ಕೆಲ ತಿಂಗಳ ಹಿಂದಷ್ಟೇ ‘ಗೂಳಿಹಟ್ಟಿ’ ಸಿನಿಮಾ ಬಿಡುಗಡೆಯಾಗಿದ್ದು ಗೊತ್ತೇ ಇದೆ. ತೆರೆಕಂಡ ಮರುದಿನವೇ ಆ ಚಿತ್ರದ ನಾಯಕ ಪವನ್ ಸೂರ್ಯ ಮತ್ತು ನಾಯಕಿ ತೇಜಸ್ವಿನಿ ಪ್ರಕಾಶ್ ಹಾದಿ ಬೀದಿ ಕಿತ್ತಾಟ ನಡೆಸಿದ್ದರು. ಅದ್ಯಾವ ಪರಿ ಎಂದರೆ, ಪವನ್ ವಿರುದ್ಧವೇ ತೇಜು ಪೊಲೀಸರಿಗೆ ದೂರು ನೀಡಿದ್ದರು. ‘ಪವನ್ ನನ್ನ ಮನೆಗೆ ಬಂದು ಕೂಗಾಡಿದ್ದಾರೆ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ಅಲವತ್ತುಕೊಂಡಿದ್ದರು. ಅತ್ತ ಪವನ್ ಕೂಡ ‘ಚಿತ್ರದ ಪ್ರಚಾರಕ್ಕೆ ತೇಜಸ್ವಿನಿ ಸಹಕಾರ ನೀಡದಿರುವುದು ಬೇಸರ ತರಿಸಿದೆ. ಆದರೆ ನಾನು ಅವರ ಮನೆಗೆ ಹೋಗಿಯೇ ಇಲ್ಲ’ ಎಂದೆಲ್ಲ ತಿರುಗೇಟು ನೀಡಿದ್ದರು.
ಸದ್ಯ ಆ ಬಗ್ಗೆ ಪುನಃ ಮಾತನಾಡಲು ಕಾರಣವಿದೆ. ಇದೇ ‘ಕಿರಿಕ್’ ಜೋಡಿ ಮತ್ತೆ ಒಂದಾಗಿದೆ; ‘ಅತಿರಥ’ ಚಿತ್ರದ ಮೂಲಕ! ಮೊನ್ನೆಯಷ್ಟೇ ಜಗಳ ಮಾಡಿಕೊಂಡಿದ್ದವರು ಅದಾಗಲೇ ಮತ್ತೆ ಒಂದಾಗಿದ್ದಾರೆ ಎಂಬುದು ಅಚ್ಚರಿ. ‘ಸರಿ, ಆಗ ಯಾಕೆ ಹಾಗೆ ಮಾಡಿದ್ದಿರಿ’ ಎಂದು ತೇಜುಗೆ ಕೇಳಿದರೆ, ‘ಅದೇನೋ ಆ ಪರಿಸ್ಥಿತಿ ಹಾಗಿತ್ತು. ಸಣ್ಣಪುಟ್ಟ ಮನಸ್ಥಾಪಗಳು ಮಾಮೂಲಿ. ಅದನ್ನೇ ಮುಂದುವರೆಸಿಕೊಂಡು ಹೋಗುವುದು ಸರಿಯಲ್ಲ. ದ್ವೇಷ ಸಾಧಿಸುವುದರಿಂದ ಆಗುವ ಲಾಭವಾದರೂ ಏನು’ ಎಂದು ಮರುಪ್ರಶ್ನೆ ಎಸೆಯುತ್ತಾರೆ.
ತೇಜು ಏನೇ ಸಮರ್ಥನೆ
ನೀಡಿದರೂ ಅಸಲಿಯತ್ತು ಬೇರೆಯೇ ಇದೆ ಎನ್ನುತ್ತಿವೆ ಮೂಲಗಳು. ಗಾಂಧಿನಗರದ ಮಂದಿಯ ಗುಸುಗುಸು ಪ್ರಕಾರ, ಇವರು ಕಿರಿಕ್ ಮಾಡಿಕೊಂಡಿದ್ದು ಕೂಡ ಒಂದು ಬಗೆಯ ಪ್ರಚಾರದ ಗಿಮಿಕ್ ಅಷ್ಟೇ. ‘ಗೂಳಿಹಟ್ಟಿ’ಯನ್ನು ಸುದ್ದಿಯಲ್ಲಿಡುವ ಯೋಜನೆ ಅದಾಗಿತ್ತಂತೆ!!