ಬಹುಶಃ ಅದೊಂದು ಬಿಗ್ ಬಾಸ್ಕಾರ್ಯಕ್ರಮದಲ್ಲಿ ಮಾಧುರಿ ಇಟಗಿ ಭಾಗವಹಿಸದಿದ್ದರೆ, ಅವರ ನೆನಪೇ ಇರುತ್ತಿರಲಿಲ್ಲವೇನೋ ಕನ್ನಡಿಗರಿಗೆ. ಏಕೆಂದರೆ, ಮಾಧುರಿ ಅಭಿನಯದ ಚಿತ್ರವೊಂದು ಬಿಡುಗಡೆಯಾಗಿ ಶ್ಯಾನೆ ದಿನಗಳೇ ಆಗಿವೆ. ಈ ಮಧ್ಯೆ ಯಾವುದೋ ಒಂದು ಗಲಾಟೆಯಲ್ಲಿ ಅವರ ಹೆಸರು ಕೇಳಿ ಬಂದಿದ್ದು ಬಿಟ್ಟರೆ, ಮಿಕ್ಕಂತೆ ಮಾಧುರಿ ಅವರ ಹೆಸರು ಇತ್ತೀಚೆಗೆ ಕೇಳಿ ಬಂದಿದ್ದು ಕಡಿಮೆಯೇ. ಹಾಗಾಗಿ ಅವರನ್ನು ಪುನಃ ನೆನಪಿಸಿದ ಖ್ಯಾತಿ ಬಿಗ್ಬಾಸ್ಗೆ ಸಲ್ಲುತ್ತದೆ.
ಬಿಗ್ಬಾಸ್ ಮನೆಗೆ ಹೋಗುವಾಗ ಮಾಧುರಿ ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದರು. ಅವರು ಆ ಕಾರ್ಯಕ್ರಮದಲ್ಲಿ ಗೆಲ್ಲಬಹುದು ಎಂಬ ನಂಬಿಕೆ ಯಾರಿಗೂ ಇಲ್ಲದಿದ್ದರೂ, ಮಾಧುರಿ ಇಷ್ಟು ಬೇಗ ವಾಪಸು ಬರಬಹುದು ಎಂದು ಯಾರೆಂದರೆ ಯಾರೂ ನಿರೀಕ್ಷಿಸಿರಲಿಲ್ಲವೇನೋ. ಆ ಎಲ್ಲಾ ನಿರೀಕ್ಷೆಗಳನ್ನು ಸುಳ್ಳು ಮಾಡಿ, ಮಾಧುರಿ ಜಲ್ದಿ ವಾಪಸು ಬಂದಿದ್ದಾರೆ.
ಇಷ್ಟಕ್ಕೂ ಮಾಧುರಿ ಅಷ್ಟು ಬೇಗ ವಾಪಸು ಬಂದಿದ್ದರ ಕಾರಣವೇನಿರಬಹುದು? ಎಂಬ ಪ್ರಶ್ನೆಗೆ ಮಾಧುರಿ ಉತ್ತರವನ್ನು ಕಂಡುಕೊಂಡಿದ್ದಾರೆ. ಮನೆಯಲ್ಲಿರುವ ಜನ ತಮ್ಮನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದಿರುವ ಕಾರಣ ವಾಪಸು ಬರಬೇಕಾಯಿತು ಎಂದು ಮಾಧುರಿ ಕಂಡುಕೊಂಡಿದ್ದಾರೆ. “ನಾನು ಬಿಗ್ಬಾಸ್ ಮನೆಗೆ ಹೋದ ದಿನ, ನನಗೆ ತುಂಬಾನೇ ಹುಷಾರಿರಲಿಲ್ಲ. ಹಾಗಾಗಿ ಎಲ್ಲರ ಜೊತೆಗೆ ಬೆರೆಯಲಾಗಲಿಲ್ಲ. ಅದನ್ನು ಆ್ಯಟಿಟ್ಯೂಡ್ ಅಥವಾ ಇಗೋ ಸಮಸ್ಯೆ ಇರಬಹುದು ಎಂದು ತಪ್ಪಾಗಿ ಅರ್ಥ ಮಾಡಿಕೊಂಡಿರುವ ಸಾಧ್ಯತೆ ಇದೆ. ಹಾಗಾಗಿ ನನ್ನ ವಿರುದ್ಧ ಎಲ್ಲರೂ ವೋಟ್ ಮಾಡಿರಬಹುದು. ನಾನು ಹುಷಾರಾಗಿ ಎಲ್ಲರೊಂದಿಗೆ ಖುಷಿಯಿಂದ ಬೆರೆಯಬೇಕು ಎನ್ನುವಷ್ಟರಲ್ಲಿ ಎಲಿಮಿನೇಟ್ ಆಗಿಬಿಟ್ಟಿದ್ದೆ. ಅದೇ ಕಾರಣಕ್ಕೆ ನಾನು ಬಹಳ ಬೇಗ ಬರಬೇಕಾಯಿತು. ನಾನು ಬರುವಷ್ಟರಲ್ಲಿ ನನ್ನ ಬಗ್ಗೆ ಹಲವರಿಗೆ ಅರ್ಥವಾಗಿತ್ತು. ಅವರೆಲ್ಲ ಬಂದು ನನ್ನನ್ನ ಆತ್ಮೀಯವಾಗಿ ಬೀಳ್ಕೊಟ್ಟರು’ ಎನ್ನುತ್ತಾರೆ ಮಾಧುರಿ.
ಮಾಧುರಿ ಹೇಳುವಂತೆ ಅವರು ಇರುವಷ್ಟು ದಿನವೂ ಯಾವತ್ತೂ ಮುಖವಾಡ ಹಾಕಿ ಬದುಕಲಿಲ್ಲವಂತೆ. ಮುಖವಾಡ ತೊಡದ ಮಾಧುರಿ ಬಿಗ್ಬಾಸ್ ಮನೆಯಿಂದ ತಮ್ಮ ಮನೆಗೆ ಒಂದೇ ವಾರಕ್ಕೆ ಬಂದಿದ್ದಾರೆ. ಮುಂದೇನು? ಎಂದು ಅವರಿಗೆ ಗೊತ್ತಿಲ್ಲ. ಏಕೆಂದರೆ, ಸದ್ಯಕ್ಕಂತೂ ಮಾಧುರಿ ಯಾವ ಚಿತ್ರದಲ್ಲೂ ನಟಿಸುತ್ತಿಲ್ಲ. ನಟಿಸಿರುವ ಲವ್ಆನ್ ಎನ್.ಎಚ್ 4 ಎಂಬ ಚಿತ್ರ ಬಿಡುಗಡೆಯಾಗಿಲ್ಲ. ಬಹುಶಃ ಅವರು ಇನ್ನೊಮ್ಮೆ ಯಾವಾಗಾದರೂ ಸದ್ದಿಲ್ಲದೆ ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟರೆ ಅದರಲ್ಲಿ ಆಶ್ಚರ್ಯವಿಲ್ಲ.
-ಉದಯವಾಣಿ