ಲಕ್ನೋ: ಮೊಬೈಲ್ ಫೋನ್ ಕರೆಗಳು ಕದ್ದಾಲಿಕೆಯಾಗುವ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷದ ನಾಯಕರು ಮೊಬೈಲ್ ಬಳಸದಂತೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಎಚ್ಚರಿಕೆ ನೀಡಿದ್ದಾರೆ.
ಕಳೆದ ಜುಲೈ ತಿಂಗಳಲ್ಲಿ ಹಿರಿಯ ಐಪಿಎಸ್ ಅಧಿಕಾರಿ ಅಮಿತಾಬ್ ಠಾಕೂರ್ಗೆ ಬೆದರಿಕೆ ಕರೆ ಹಾಕಿದ ಆರೋಪ ಎದುರಿಸುತ್ತಿರುವ ಮುಲಾಯಂ, ಕರೆಗಳು ಕದ್ದಾಲಿಕೆಯಾಗುತ್ತಿರಬಹುದು ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.
ಸಭೆಗಳಲ್ಲಿದ್ದಾಗ ಅಥವಾ ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿದಾಗ ಮಾತ್ರ ಮೊಬೈಲ್ ಬಳಸುತ್ತೇನೆ. ಇಲ್ಲವಾದಲ್ಲಿ ನಾನು ಮೊಬೈಲ್ ಬಳುಸುವುದಿಲ್ಲ ಎಂದು ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದಾರೆ.
ರಾಜಕಾರಣಿಗಳು ಮೊಬೈಲ್ ಬಳುವುದನ್ನು ಕಡಿಮೆ ಮಾಡಬೇಕು. ಮೊಬೈಲ್ ಕರೆಗಳಿಂದ ಹಲವು ಅನಾಹುತಗಳಾಗುತ್ತಿವೆ. ಕದ್ದಾಲಿಕೆ ಕೂಡಾ ನಡೆಯಬಹುದು. ಆದ್ದರಿಂದ ಎಚ್ಚರಿಕೆಯಿಂದಿರಬೇಕು ಎಂದು ಸಲಹೆ ನೀಡಿದರು.
ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಕೆಲ ತಿಂಗಳುಗಳ ಹಿಂದೆ ಐಪಿಎಸ್ ಅಧಿಕಾರಿ ಅಮಿತಾಬ್ ಠಾಕೂರ್ಗೆ ಕರೆ ಮಾಡಿ, ಆದೇಶಗಳನ್ನು ಪಾಲಿಸದಿದ್ದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಠಾಕೂರ್ ಮುಲಾಯಂ ಕರೆಯನ್ನು ರಿಕಾರ್ಡಿಂಗ್ ಮಾಡಿ ನಂತರ ಬಿಡುಗಡೆಗೊಳಿಸಿ ಪೊಲೀಸರಿಗೆ ಒಪ್ಪಿಸಿದ್ದರು.