಂತೆ, ಆದರೆ ಈಗ ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣವಾಗಿರುವುದರಿಂದ ಮುತ್ತುಲಕ್ಷ್ಮಿ ಕೋರ್ಟ್ ಮೂಲಕ ಸಿನೆಮಾ ಬಿಡುಗಡೆಗೆ ತಡೆ ತಂದಿದ್ದರು. ಆದುದರಿಂದ ಮೊದಲಿಗೆ ದೀಪಾವಳಿ ಸಮಯಕ್ಕೆ ನಂತರ ಡಿಸೆಂಬರ್ ಮೊದಲ ವಾರದಲ್ಲಿ ಬಿಡುಗಡೆಯಾಗಬೇಕಿದ್ದ ಸಿನೆಮಾ ಮುಂದೂಡಲಾಗಿತ್ತು.
ಈಗ ಸೆನ್ಸಾರ್ ಮಂಡಲಿ ಶುಕ್ರವಾರ ಸಿನೆಮಾ ವೀಕ್ಷಿಸಲಿದ್ದು ಎಲ್ಲವೂ ಸುಸೂತ್ರವಾಗಿ ಮುಂದುವರೆದರೆ ಡಿಸೆಂಬರ್ ೧೧ಕ್ಕೆ ಸಿನೆಮಾ ಬಿಡುಗಡೆಯಾಗುವ ಸಾಧ್ಯತೆ ಇದೆ. ಈಗ ಶಿವರಾಜ್ ಕುಮಾರ್ ಅಭಿನಯದ ‘ಶಿವಲಿಂಗ’ ಕೂಡ ಸೆನ್ಸಾರ್ ಮಂಡಲಿ ಸಮ್ಮತಿಗೆ ಕಾಯುತ್ತಿದು ಅದು ಕೂಡ ಡಿಸೆಂಬರ್ ೧೧ ಕ್ಕೆ ಬಿಡುಗಡೆಗೆ ನಿಗದಿಯಾಗಿದೆ.